ಕ್ಷೇತ್ರದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಆದ್ಯತೆ: ಡಾ. ಎನ್.ಟಿ. ಶ್ರೀನಿವಾಸ

KannadaprabhaNewsNetwork | Published : Jun 2, 2025 1:40 AM
ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿನ ಪ್ರತಿ ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ, ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಸೇರುವಂತೆ ವಿಶೇಷ ಯೋಜನೆ ಮಾಡಲಾಗುವುದು.

₹6 ಕೋಟಿ ಕಾಮಗಾರಿಗಳಿಗೆ ಶಾಸಕರಿಂದ ಚಾಲನೆ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿನ ಪ್ರತಿ ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯ ಕಲ್ಪಿಸುವ ಮೂಲಕ, ನಮ್ಮ ಮಕ್ಕಳು ಸರ್ಕಾರಿ ಶಾಲೆಗೆ ಸೇರುವಂತೆ ವಿಶೇಷ ಯೋಜನೆ ಮಾಡಲಾಗುವುದು ಎಂದು ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ ಹೇಳಿದರು.ಕೂಡ್ಲಿಗಿ ಕ್ಷೇತ್ರದ ಕೊಟ್ಟೂರು ತಾಲೂಕಿನ ಹಿರೇವಡೇರಹಳ್ಳಿ ಗ್ರಾಮದಲ್ಲಿ ಶಾಲಾ ಕೊಠಡಿಗೆ ಭೂಮಿ ಪೂಜೆ ಮತ್ತು ವಿವೇಕ ಯೋಜನೆಯಡಿಯ ಕೊಠಡಿ ಉದ್ಘಾಟಿಸಿ ಮಾತನಾಡಿದರು. ಬಹುತೇಕ ಶಾಲೆಗಳಲ್ಲಿ ಕೊಠಡಿಗಳಿದ್ದರೂ ವಿದ್ಯುತ್, ಲ್ಯಾಬ್, ಕಂಪ್ಯೂಟರ್ ಸೇರಿ ಇತರೆ ಸೌಕರ್ಯಗಳ ಕೊರತೆಗಳಿವೆ. ಮತ್ತೆ ಕೆಲವೆಡೆ ಶಿಥಿಲ ಕೊಠಡಿಗಳಿವೆ. ಈ ಹಿನ್ನೆಲೆ ಎಲ್ಲ ಗ್ರಾಮಗಳಲ್ಲಿ ವ್ಯವಸ್ಥಿತವಾದ ಹಾಗೂ ಎಲ್ಲ ಸೌಕರ್ಯಗಳನ್ನು ಹೊಂದಿರುವ ಶಾಲೆ ಕಟ್ಟಡ ನಿರ್ಮಿಸುವ ಅವಶ್ಯಕತೆಯಿದೆ. ಈ ಬಾರಿ ಕ್ಷೇತ್ರದ 60 ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಮೂಲ ಭೂತ ಸೌಕರ್ಯ ಕಲ್ಪಿಸಲಾಗುವುದು. ಅಕ್ಷರ ಅವಿಷ್ಕಾರ ಯೋಜನೆಯಡಿ ₹13 ಕೋಟಿಗಳಲ್ಲಿ ಆಯ್ದ ಶಾಲೆಗಳಲ್ಲಿ ಸೌಕರ್ಯಗಳನ್ನು ಕಲ್ಪಿಸಲಾಗುವುದು. ಮುಂದಿನ ವರ್ಷದಲ್ಲಿ ಯಾವುದೇ ಗ್ರಾಮದಲ್ಲಿನ ಮಗು ಸರ್ಕಾರಿ ಶಾಲೆಗೇ ಸೇರುವಂತೆ ಶಾಲೆಗಳನ್ನು ಉನ್ನತೀಕರಣಗೊಳಿಸಲಾಗುವುದು ಎಂದರು.ಕಾರ್ಮಿಕ ಇಲಾಖೆಯಿಂದ ಕಾರ್ಮಿಕರ ಮಕ್ಕಳಿಗಾಗಿ ಕ್ಷೇತ್ರಕ್ಕೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಂಜೂರಾಗಿದೆ. ಕೂಡ್ಲಿಗಿ ತಾಲೂಕಿನ ಶಿವಪುರದ ಹತ್ತಿರ 10 ಎಕರೆ ಪ್ರದೇಶದಲ್ಲಿ ಶಾಲೆ ನಿರ್ಮಾಣವಾಗಲಿದೆ. ಇದರು ಕಾರ್ಮಿಕರ ಅದರಲ್ಲೂ ವಲಸೆ ಹೋಗುವ ಕಾರ್ಮಿಕರ ಮಕ್ಕಳಿಗೆ ಶಿಕ್ಷಣ ಕಲ್ಪಿಸಲು ಹೆಚ್ಚಿನ ಅನುಕೂಲವಾಗಲಿದೆ. ಜನತೆಯ ಆರೋಗ್ಯ ರಕ್ಷಣೆಗಾಗಿ ಕ್ಷೇತ್ರಕ್ಕೆ 6 ಪಿಎಚ್‌ಸಿ ಮಂಜೂರಾಗಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭವಾಗಲಿದೆ. ಉಜ್ಜಯಿನಿ ಗ್ರಾಮದ ಸರಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ 100 ಹಾಸಿಗೆ ಆಸ್ಪತ್ರೆ ಮಂಜೂರಾಗಿದ್ದು, ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಶಾಲೆ ಮಕ್ಕಳ ಸಮರ್ಪಕ ದೃಷ್ಟಿ ಕಾಪಾಡುವ ಹಿನ್ನೆಲೆ ಕ್ಷೇತ್ರದಲ್ಲಿ ಸಂಚಾರಿ ಕಣ್ಣಿನ ತಪಾಸಣೆ ಆರಂಭಿಸಲಾಗುವುದು. ಪ್ರತಿ ಶಾಲೆಗೆ ವಾಹನ ತೆರಳಿ ಮಕ್ಕಳ ಕಣ್ಣಿನ ತಪಾಸಣೆ ನಡೆಸಿ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡುತ್ತದೆ ಎಂದು ಹೇಳಿದರು.ಕೂಡ್ಲಿಗಿ ತಾಲೂಕಿನ ಗುಂಡಿನಹೊಳೆಯಲ್ಲಿ ಕೃಷಿ ಸಂಶೋದನಾ ಕೇಂದ್ರ ಆರಂಭಿಸಲು ಪೂರಕವಾದ ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ನವದೆಹಲಿ ಕೇಂದ್ರದ ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ ನಂತರ ಕೇಂದ್ರ ಆರಂಭವಾಗಲಿದೆ. ತಾಲೂಕಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಹುಣಸೆ ಮತ್ತು ಶೇಂಗಾ ಬೆಳೆಯುತ್ತಿದ್ದಾರೆ. ಇದಕ್ಕೆ ಸೂಕ್ತ ಮಾರುಕಟ್ಟೆ ಕಲ್ಪಿಸುವುದಕ್ಕಾಗಿ ಗುಡೇಕೋಟೆ ಹುಣಸೆ ಮತ್ತು ಸೇಂಗಾ ಸಂಸ್ಕರಣಾ ಘಟಕ ಆರಂಭಿಸಲಾಗುವುದು ಎಂದರು.ಕೂಡ್ಲಿಗಿ ವಿಧಾನಸಭೆ ಕ್ಷೇತ್ರದಲ್ಲಿನ ಕೆರೆಗಳಿಗೆ ನದಿ ನೀರು ತುಂಬಿಸುವ ಯೋಜನೆ ಮುಕ್ತಾಯ ಹಂತಕ್ಕೆ ತಲುಪಿದೆ. ಬಾಕಿ ಇರುವ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಯೋಜನೆಗೆ ಚಾಲನೆ ನೀಡಲಾಗುವುದು. ಈ ಹಿನ್ನೆಲೆ ಒಂದೆರೆಡು ದಿನಗಳಲ್ಲಿ ಹೂ.ಹಡಗಲಿ ತಾಲೂಕು ಬಳಿಯ ಜಾಕ್‌ವೆಲ್‌ಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಚರ್ಚೆ ನಡೆಸುತ್ತೇನೆ ಎಂದರು.ಕೊಟ್ಟೂರು ತಾಪಂ ಇಒ ಡಾ. ಆನಂದಕುಮಾರ್, ಕಾಳಾಪುರ ಗ್ರಾಪಂ ಅಧ್ಯಕ್ಷ ಬಿ.ಸುರೇಶ ಸದಸ್ಯರಾದ ಮಂಜುನಾಥ, ಪದ್ಮ, ಅಂಜಿನಪ್ಪ, ನಾಗಪ್ಪ, ಶಿವಮ್ಮ, ಪಿಡಿಒ ಲತಾಬಾಯಿ, ರಾಜ್ಯ ಬೀಜ ನಿಗಮ ನಿರ್ದೇಶಕ ಸಾವಜ್ಜಿ ರಾಜೇಂದ್ರಪ್ರಸಾದ್ ಮುಖಂಡರಾದ ಬಣವಿಕಲ್ಲು ಎರ್ರಿಸ್ವಾಮಿ, ಭಂಡಾರಿ ಸಿದ್ದೇಶ, ಇಮಾಮ್, ಕೊಟ್ರೇಶ, ದಂಡೆಪ್ಪ. ಕಲ್ಲೇಶಪ್ಪ, ಸಿದ್ದಪ್ಪ, ಮರುಳಸಿದ್ದಪ್ಪ, ಮುಖ್ಯಗುರು ಮಹೇಶ, ಶಿಕ್ಷಕಿ ಕವಿತಾ ಇತರರು ಇದ್ದರು.