ಯಲಬುರ್ಗಾ: ತಾಲೂಕಿನ ಜಿ. ಜರಕುಂಟಿ ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ತಡೆಗಟ್ಟುವಂತೆ ಒತ್ತಾಯಿಸಿ ಗ್ರಾಮದ ಮುಖಂಡರು, ನೂರಾರು ಮಹಿಳೆಯರು ಪಟ್ಟಣದ ಶ್ರೀಧರ ಮುರಡಿ ಹಿರೇಮಠದ ಶ್ರೀ ಬಸವಲಿಂಗೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನ ಆವರಣದಲ್ಲಿ ಮೌನ ಪ್ರತಿಭಟನೆ ನಡೆಸಿದರು.
ಪೊಲೀಸ್ ಹಾಗೂ ಅಬಕಾರಿ ಇಲಾಖೆಗಳ ಅಧಿಕಾರಿಗಳು ಕಾಟಾಚಾರಕ್ಕೆ ದಾಳಿ ನಡೆಸಿ ಕೈತೊಳೆದುಕೊಳ್ಳುತ್ತಿದ್ದಾರೆ. ಪೊಲೀಸ್ ಹಾಗೂ ಅಬಕಾರಿ ಇಲಾಖೆಯ ಅಧಿಕಾರಿಗಳ ಕೃಪಾಕಟಾಕ್ಷದಿಂದಲೇ ಮದ್ಯ ಮಾರಾಟವಾಗುತ್ತಿದೆ. ಅಕ್ರಮ ಮದ್ಯ ಮಾರಾಟ ಜಾಲ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ಗ್ರಾಮದ ಮಹಿಳೆಯರು ತಮ್ಮ ಅಳಲನ್ನು ಸ್ವಾಮೀಜಿಗಳ ಮುಂದೆ ತೋಡಿಕೊಂಡರು. ಮದ್ಯ ಮಾರಾಟದಿಂದ ಗ್ರಾಮದಲ್ಲಿ ಅಹಿತಕರ ಘಟನೆಗಳು ನಡೆದರೆ ತಾಲೂಕು ಆಡಳಿತವೇ ಹೊಣೆ ಹೊರಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಪ್ರತಿಜ್ಞೆ: ಕೆಲವು ಮದ್ಯವ್ಯಸನಿಗಳು ಹಾಗೂ ಮದ್ಯ ಮಾರಾಟಗಾರರು ಸ್ವಾಮೀಜಿಗಳ ಪಾದ ಮುಟ್ಟಿ ಇನ್ನು ಕುಡಿಯುವುದಾಗಲಿ, ಮಾರುವುದಾಗಲಿ ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಇನ್ನು ಕೆಲವರು ಪ್ರತಿಜ್ಞೆ ಮಾಡದೇ ಪಲಾಯನ ಮಾಡಿದರು.ಗ್ರಾಮಸ್ಥರ ನೋವನ್ನು ಮುಕ್ತವಾಗಿ ಆಲಿಸಿದ ಸ್ವಾಮೀಜಿ, ಯುವಕರು ಮದ್ಯ ಸೇವನೆ ಮಾಡಿ ಜೀವನ ಹಾಳು ಮಾಡಿಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ ಎಂದು ಹೇಳಿದರು. ಮದ್ಯ ಸೇವನೆಯಿಂದಾಗುವ ಕೌಟುಂಬಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಬಗ್ಗೆ ಗ್ರಾಮದ ಯುವಕರಿಗೆ ಮನವರಿಕೆ ಮಾಡಿದರು.