ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಯಲ್ಲೂ ತೋಟವು ಹಚ್ಚ ಹಸಿರಿನಿಂದ ಕೂಡಿರುವುದರಿಂದ ಇಲ್ಲಿಗೆ ಬರುವ ಸ್ಥಳೀಯರು ಮನ ತಣಿಸಿಕೊಳ್ಳುತ್ತಾರೆ
ಪ್ರಲ್ಹಾದರೆಡ್ಡಿ ಮಾದಿನಾಳ ಕನಕಗಿರಿ
ನಾಲ್ಕು ಎಕರೆ ಭೂಮಿಯಲ್ಲಿ ಹಣ್ಣಿನ ಗಿಡ, ಕೋಳಿ, ಹಸು ಸಾಕಾಣಿಕೆ ಜತೆಗೆ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಪಟ್ಟಣದ ಸ್ನಾತಕೋತ್ತರ (ಎಂಎ) ಪದವಿ ಮುಗಿಸಿದ ಯುವ ರೈತನ ಕೃಷಿ ಕಾಯಕ ಮಾದರಿಯಾಗಿದ್ದು, ಇದು ಯುವ ಸಮೂಹಕ್ಕೆ ಸ್ಫೂರ್ತಿದಾಯಕವಾಗಿದೆ.ಹೌದು, ಬಂಕಾಪುರ ಗ್ರಾಮದ ಯುವ ರೈತ ಸಂಜೀವ ಪೂಜಾರ ಸ್ನಾತಕೋತ್ತರ ಪದವಿ ಮುಗಿಸಿದ್ದು, ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ ಹೊಂದಿರುವುದರಿಂದ ಶಿಕ್ಷಕ ವೃತ್ತಿಯಲ್ಲಿರುವ ಅಣ್ಣ ವೆಂಕೋಬ ಪೂಜಾರ ಸಲಹೆ ಮೇರೆಗೆ ತನ್ನ ಹೊಲದಲ್ಲಿ ತೆಂಗು, ದಾಳಿಂಬೆ, ನಿಂಬೆ, ಪಪ್ಪಾಯಿ ಸೇರಿದಂತೆ ನಾನಾ ಹಣ್ಣಿನ ಗಿಡ ಬೆಳೆದಿದ್ದಾನೆ.
ಇನ್ನು ಜಮೀನಿನ ಬದಿಯಲ್ಲಿ ನಾನಾ ಬಗೆಯ ಹಣ್ಣಿನ ಗಿಡ ಬೆಳೆಯುವ ಈ ಯುವ ರೈತನು ಉಳಿದ ಭೂಮಿಯಲ್ಲಿ ಮೆಕ್ಕೆಜೋಳ, ಹತ್ತಿ, ತೊಗರಿ ಸೇರಿದಂತೆ ವಿವಿಧ ರೀತಿಯ ಬೆಳೆ ಬೆಳೆಯುತ್ತಾನೆ. ಹೀಗೆ ಹಲವು ವರ್ಷಗಳಿಂದ ವರ್ಷಕ್ಕೆರೆಡು ಬೆಳೆಯಂತೆ ನಾನಾ ಬೆಳೆ ಬೆಳೆಯುತ್ತಿದ್ದು, ಇನ್ನೊಂದೆಡೆ ಕೋಳಿ, ಹಸು ಸಾಕಾಣಿಯೂ ಮಾಡುತ್ತಿದ್ದು, ಹೈನುಗಾರಿಕೆಗೂ ಆದ್ಯತೆ ನೀಡಿರುವ ಯುವ ರೈತ ಸಂಜೀವನ ಕೃಷಿ ಪ್ರೇಮ ಹಾಗೂ ಶ್ರಮವು ಸೈ ಎನಿಸಿಕೊಳ್ಳುವಂತಿದೆ.