ಬಂಗಾರಪೇಟೆ: ದುರಂತೋ ಎಕ್ಸ್ಪ್ರೆಸ್ ರೈಲಿನಲ್ಲಿ ಬಾಂಬ್ ಬೆದರಿಕೆ ದೂರು ಬಂದ ಹಿನ್ನೆಲೆಯಲ್ಲಿ ನಗರದ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ರೈಲು ತಡೆದು ಪರಿಶೀಲನೆ ನಡೆಸಿ ಒಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ ಘಟನೆ ನಡೆಯಿತು.ಕೊಲ್ಕತ್ತಾದ ಹೌರಾ ಜಂಕ್ಷನ್ನಿಂದ ಬೆಂಗಳೂರಿಗೆ ಸಂಚರಿಸುವ ೧೨೨೪೫ ಸಂಖ್ಯೆಯ ದುರಂತೋ ರೈಲಿನಲ್ಲಿ ಬಾಂಬ್ ಬೆದರಿಕೆ ಬಂದಿದೆ. ಇದರ ಹಿನ್ನೆಲೆಯಲ್ಲಿ ನಗರದ ರೈಲ್ವೆ ಜಂಕ್ಷನ್ಗೆ ರೈಲು ಪ್ಲಾಟ್ ಫಾರಂ ೧ಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ನಗರದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಮತ್ತು ಶ್ವಾನದಳದ ಸಿಬ್ಬಂದಿ ರೈಲನ್ನು ನಿಲ್ಲಿಸಿ ಪ್ರತಿಯೊಂದು ಬೋಗಿಗಳನ್ನು ಪರಿಶೀಲನೆ ನಡೆಸಿ ಶಶಾಂಕ್ ದೋಹ್ಲ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.ಕೊಲ್ಕತ್ತಾದ ಹೌರಾ ಜಂಕ್ಷನ್ ನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನ ಬಿ೬ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಸಾದ್ ಯಾದವ್ ರೈಲ್ವೆ ಹೆಲ್ಪ್ ಲೈನಿಗೆ ಕರೆ ಮಾಡಿ ಸಹ ಪ್ರಯಾಣಿಕ ರೈಲನ್ನು ಬ್ಲಾಸ್ಟ್ ಮಾಡುವುದಾಗಿ ಮಾತನಾಡಿದ್ದಾನೆಂದು ತಿಳಿಸಿದ್ದಾನೆ. ಜೊತೆಗೆ ವ್ಯಕ್ತಿಯೊಬ್ಬನ ಪೋಟೋ ಕಳುಹಿಸಿ ರೇನಿಗುಂಟ ರೈಲ್ವೆ ನಿಲ್ದಾಣದಲ್ಲಿ ಇಳಿದಿದ್ದಾನೆ. ದೂರನ್ನು ಆಧರಿಸಿ ನಗರದ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು, ಬಾಂಬ್ ನಿಷ್ಕ್ರಿಯ ದಳದ ಮತ್ತು ಶ್ವಾನದಳದ ಸಿಬ್ಬಂದಿ ರೈಲನ್ನು ನಿಲ್ಲಿಸಿ ಕೋಚುಗಳನ್ನು ಪರಿಶೀಲನೆ ನಡೆಸಿ ಕೋಚ್ ನಲ್ಲಿ ಬೆಡ್ ಚೇಂಜ್ ಮಾಡುವ ಶಶಾಂಕ್ ದೋಹ್ಲ ಎಂಬಾತನನ್ನು ವಶಕ್ಕೆ ಪಡಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಶಶಾಂಕ್ ದೋಹ್ಲನನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಸಾದ್ ಯಾದವ್ ಹಾಗೂ ಶಶಾಂಕ್ ದೋಹ್ಲ ನಡುವೆ ಬೆಡ್ ಚೇಂಜ್ ಮಾಡುವ ವಿಚಾರದಲ್ಲಿ ಮಾತುಕತೆ ನಡೆದಿದೆ ಎನ್ನಲಾಗಿದೆ. ಆಂಧ್ರದ ವಿಜಯವಾಡ ಸಮೀಪ ರೈಲ್ವೆ ಪೊಲೀಸರು ಇಬ್ಬರಿಗೂ ಬುದ್ದಿವಾದ ಹೇಳಿದ್ದಾರೆ ಎಂಬ ಮಾಹಿತಿ ಲಭ್ಯವಿದ್ದು ರೇಣಿಗುಂಟ ಜಂಕ್ಷನ್ನಲ್ಲಿ ಇಳಿದ ಆಸಾಮಿ ಎಸಿ ಕೋಚ್ನಲ್ಲಿ ಪ್ರಯಾಣಿಕರಿಗೆ ಬೆಡ್ಶೀಟ್ ಇತ್ಯಾದಿಗಳನ್ನು ವಿತರಣೆ ಕೆಲಸ ಮಾಡುವ ಶಶಾಂಕ್ ದೋಹ್ಲ ಎಂಬಾತನ ರೈಲಿನಲ್ಲಿ ಬಾಂಬ್ ಇಟ್ಟು ಬ್ಲಾಸ್ಟ್ ಮಾಡಲು ಹೊರಟಿದ್ದಾನೆ. ಈ ಸಂಬಂಧ ಪೋನಿನಲ್ಲಿ ಮಾತುಕತೆ ನಡೆಸಿದ್ದಾನೆ ಎಂಬ ಸುಳ್ಳು ದೂರು ನೀಡಿರುವುದಾಗಿ ತಿಳಿದು ಬಂದಿದೆ.ಶಶಾಂಕ್ ದೋಹ್ಲನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸ್ ಇನ್ಸ್ಪೆಕ್ಟರ್ ನಲ್ಲರಾಜು ಶಶಾಂಕ್ ಹಿನ್ನಲೆಯನ್ನು ಪರಿಶೀಲಿಸಿದ್ದು, ಈತನ ವಿರುದ್ದ ಯಾವುದೇ ಕ್ರಿಮಿನಲ್ ದಾಖಲೆಗಳು ಇಲ್ಲದ ಮಾಹಿತಿ ಲಭ್ಯವಾಗಿದೆ.