ವರ್ಷದೊಳಗೆ ರಾಣಿ ಚನ್ನಮ್ಮ ಕಂಚಿನ ಪುತ್ಥಳಿ ನಿರ್ಮಾಣ: ನೇಮರಾಜನಾಯ್ಕ

KannadaprabhaNewsNetwork | Published : Jun 3, 2025 1:14 AM
ಪಟ್ಟಣದ ಹಳೇವೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ₹೫೦ಲಕ್ಷ ಅನುದಾನ ಕಾಯ್ದಿರಿಸಲಾಗಿದ್ದು, ವರ್ಷದೊಳಗೆ ಪುತ್ಥಳಿ ಅನಾವರಣಗೊಳಿಸಲಾಗುವುದು.

ಪಂಚಮಸಾಲಿ ಸಮಾಜದಿಂದ ಪ್ರತಿಭಾನ್ವಿತರಿಗೆ ಪುರಸ್ಕಾರ

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿಪಟ್ಟಣದ ಹಳೇವೂರಿನಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಕಂಚಿನ ಪುತ್ಥಳಿ ನಿರ್ಮಾಣಕ್ಕೆ ₹೫೦ಲಕ್ಷ ಅನುದಾನ ಕಾಯ್ದಿರಿಸಲಾಗಿದ್ದು, ವರ್ಷದೊಳಗೆ ಪುತ್ಥಳಿ ಅನಾವರಣಗೊಳಿಸಲಾಗುವುದು ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.ಪಟ್ಟಣದ ಪಂಚಮಸಾಲಿ ಭವನದ ಬಳಿ ದಿವಂಗತ ಅಕ್ಕಿ ಕೊಟ್ರಪ್ಪನವರ ವೇದಿಕೆಯಲ್ಲಿ ತಾಲೂಕು ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ನಂಬಿಕೆಯ ಸಮಾಜ. ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತಹ ಸಮಾಜವಾಗಿದೆ. ಸಮಾಜದ ಬೆಂಬಲದಿಂದ ಶಾಸಕನಾಗಿದ್ದೇನೆ. ವೀರಶೈವ ಲಿಂಗಾಯತ ಸಮಾಜ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಸಮಾಜವಾಗಿದೆ. ಆದರೆ, ಸಮೀಕ್ಷೆಯಲ್ಲಿ ಬಹಳ ಕಡಿಮೆ ಸಂಖ್ಯೆಯಲ್ಲಿ ರಾಜ್ಯ ಸರ್ಕಾರ ತೋರಿಸುತ್ತದೆ. ರೈತರ ವಿಷಯದಲ್ಲಿ ರಾಜಕೀಯ ಮಾಡುವುದು ಸೂಕ್ತವಲ್ಲ. ವಿದ್ಯಾರ್ಥಿ, ರೈತ ಮತ್ತು ಸೈನಿಕರ ವಿಷಯದಲ್ಲಿ ಸರ್ಕಾರಗಳು ತಾರತಮ್ಯ ಮಾಡಬಾರದು. ವಿದ್ಯಾರ್ಥಿಗಳು ನಿರಂತರ ಶ್ರಮದಿಂದ ಉತ್ತಮ ಅಂಕಗಳನ್ನು ಪಡೆದು, ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸದ ಸಂಗತಿ. ವಿದ್ಯಾರ್ಥಿಗಳ ಭವಿಷ್ಯ ಉಜ್ವಲಗೊಳ್ಳಲಿ ಎಂದರು.ತಾಲೂಕಿನ ಬಾಚಿಗೊಂಡನಹಳ್ಳಿ ಬಳಿಯ ಐದು ಎಕರೆ ನಿವೇಶನವನ್ನು ಸಮಾಜದ ಶಾಲೆ ಸ್ಥಾಪನೆಗೆ ಒದಗಿಸಲಾಗುವುದು. ಭವನದ ಆವರಣದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ಭರವಸೆ ನೀಡಿದರು. ವಿಜಯಪುರದ ನಿರಂಜನ ಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ಯೋಗ, ಪ್ರಾಣಾಯಾಮ, ಭಜನೆ ಮತ್ತು ಪ್ರಸನ್ನತೆ ಅತಿ ಮುಖ್ಯವಾಗಿದೆ ಎಂದರು.ಗದ್ದಿಕೇರಿ ವಿರಕ್ತ ಮಠದ ಇಮ್ಮಡಿ ಮಹಾಂತ ಸ್ವಾಮೀಜಿ ಮಾತನಾಡಿ, ದೇಶ ಮತ್ತು ಧರ್ಮದ ಬಗ್ಗೆ ಪ್ರೀತಿ ಇರಲಿ. ಶಿಕ್ಷಣದ ಜತೆಗೆ ಸಂಸ್ಕಾರ ಅಗತ್ಯ ಎಂದರು.ಸಮಾಜದ ರಾಜ್ಯ ನಿಕಟ ಪೂರ್ವ ಅಧ್ಯಕ್ಷ ಜಿ.ಪಿ.ಪಾಟೀಲ್, ಸಮಾಜದ ಗೌರವಾಧ್ಯಕ್ಷ ಭಾವಿಬೆಟ್ಟಪ್ಪ, ತಾಲೂಕು ಘಟಕದ ಮಾಜಿ ಅಧ್ಯಕ್ಷ ಅಕ್ಕಿ ಶಿವಕುಮಾರ, ಸಮಾಜದ ಹನಸಿ ಸಿದ್ದೇಶ್, ನಾಗರತ್ನ ಭಾವಿಕಟ್ಟಿ ಮಾತನಾಡಿದರು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.೮೫ಕ್ಕಿಂತ ಹೆಚ್ಚು ಅಂಕ ಪಡೆದ ಪಂಚಮಸಾಲಿ ಸಮಾಜದ ೬೩ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿಪಿಐ ಗುರುಬಸವರಾಜ್ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾಜದ ತಾಲೂಕು ಅಧ್ಯಕ್ಷ ಮಂಜುನಾಥಗೌಡ, ಉಪಾಧ್ಯಕ್ಷ ಜೋತೆಪ್ಪ, ರಾಜ್ಯ ಮಹಿಳಾ ಘಟಕದ ನಿಕಟ್ಟ ಪೂರ್ವ ಅಧ್ಯಕ್ಷೆ ಮಂಗಳ ಬಸವರಾಜ್, ಸಮಾಜದ ಟ್ರಸ್ಟಿ ಶಿವಶಂಕರಗೌಡ, ಸಮಾಜದ ರಾಜ್ಯ ಯುಘಟಕದ ಅಧ್ಯಕ್ಷ ಕಿಚಡಿ ಕೊಟ್ರೇಶ್, ಗ್ಯಾರಂಟಿ ಸಮಿತಿ ಸದಸ್ಯ ಸಂತೋಷ್, ವೈ.ಮಲ್ಲಿಕಾರ್ಜುನ, ಬಾಳಿಕಾಯಿ ಸಿದ್ದೇಶ್ ಇತರರಿದ್ದರು. ಕಾರ್ಯಕ್ರಮವನ್ನು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗುರುಬಸವರಾಜ ಸೊನ್ನದ, ಸಮಾಜದ ತಾಲೂಕು ಪ್ರಧಾನ ಕಾರ್ಯದರ್ಶಿ ಬಾವಿ ರವೀಂದ್ರ ನಿರ್ವಹಿಸಿದರು.