ಕೊಪ್ಪಳ: ಒಂದು ಕಾಲದಲ್ಲಿ ಬೂತ್ ಮಟ್ಟದ ಏಜೆಂಟರೇ ಇಲ್ಲದಂತೆ ಇದ್ದ ಬಿಜೆಪಿ ಈಗ ವಿಶ್ವದಲ್ಲಿಯೇ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಇಂಥ ಪಕ್ಷ ಕಟ್ಟಿ ಬೆಳೆಸಿದ್ದೇ ಕಾರ್ಯಕರ್ತರು ಎಂದು ಬಳ್ಳಾರಿ ವಿಭಾಗ ಮಟ್ಟದ ಪ್ರಭಾರಿ ಹಾಗೂ ವಿಪ ಮಾಜಿ ಸದಸ್ಯ ಅಮರನಾಥ ಪಾಟೀಲ್ ಹೇಳಿದ್ದಾರೆ.
ಬಿಜೆಪಿ ಮುಖಂಡ ಬಸವರಾಜ ಕ್ಯಾವಟರ್ ಮಾತನಾಡಿ, ಬಿಜೆಪಿಯಲ್ಲಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಇಂಥ ಪಕ್ಷದಲ್ಲಿ ಗುರುತಿಸಿಕೊಳ್ಳಲು ಪೈಪೋಟಿ ಇರುವಂತಾಗಿದೆ. ಇದು ದೇಶ ಸೇವಕರನ್ನು ಹೊಂದಿದ ಪಕ್ಷವಾಗಿದೆ. ಬಿಜೆಪಿ ಹುಟ್ಟು ಹಾಕಿದವರ ದೂರದೃಷ್ಟಿ ನಿಜಕ್ಕೂ ಶ್ಲಾಘನೀಯ ಎಂದರು.
ಶ್ಯಾಮ ಪ್ರಸಾದ ಮುಖರ್ಜಿ, ದೀನದಯಾಳ, ಅಟಲ್ ಬಿಹಾರ ವಾಜಪೇಯಿ ಅವರ ನಾಯಕತ್ವ, ಲಾಲ್ಕೃಷ್ಣ ಆಡ್ವಾಣಿ ಅವರ ಹೋರಾಟ, ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ಷಮತೆಯಿಂದ ಪಕ್ಷ ಈ ಮಟ್ಟದ ವರೆಗೆ ಬೆಳೆದಿದೆ. ಬಿಜೆಪಿ ಕಾರ್ಯಕರ್ತರು ಎಂದು ಹೇಳುವುದೇ ನಮಗೆ ದೊಡ್ಡ ಹೆಮ್ಮೆ ಎಂದರು.ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಹಲವರ ತ್ಯಾಗ- ಬಲಿದಾನದಿಂದ ಬಿಜೆಪಿ ದೃಢವಾಗಿ ಬೆಳೆದು ಬಂದು ನಿಂತಿದ್ದು, ಶಕ್ತಿಯುತವಾಗಿರುವ ಪಕ್ಷದ ಕಾರ್ಯಕರ್ತರು ಅದಕ್ಕಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಬಿಜೆಪಿಯಲ್ಲಿರುವ ನಾವೆಲ್ಲರೂ ಹೆಮ್ಮೆಪಡುವ ದಿನ ಇದಾಗಿದೆ ಎಂದರು.
ಮುಖಂಡರಾದ ಮಹಾಂತೇಶ ಮೈನಳ್ಳಿ, ಬಸವಲಿಂಗಪ್ಪ ಭೂತೆ, ಅಪ್ಪಣ್ಣ ಪದಕಿ, ಅರವಿಂದಗೌಡ ಪಾಟೀಲ್, ರತ್ನಾಕುಮಾರಿ, ವಿ.ಎಸ್. ಭೂಸನೂರಮಠ, ರಾಘವೇಂದ್ರ ಪಾನಗಂಟಿ, ಎಂ.ಬಿ. ಅಳವಂಡಿ, ಚಂದ್ರಶೇಖರ ಪಾಟೀಲ್ ಹಲಗೇರಿ, ನೀಲಕಂಠಯ್ಯ ಹಿರೇಮಠ, ವೀರೇಶ ಸಜ್ಜನ, ಕಳಕಪ್ಪ, ಅಶೋಕ, ರಾಜು ಬಾಕಳೆ, ವಾಣಿಶ್ರೀ ಮಠದ, ರಮೇಶ ನಾಡಿಗೇರ್, ಕರಿಯಪ್ಪ ಮೇಟಿ ಇದ್ದರು.