ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ
ಕನ್ನಡಪ್ರಭ ವಾರ್ತೆ ಹಾಸನ
ಉತ್ತಮ ತರಬೇತಿ ಪಡೆದು ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟದಲ್ಲಿ ಪಾಲ್ಗೊಂಡು ನಂತರ ರಾಜ್ಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿ ಹಾಸನ ಜಿಲ್ಲೆಯನ್ನು ಪ್ರಥಮ ಸ್ಥಾನಕ್ಕೆ ತರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ಮಂಜುಳ ಹೇಳಿದರು.ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಬ್ರಿಲಿಯಂಟ್ ಪಬ್ಲಿಕ್ ಶಾಲೆ ಜಂಟಿಯಾಗಿ ಬುಧವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಹಾಸನ ತಾಲೂಕು ನಗರ ‘ಎ’ ವಲಯ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿ, ಕ್ರೀಡಾಕೂಟ ಉದ್ಘಾಟನೆ ವೇಳೆ ಇದುವರೆಗೂ ಮಳೆ ಬಂದಿರಲಿಲ್ಲ. ಇದೇ ಮೊದಲು ಮಳೆ ಬಂದಿರುವುದು. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಂಡು ಮಳೆ ಬಂದಿರುವುದು ಸಲ್ಪ ಅವ್ಯವಸ್ಥೆ ಆಗಿದೆ. ಎರಡು ದಿನ ಕ್ರೀಡಾಕೂಟ ನಡೆಯಲಿದೆ. ಈ ಶೈಕ್ಷಣಿಕ ವರ್ಷದಲ್ಲಿ ಉತ್ತಮವಾಗಿ ಸಿದ್ಧರಾಗಿ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಲು ಬಂದಿರುವುದಕ್ಕೆ ಶುಭಾಶಯಗಳನ್ನು ತಿಳಿಸುತ್ತೇನೆ. ಕ್ರೀಡೆಯಲ್ಲಿ ಸೋತವರು ಬೇಸರ ಮಾಡಿಕೊಳ್ಳದೇ ಮುಂದಿನ ವರ್ಷದಲ್ಲಿ ನಡೆಯುವ ಕ್ರೀಡೆಗೆ ತಯಾರು ಆಗಬೇಕು ಎಂದು ಕಿವಿಮಾತು ಹೇಳಿದರು.
ಇದಕ್ಕಾಗಿ ಯುವ ಸಬಲೀಕರಣ ಇಲಾಖೆಯವರು ಮತ್ತು ದೈಹಿಕ ಶಿಕ್ಷಣಾಧಿಕಾರಿಗಳು ನಿಮಗೆ ಸಹಕಾರ ಕೊಡಲಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಹಾಸನ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಬರುವಂತೆ ನೋಡಿಕೊಳ್ಳಿ ಎಂದು ಶುಭ ಹಾರೈಸಿದರು.