ಈ ಜಮೀನು ಪಟ್ಟಣದಿಂದ ಕೂಗಳತೆ ದೂರದಲ್ಲಿರುವುದರಿಂದ ಇಲ್ಲಿಗೆ ಹೆಚ್ಚು ಜನ ಬರುತ್ತಾರೆ. ಮಳೆಗಾಲ, ಚಳಿಗಾಲ ಹಾಗೂ ಬೇಸಿಗೆಯಲ್ಲೂ ತೋಟವು ಹಚ್ಚ ಹಸಿರಿನಿಂದ ಕೂಡಿರುವುದರಿಂದ ಇಲ್ಲಿಗೆ ಬರುವ ಸ್ಥಳೀಯರು ಮನ ತಣಿಸಿಕೊಳ್ಳುತ್ತಾರೆ. ಇನ್ನೂ ಬೇಸಿಗೆ ದಿನಗಳಲ್ಲಿ ಹೆಚ್ಚು ತಣ್ಣಗಿರುವುದರಿಂದಲೂ ಇಲ್ಲಿಗೆ ವಾಯು ವಿಹಾರಕ್ಕೆಂದು ಬರುವವರಿಗೂ ಈ ಸ್ಥಳ ಆಸರೆಯಾಗಿದೆ. ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಹಳ್ಳಿ ಜನರು ಈ ಜಮೀನು ಪೂಜಾರ ತೋಟವೆಂದು ಖ್ಯಾತಿಯಾಗಿದೆ.
ಸ್ನಾತಕೋತ್ತರ ಪದವಿ ಮುಗಿಸಿರುವ ಸಂಜೀವ ಪೂಜಾರ ಕೃಷಿ ಮೇಲಿನ ಅಭಿಮಾನ, ಪ್ರೀತಿ ಯಾವತ್ತೂ ಕಮ್ಮಿಯಾಗಿಲ್ಲ. ಯಾವ ಗಿಡ ಮತ್ತು ಪ್ರಾಣಿ ಹೇಗೆ ಬೆಳೆಸಿ ಪೋಷಿಸಬೇಕೆನ್ನುವುದನ್ನು ಸಂಜೀವ ನಿಪುಣತೆ ಹೊಂದಿರುವುದರಿಂದ ಈ ಯುವ ರೈತನ ಬಳಿಗೆ ಹಲವು ರೈತರು ಬಂದು ಬೆಳೆ ಬೆಳೆಯಬೇಕೆನ್ನುವ ವಿಧಾನದ ಮಾಹಿತಿ ಪಡೆಯುತ್ತಾರೆ.ಶಾಲಾ-ಕಾಲೇಜಿಗೆ ಹೋಗುವಾಗ ಹೆಚ್ಚು ಸಮಯ ತೋಟದಲ್ಲಿಯೇ ಕಳೆದಿರುವೆ. ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವುದಕ್ಕಿಂತ ತೋಟದಲ್ಲಿ ಕೃಷಿ ಮಾಡುವುದು ಉತ್ತಮ ಎಂದು ಭಾವಿಸಿ ಕೃಷಿ ಮಾಡುತ್ತಿದ್ದೇನೆ. ಅಣ್ಣನ ಪ್ರೇರಣಿಯಿಂದ ಮೊದಲು ಹಣ್ಣಿನ ಬೆಳೆ ಆರಂಭಿಸಿದೆ. ನಂತರ ಹಸು, ಕೋಳಿ ಸಾಕಾಣಿಕೆ ಮಾಡಿದ್ದು, ಯಶಸ್ಸು ಕಂಡಿದ್ದೇನೆ. ತಂದೆ, ತಾಯಿ ಕಲಿಸಿದ ಈ ಮೇಟಿ ವಿದ್ಯೆ ನನ್ನನ್ನು ಜನಮುಖಿಯಾಗಿಸಿದೆ ಎಂದು ಪದವಿ ಮುಗಿಸಿದ ರೈತ ಸಂಜೀವ ಪೂಜಾರ ತಿಳಿದ್ದಾರೆ.
