ಕನ್ನಡಪ್ರಭ ವಾರ್ತೆ ಮೈಸೂರು
ಸರ್ಕಾರ ವಿದ್ಯಾರ್ಥಿಗಳಿಗಾಗಿ ಪ್ರತಿವರ್ಷ ಕೋಟ್ಯಂತರ ರೂ. ಖರ್ಚು ಮಾಡುತ್ತಿದ್ದು, ಸರ್ಕಾರದ ಸವಲತ್ತುಗಳನ್ನು ಸದುಪಯೋಗ ಪಡಿಸಿಕೊಂಡು ಚೆನ್ನಾಗಿ ಓದಿಕೊಂಡು ಗುರಿ ಇಟ್ಟುಕೊಂಡು ಸಾಧನೆ ಮಾಡಿ. ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ನಿಲಯಪಾಲಕರಾದ ಡಿ. ಮೀನಾ ಹೇಳಿದರು.ನಗರದ ಬೋಗಾದಿಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಡಿ. ದೇವರಾಜ ಅರಸು ಮೆಟ್ರಿಕ್ ನಂತರದ ವೈದ್ಯಕೀಯ ಮತ್ತು ತಾಂತ್ರಿಕ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ನಡೆದ ನಿಲಯದ ವಾರ್ಷಿಕೋತ್ಸವ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತನ್ನು ನೀಡುವುದರೊಂದಿಗೆ ರಾಜ್ಯದಲ್ಲಿ ಹೊಸದಾಗಿ 150 ಹಾಸ್ಟೆಲ್ ಗಳನ್ನು ಮಂಜೂರು ಮಾಡಿದ್ದಾರೆ. ಇದರಲ್ಲಿ ಮೈಸೂರು ಜಿಲ್ಲೆಗೆ 14 ಹೊಸ ಹಾಸ್ಟೆಲ್ ಗಳನ್ನು ಮಂಜೂರು ಮಾಡಿರುವುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಹಾಸ್ಟೆಲ್ ಸೌಲಭ್ಯ ಸಿಗುವಂತಾಗಿದೆ ಎಂದರು.ನಿಮ್ಮ ತಂದೆ ತಾಯಿಯರು ಸಹ ದೂರದ ಊರುಗಳಿಂದ ನಿಮ್ಮನ್ನು ಓದಲು ಮೈಸೂರಿಗೆ ಕಳಿಸಿದ್ದಾರೆ. ಸಾಮಾನ್ಯವಾಗಿ ಬಿಸಿಎಂ ಹಾಸ್ಟೆಲ್ ನಲ್ಲಿರುವವರೆಲ್ಲಾ ರೈತರು, ಬಡವರ ಮಕ್ಕಳೇ ಆಗಿರುವುದರಿಂದ ತಂದೆ ತಾಯಿಯರ ಕಷ್ಟಗಳನ್ನು ನೆನೆದುಕೊಂಡು ಮೊಬೈಲ್ ನಿಂದ ದೂರವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡು ಸರ್ಕಾರದ ಉನ್ನತ ಹುದ್ದೆಗಳನ್ನು ಅಲಂಕರಿಸುವುದರೊಂದಿಗೆ ತಂದೆ-ತಾಯಿಗೆ ಹಾಸ್ಟೆಲ್ ಗೆ ಒಳ್ಳೆಯ ಹೆಸರು ತರಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಎಂಜಿನಿಯರಿಂಗ್ ನಲ್ಲಿ ಹೆಚ್ಚು ಅಂಕ ಪಡೆದು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ಮಧುರ ಅವರನ್ನು ಅಭಿನಂದಿಸಲಾಯಿತು. ಹಿರಿಯ ವಿದ್ಯಾರ್ಥಿನಿಯರು ಕುಡಿಯುವ ನೀರಿನ ಫಿಲ್ಟರ್ ಅನ್ನು ಹಾಸ್ಟೆಲ್ ಗೆ ನೀಡಿದರು.ಹಿರಿಯ ವಿದ್ಯಾರ್ಥಿನಿಯರಾದ ಸ್ವಾತಿ, ಅಮೃತಾ, ನಿಲಯದ ಭೂಮಿಕಾ, ಸುಶ್ಮಿತಾ, ನಾಗಾಶ್ರಯ, ಕೀರ್ತನಾ, ಹರ್ಷಿತಾ, ಸ್ಪಂದನಾ ಮೊದಲಾದವರು ಇದ್ದರು.