ರೋಣ: ಸಸ್ಯೋದ್ಯಾನದ ಅಭಿವೃದ್ಧಿಯಿಂದಾಗಿ ಸ್ಥಳೀಯವಾಗಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ವೇಗ ಸಿಗಲಿದೆ. ಇಲ್ಲಿನ ಸಾಹಸ ಕ್ರೀಡೆಗಳು, ಮಕ್ಕಳ ಆಟಿಕೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಯುವಜನತೆಯನ್ನು ಮತ್ತಷ್ಟು ಆಕರ್ಷಿಸಲಿವೆ. ಈ ದಿಶೆಯಲ್ಲಿ ಉದ್ಯಾನವನ ಪ್ರವಾಸಿ ತಾಣವಾಗಿ ಮಾರ್ಪಡಲಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ಸಸ್ಯೋದ್ಯಾನಗಳು ಕೇವಲ ವಿನೋದಕ್ಕಾಗಿ ಇರಬಾರದು. ಅವು ಮಕ್ಕಳು ಮತ್ತು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸುವ ಕೇಂದ್ರಗಳಾಗಬೇಕು. ಈ ಉದ್ಯಾನವನದಲ್ಲಿ ವಿವಿಧ ಜಾತಿಯ ಗಿಡಮರಗಳನ್ನು ನೆಡಲಾಗಿದ್ದು, ಪ್ರವಾಸಿಗರ ಆಕರ್ಷಣೆಗೆ ಪೂರಕವಾದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ನಿಸರ್ಗವನ್ನು ಪ್ರೀತಿಸಿ ಬೆಳೆಸಿದರೆ ಮಾತ್ರ ಮುಂದಿನ ಪೀಳಿಗೆಗೆ ಸುಸ್ಥಿರ ಪರಿಸರ ನೀಡಲು ಸಾಧ್ಯ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಪರಿಸರ ಕಾಳಜಿಯ ಬಗ್ಗೆ ಅರಿವು ಮೂಡುವ ಕಾರ್ಯ ಆಗಬೇಕು. ಪದ್ಮಶ್ರೀ ಪುರಸ್ಕೃತೆ ಸಾಲುಮರದ ತಿಮ್ಮಕ್ಕ ಅವರ ಹೆಸರನ್ನು ಸಸ್ಯೋದ್ಯಾನಕ್ಕೆ ನಾಮಕರಣ ಮಾಡಿರುವುದು ಅವರ ಪರಿಸರ ಸೇವೆಯನ್ನು ಗೌರವಿಸಿದಂತಾಗಿದೆ. ಅವರು ಬೆಳೆಸಿದ ಸಾಲುಮರಗಳಂತೆ ಈ ಸಸ್ಯೋದ್ಯಾನವೂ ಸಮೃದ್ಧವಾಗಿ ಕಂಗೊಳಿಸಲಿ ಎಂದರು.ಇದೇ ವೇಳೆ ₹1 ಕೋಟಿ ವೆಚ್ಚದಲ್ಲಿ ಕೆರೆ ನಿರ್ಮಾಣ ಹಾಗೂ ಬೋಟಿಂಗ್ ಸೌಲಭ್ಯ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.