ಹಾವೇರಿ: ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಏಕಾಏಕಿ ಬಸ್ ಹರಿದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಎರಡು ವರ್ಷದ ಬಾಲಕ ಅಸು ನೀಗಿದ್ದು, ನಾಲ್ವರಿಗೆ ಗಂಭೀರ ಗಾಯಗಳಾದ ಘಟನೆ ಬುಧವಾರ ನಡೆದಿದೆ.
ಗಾಯಾಳುಗಳು ಬಂಕಾಪುರ ಪಟ್ಟಣದ ನಿವಾಸಿಗಳಾಗಿದ್ದು, ಚಾಲಕ ಕಂ ಕಂಡಕ್ಟರ್ ಮಂಜುನಾಥ ರಾಜಪ್ಪ ಅವರ ಮೇಲೆ ಕೇಸ್ ದಾಖಲಿಸಲಾಗಿದೆ.
ಲಕ್ಷ್ಮೇಶ್ವರಕ್ಕೆ ತೆರಳುತ್ತಿದ್ದ ಬಸ್ ಅತಿ ವೇಗದಲ್ಲಿ ಬಸ್ ನಿಲ್ದಾಣಕ್ಕೆ ಬಂದಿದ್ದಲ್ಲದೇ, ಪ್ರಯಾಣಿಕರು ಕಾಯುವಿಕೆಗೆ ನಿರ್ಮಿಸಿದ ಕಾರಿಡಾರ್ಗೆ ನುಗ್ಗಿ ಮುಂದೆ ಇದ್ದ ಬೇಕರಿ ಕಟ್ಟಡಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಇದರ ರಭಸಕ್ಕೆ ಬಸ್ಗಾಗಿ ಕಾಯುತ್ತಿದ್ದವರು ಬಸ್ನ ಅಡಿಯಲ್ಲಿ ಸಿಲುಕಿ ಅವಘಡ ಸಂಭವಿಸಿದೆ. ಈ ದೃಶ್ಯ ಕಂಡು ಅಲ್ಲಿದ್ದ ನೂರಾರು ಪ್ರಯಾಣಿಕರು ಕಂಗಾಲಾದರು.ಸ್ಥಳದಲ್ಲಿ ನೂರಾರು ಜನರ ಸೇರಿಕೊಂಡು ಬಸ್ ಚಾಲಕನ ನಿರ್ಲಕ್ಷ್ಯಕ್ಕೆ ಛೀಮಾರಿ ಹಾಕಿ, ಆಕ್ರೋಶ ವ್ಯಕ್ತಪಡಿಸಿದರು. ಘಟನಾ ಸ್ಥಳಕ್ಕೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾವೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.