ನಾಪತ್ತೆಯಾದ ಮಾಜಿ ಸೈನಿಕ ಗಿರೀಶ್ ಮೃತದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ.
ಕನ್ನಡಪ್ರಭ ವಾರ್ತೆ ಕುಶಾಲನಗರ ನಾಪತ್ತೆಯಾದ ಮಾಜಿ ಸೈನಿಕ ಕೆ ಯು ಗಿರೀಶ್ ಮೃತ ದೇಹ ಕಾವೇರಿ ನದಿಯಲ್ಲಿ ಪತ್ತೆಯಾಗಿದೆ. ಕುಶಾಲನಗರ ನಿಸರ್ಗಧಾಮ ಪ್ರವಾಸಿ ಕೇಂದ್ರದ ಬಳಿ ಕಾವೇರಿ ನದಿಯಲ್ಲಿ ಮೃತ ದೇಹ ಗೋಚರಿಸಿದೆ.ಗುಡ್ಡೆ ಹೊಸೂರು ಸಿದ್ದಾಪುರ ರಸ್ತೆಯ ತೆಪ್ಪದ ಕಂಡಿ ತೂಗು ಸೇತುವೆಯ ಬಳಿ ಗಿರೀಶ್ ಅವರಿಗೆ ಸೇರಿದ ದ್ವಿಚಕ್ರ ವಾಹನ ಮತ್ತು ಚಪ್ಪಲಿ ಗೋಚರಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ನಾಪತ್ತೆಯಾದ ಗಿರೀಶ್ ಪತ್ತೆ ಕಾರ್ಯದಲ್ಲಿ ಕುಶಾಲನಗರ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ತಂಡದ ಸದಸ್ಯರು, ಕುಶಾಲನಗರ ಪೊಲೀಸರು ಹಾಗೂ ದುಬಾರೆ ರಿವರ್ ರಾಪ್ಟಿಂಗ್ ತಂಡದ ಸದಸ್ಯರು ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ಗುಡ್ಡೆ ಹೊಸೂರು ನಿಂದ ಕುಶಾಲನಗರ ಕೂಡಿಗೆ ಕಣಿವೆ ಹೆಬ್ಬಾಲೆ ತನಕ ನದಿಯಲ್ಲಿ ಮೂರು ದಿನಗಳ ಕಾಲ ಕಾರ್ಯಾಚರಣೆ ನಡೆದಿದ್ದು, ಶನಿವಾರ ಬೆಳಗ್ಗೆ 10 ಗಂಟೆಗೆ ಕಾವೇರಿ ನಿಸರ್ಗಧಾಮದ ಬಳಿ ಮೃತದೇಹ ನದಿಯಲ್ಲಿ ತೇಲಿ ಹೋಗುತ್ತಿರುವ ದೃಶ್ಯ ಗಮನಿಸಿದ ನಿಸರ್ಗಧಾಮ ಪ್ರವಾಸಿ ಕೇಂದ್ರದ ಸಿಬ್ಬಂದಿಗಳು ಮಾಹಿತಿ ನೀಡಿದ ಬೆನ್ನಲ್ಲೇ ದುಬಾರೆ ರಾಪ್ಟಿಂಗ್ ತಂಡದ ಸದಸ್ಯರು ಗಿರೀಶ್ ಮೃತ ದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ತಕ್ಷಣ ನದಿಯಿಂದ ದೇಹವನ್ನು ಮೇಲೆತ್ತಿ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತದನಂತರ ಕುಟುಂಬ ಸದಸ್ಯರಿಗೆ ಪಾರ್ಥಿವ ಶರೀರವನ್ನು ಹಸ್ತಾಂತರಿಸಲಾಗಿದ್ದು, ಗಿರೀಶ್ ಸ್ವಗ್ರಾಮ ಚೆಟ್ಟಳ್ಳಿ ಕಂಡಕೆರೆ ಬಳಿ ಅಂತ್ಯ ಕ್ರಿಯೆ ನಡೆಸಲಾಯಿತು. ಮೃತ ಗಿರೀಶ್ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 17 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಗಿರೀಶ ನಂತರ ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು ಬುಧವಾರ ರಾತ್ರಿ ತೆಪ್ಪದ ಕಂಡಿ ಬಳಿಯಿಂದ ನಾಪತ್ತೆಯಾಗಿರುವುದಾಗಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ತನಿಖೆ ನಡೆಯುತ್ತಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.