ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೩೪ನೇ ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಉಡುಪಿ ಜಿಲ್ಲೆ ಶಿಕ್ಷಣ ಕಾಶಿ, ಡಾ.ಟಿ.ಎಂ.ಎ. ಪೈ ಅವರಿಂದ ಸ್ಥಾಪಿತವಾದ ಶಿಕ್ಷಣ, ಆರೋಗ್ಯ ಸಂಸ್ಥೆಗಳು ಎಷ್ಟೋ ಕುಟುಂಬಗಳಿಗೆ ಅನ್ನ ನೀಡಿದೆ. ಜಿಡಿಪಿ ಪ್ರಗತಿಗೆ ಉಡುಪಿಯ ಕೊಡುಗೆ ಅಪಾರ. ವಿದ್ಯೆಯ ಜೊತೆಗೆ ಕೌಶಲಗಳು ಅತೀ ಮುಖ್ಯ. ಜೀವನದಲ್ಲಿ ಸಾಧಿಸಿದ ನಂತರ ತಂದೆ ತಾಯಿ, ಗುರುಗಳು ಮತ್ತು ಕಲಿತ ಕಾಲೇಜನ್ನು ಮರೆಯಬಾರದು ಎಂದು ಎಂಜಿಎಂ ಕಾಲೇಜಿನ ಪ್ರಾಚಾರ್ಯ ಪ್ರೊ.ಲಕ್ಷ್ಮೀನಾರಾಯಣ ಕಾರಂತ್ ಹೇಳಿದರು.ಅವರು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ೩೪ನೇ ವಾರ್ಷಿಕೋತ್ಸವ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ಕಾಲೇಜಿನ ಸಂಸ್ಥಾಪಕ ಉಪೇಂದ್ರ ಪೈ ಮತ್ತು ಡಾ.ಮಾಧವ ಪೈಗಳ ಭಾವಚಿತ್ರಕ್ಕೆ ಪುಷ್ಪಾಂಜಲಿಯನ್ನು ಸಮರ್ಪಿಸುವ ಮೂಲಕ ಸಂಸ್ಥಾಪಕರ ದಿನವನ್ನೂ ಆಚರಿಸಲಾಯಿತು. ಸೇವಾ ನಿವೃತ್ತಿ ಹೊಂದಲಿರುವ ಪ್ರೊ. ಕಾರಂತರಿಗೆ ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.ಕಾಲೇಜಿನ ಪ್ರಾಚಾರ್ಯರಾದ ಆಶಾಕುಮಾರಿ, ಪ್ರಸ್ತುತ ಶೈಕ್ಷಣಿಕ ವರ್ಷದ ಕಾರ್ಯಕಲಾಪಗಳ ವರದಿಯನ್ನು ಮಂಡಿಸಿದರು. ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ. ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಕಾಲೇಜಿನ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಶರಣ್ಯ ನಾಯಕ್ ಹಾಗೂ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿಯನ್ನು ತೃತೀಯ ಬಿಬಿಎ ತರಗತಿಯ ಗಿರೀಶ್ ಕಾಮತ್ ಪಡೆದುಕೊಂಡರು.
ಕಾಲೇಜಿನ ಶುಚಿತ್ವ ಕಾಪಾಡುವ ನಿರ್ಮಲಾ ಅವರನ್ನು ವಿದ್ಯಾರ್ಥಿಗಳು ಸನ್ಮಾಸಿದರು.ಕಾಲೇಜಿನ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಉಮೇಶ್ ಕಾಮತ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ರವಿರಾಜ್ ಎಚ್.ಪಿ., ಅಧ್ಯಕ್ಷ ಮನೋಹರ ಶೆಟ್ಟಿ ತೋನ್ಸೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸನೊಬರ್ ಸ್ವಾಗತಿಸಿದರು. ಸಿಂಚನ ಶೆಟ್ಟಿಗಾರ್ ವಂದಿಸಿದರು. ಶರಣ್ಯ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.