ಹಾನಗಲ್ಲ: ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲ ತಾಲೂಕಿನ ಬೊಮ್ಮನಹಳ್ಳಿಯನ್ನು ಪ್ರತ್ಯೇಕ ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಬೇಕು ಎಂದು ಅಲ್ಲಿನ ನಾಡಕಚೇರಿಯ ಉಪತಹಸೀಲ್ದಾರ್ ದೊಡ್ಡಮನಿ ಅವರ ಮೂಲಕ ಮುಖ್ಯಮಂತ್ರಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು.
ಬೊಮ್ಮನಹಳ್ಳಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಮಹೇಶಗೌಡ ಪಾಟೀಲ ಮಾತನಾಡಿ, ಬೊಮ್ಮನಹಳ್ಳಿ ಹೋಬಳಿ ಕೇಂದ್ರವಾಗಿದ್ದರೂ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದೆ. ಜನಪ್ರತಿನಿಧಿಗಳು ಬೊಮ್ಮನಹಳ್ಳಿ ಭಾಗ ನಿರ್ಲಕ್ಷಿಸಿದ್ದಾರೆ. ಈ ಭಾಗದ ರೈತರು ಅಭಿವೃದ್ಧಿಯಿಂದ ವಂಚಿತರಾಗಿದ್ದಾರೆ. ಮುಂದಿನ ದಿನಗಳಲ್ಲಿ ಬೊಮ್ಮನಹಳ್ಳಿ ಭಾಗದ ಬಗ್ಗೆ ಜನಪ್ರತಿನಿಧಿಗಳು ಸರ್ಕಾರಗಳು ನಿರ್ಲಕ್ಷ್ಯ ತೋರಿಸಿದರೆ ಬೊಮ್ಮನಹಳ್ಳಿ ಬಂದ್ ಮಾಡಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಜೈ ಭೀಮ್ ಸಮತಾ ಪ್ರಬುದ್ಧ ಸಮಿತಿ ಸಂಚಾಲಕ ಚಂದ್ರಪ್ಪ ಹರಿಜನ ಮಾತನಾಡಿ, ಬೊಮ್ಮನಹಳ್ಳಿ ತಾಲೂಕು ಆಗಲು ಜನಸಂಖ್ಯೆ ಆಧಾರಿತವಾಗಿ, ಭೌಗೋಳಿಕವಾಗಿ ಎಲ್ಲ ಸಾಮರ್ಥ್ಯ ಹೊಂದಿದೆ. ಅಭಿವೃದ್ಧಿಯಲ್ಲಿ ಹಿಂದುಳಿದ ಕ್ಷೇತ್ರವಾಗಿದ್ದು, ಬೊಮ್ಮನಹಳ್ಳಿ ತಾಲೂಕು ರಚನೆಯಿಂದ ಬೊಮ್ಮನಹಳ್ಳಿಯ ಸುತ್ತಮುತ್ತಲಿನ ಹತ್ತು ಕಿಲೋಮೀಟರ್ ಅಂತರದಲ್ಲಿ ೯೦ಕ್ಕೂ ಹೆಚ್ಚು ಗ್ರಾಮಗಳು ಬೊಮ್ಮನಹಳ್ಳಿ ಕೇಂದ್ರದ ವ್ಯಾಪ್ತಿಯಲ್ಲಿ ಬರುತ್ತವೆ. ಬೊಮ್ಮನಹಳ್ಳಿ ನೂತನ ತಾಲೂಕು ಆಗುವುದರಿಂದ ಪ್ರತ್ಯೇಕ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್ಚು ಅನುದಾನಗಳು ಬರುವ ಮೂಲಕ ಅಭಿವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಹೇಳಿದರು.ಭಾರತೀಯ ಕೃಷಿ ಕಾರ್ಮಿಕ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಪಾಟೀಲ್, ಜೈ ಭೀಮ್ ಸಮತಾ ಪ್ರಬುದ್ಧ ಸಮಿತಿಯ ಅಧ್ಯಕ್ಷ ವಿಷ್ಣು ಕೇಳಗೇರಿ, ಗ್ರಾಮದ ಮುಖಂಡರಾದ ಜಯನಗೌಡ ಪಾಟೀಲ, ನಾಗಪ್ಪ ಬಿದರಗಡ್ಡಿ, ಚಂದ್ರಶೇಖರ ಬೈಲವಾಳ, ಜಗದೀಶ ಪಾಟೀಲ, ಚನ್ನಬಸಯ್ಯ ದೊಡ್ಡಕಂತಿಮಠ, ಕುಮಾರ ನೆಲವಿಗಿ, ಶಿವಕುಮಾರಸ್ವಾಮಿ ಮಲ್ಲಿಕೇರಿಮಠ, ಕುಮಾರ ಬಂಕಾಪುರ, ಶಿವಾನಂದಪ್ಪ ಕ್ಷೌರದ, ಮಹದೇವಪ್ಪ ಹರಿಜನ, ಆನಂದ ಮೇಲಿನಮನಿ, ಬಾಪುಗೌಡ ಹಳೆಗೌಡ್ರು ಸೇರಿದಂತೆ ಇತರರಿದ್ದರು.