ಕೈಗಾ ಯಂತ್ರ ಸಾಗಾಟಕ್ಕೆ ರೆಂಬೆ ಕಟಾವು: ರಸ್ತೆ ಅಗಲೀಕರಣಕ್ಕೆ ಆಗ್ರಹ

KannadaprabhaNewsNetwork |  
Published : Apr 12, 2026, 02:30 AM IST
ರೆಂಬೆಗಳನ್ನು ಕಡಿದು ಹಾಕಲಾಗಿದೆ | Kannada Prabha

ಸಾರಾಂಶ

ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬೃಹತ್ ಗಾತ್ರದ ಯಂತ್ರೋಪಕರಣ ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಗರದ ಸಿವಿಲ್‌ ಕೋರ್ಟ್‌ ರಸ್ತೆಯಲ್ಲಿ ಮರಗಳ ರೆಂಬೆಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಕೈಗಾ ಅಣು ವಿದ್ಯುತ್ ಸ್ಥಾವರಕ್ಕೆ ಬೃಹತ್ ಗಾತ್ರದ ಯಂತ್ರೋಪಕರಣ ಸಾಗಿಸಲು ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಗರದ ಸಿವಿಲ್‌ ಕೋರ್ಟ್‌ ರಸ್ತೆಯಲ್ಲಿ ಮರಗಳ ರೆಂಬೆಗಳ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ವ್ಯವಸ್ಥೆಯ ರಕ್ಷಣೆಯ ದೃಷ್ಟಿಯಿಂದ ಹಾಗೂ ಬಿರು ಬೇಸಿಗೆಯ ಹೊತ್ತಿನಲ್ಲಿ ಕೈಗೊಂಡಿರುವ ರೆಂಬೆಗಳ ಕಟಾವು ಕಾರ್ಯ ಸ್ಥಳೀಯರು ಮತ್ತು ಪರಿಸರ ಪ್ರೇಮಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕೈಗಾದಲ್ಲಿ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ದಿನೇ ದಿನೇ ಭಾರೀ ಯಂತ್ರೋಪಕರಣಗಳು ಹಾಗೂ ನಿರ್ಮಾಣ ಸಾಮಗ್ರಿ ಸಾಗಿಸುವ ಬೃಹತ್ ಲಾರಿಗಳ ದಟ್ಟಣೆ ಹೆಚ್ಚಾಗುತ್ತಿದೆ. ಸದ್ಯ ಬೃಹತ್ ಯಂತ್ರವೊಂದನ್ನು ಹೊತ್ತು ತಂದಿರುವ ಭಾರೀ ಗಾತ್ರದ ಲಾರಿಯೊಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಡೆತಡೆಯಿಲ್ಲದೆ ಸಾಗಿಬಂದು, ಕಾರವಾರ ನಗರದಿಂದ ಸುಮಾರು 5 ಕಿಲೋಮೀಟರ್ ಹಿಂದಿರುವ ಅರಗಾದ ಹೆದ್ದಾರಿ ಬದಿಯಲ್ಲಿ ಬೀಡುಬಿಟ್ಟಿದೆ.

ಈ ಯಂತ್ರವನ್ನು ನಗರ ಪ್ರದೇಶದಿಂದ ಕೈಗಾ ತಲುಪಿಸುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದು ನಿಂತಿರುವ ಮರಗಳು ಸುಗಮ ಸಂಚಾರಕ್ಕೆ ಅಡ್ಡಿಯಾಗಿವೆ ಎಂಬ ಕಾರಣ ನೀಡಿ, ಇದೀಗ ರೆಂಬೆ-ಕೊಂಬೆಗಳ ತೆರವು ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕೇವಲ ಮರಗಳ ಕಟಾವು ಮಾತ್ರವಲ್ಲದೆ, ಇಂತಹ ಬೃಹತ್ ವಾಹನಗಳ ನಿರಂತರ ಸಂಚಾರದಿಂದ ಕಾರವಾರ ನಗರದಿಂದ ಕೈಗಾವರೆಗಿನ ರಸ್ತೆಗಳು ಹಾಗೂ ಮಾರ್ಗಮಧ್ಯದ ಕಿರು ಸೇತುವೆಗಳು ಕಡಿಮೆ ಅವಧಿಯಲ್ಲಿಯೇ ಹಾಳಾಗುವ ಅಪಾಯ ಎದುರಾಗಿದೆ. ವಾಹನಗಳ ಭಾರಿ ಗಾತ್ರದಿಂದಾಗಿ ಇತರ ವಾಹನ ಸವಾರರಿಗೂ ಕಿರಿಕಿರಿಯಾಗುತ್ತಿದ್ದು, ಪದೇ ಪದೇ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗುತ್ತಿದೆ.

ಈ ನಿಟ್ಟಿನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಎರಡನ್ನೂ ಸಮತೋಲನದಲ್ಲಿ ಕೊಂಡೊಯ್ಯಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆ ಮರಗಳನ್ನು ಬಲಿ ಕೊಡುವ ಬದಲು, ಕಾರವಾರ-ಕೈಗಾ ಮಾರ್ಗವನ್ನು ವೈಜ್ಞಾನಿಕವಾಗಿ ಅಗಲೀಕರಣಗೊಳಿಸುವಂತೆ ಸಾರ್ವಜನಿಕರು ಹಾಗೂ ವಾಹನ ಸವಾರರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