ಕನ್ನಡಪ್ರಭ ವಾರ್ತೆ ರಾಮನಗರ
ನಗರದ ಆರ್ ವಿಸಿಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಬಿಜೆಪಿ ಮಂಡಲವಾರು ಸಭೆಯಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈನ್ ಆಡಿದ ಮಾತಿನಿಂದ ಕೆರಳಿದ ಮುಖಂಡ ಗೌತಮ್ ಗೌಡ ಅವರ ಬೆಂಬಲಿಗರು ಅವರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಿದರು. ಈ ಗಲಾಟೆ ದೃಶ್ಯ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ.
ಸಭೆಯ ಆರಂಭದಲ್ಲಿ ರಾಜ್ಯ ಬಿಜೆಪಿ ಮಹಿಳಾ ಕಾರ್ಯದರ್ಶಿ ಪೂರ್ಣಿಮಾರವರು, ಜಿಲ್ಲೆಯ ಪಕ್ಷದ ಕಾರ್ಯಕರ್ತರು ತಮ್ಮ ಕುಂದುಕೊರತೆಗಳನ್ನು ಸಭೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ನಗರ ಪ್ರಧಾನ ಕಾರ್ಯದರ್ಶಿ ಸಂಜಯ್ ಜೈನ್ , ಪಕ್ಷದ ರಾಜ್ಯ ನಾಯಕರು ಜಿಲ್ಲಾ ಕಚೇರಿಗೆ ಭೇಟಿ ನೀಡುವುದಾಗಲಿ ಅಥವಾ ಸುದ್ದಿಗೋಷ್ಠಿ ನಡೆಸುವುದಾಗಲಿ ಮಾಹಿತಿ ನೀಡುವುದಿಲ್ಲ. ಚುನಾವಣೆಗಳಲ್ಲಿ ಅಭ್ಯರ್ಥಿಗಳಾಗುವ ಬೆಂಗಳೂರಿನ ವ್ಯಕ್ತಿಗಳು ಚುನಾವಣೆ ಮುಗಿದ ಮೇಲೆ ಬರುವುದೇ ಇಲ್ಲ. ಕಾರ್ಯಕರ್ತರ ಕಷ್ಟ ಸುಖ ಕೇಳುವವರೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸಂಜಯ್ ಜೈನ್ ಆಡಿದ ಮಾತಿಗೆ ಮುಖಂಡರಾದ ಎಂ.ಗೌತಮ್ ಗೌಡ ಮತ್ತು ಅವರ ಬೆಂಬಲಿಗ ಕಿಶನ್ ರವರು ಆಕ್ರೋಶ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದರು. ಅಲ್ಲದೆ, ಸಂಜಯ್ ಜೈನ್ ಮೇಲೆ ಹಲ್ಲೆ ಮಾಡಿ ಅವರ ಬಟ್ಟೆ ಹರಿದಿದ್ದಾರೆ.
ಮುಖಂಡ ಗೌತಮ್ ಗೌಡ ಮತ್ತು ಅವರ ಬೆಂಬಲಿಗ ಕಿಶನ್ ಇಬ್ಬರು ಸೇರಿ ನನ್ನ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದಿದ್ದು ನಿಜ. ಆ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರು, ಪಕ್ಷದ ಕಾರ್ಯಕರ್ತರು ನನ್ನ ಬೆಂಬಲಕ್ಕೆ ನಿಂತು ಮುಂದಾಗುವ ಅನಾಹುತವನ್ನು ತಪ್ಪಿಸಿದರು ಎಂದು ಸಂಜಯ್ ಜೈನ್ ಪ್ರತಿಕ್ರಿಯೆ ನೀಡಿದರು.
--
ಬಿಜೆಪಿ ಮುಖಂಡ ಗೌತಮ್ ಗೌಡ ಬೆಂಬಲಿಗ ಕಿಶನ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ದರ್ಪ ತೋರುತ್ತಿರುವುದು ಹೊಸದೇನಲ್ಲ. ಈ ಹಿಂದೆ ನನ್ನ ಮತ್ತು ಪಕ್ಷದ ಹಿರಿಯ ಕಾರ್ಯಕರ್ತರ ಬಿಜೆಪಿ ಮಂಜು ಮೇಲೂ ಹಲ್ಲೆ ನಡೆಸಿದ್ದರು. ನನ್ನ ಮೇಲಿನ ಹಲ್ಲೆ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ.
-----
ಬಿಜೆಪಿ ಮಂಡಲವಾರು ಸಭೆಯಲ್ಲಿ ಕಾರ್ಯಕರ್ತರ ಗದ್ದಲ
---