ಕುಷ್ಟಗಿಯ ಜನತಾ ಕಾಲನಿಯ ಮನೆಗಳು ಮುಂದೇ ಅಪಾರ ಪ್ರಮಾಣ ನೀರು ನಿಂತಿದ್ದು ದುರ್ನಾತ ಬೀರುತ್ತಿದೆ. ಜತೆಗೆ ಸಾಂಕ್ರಾಮಿಕ ರೋಗಗಳ ಭಯವೂ ಸ್ಥಳೀಯರಿಗೆ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟದಿಂದ ಮನೆಯ ಬಾಗಿಲು ಸಹ ತೆಗೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಕುಷ್ಟಗಿ:
ತಾಲೂಕಿನ ಕೇಸೂರು ಗ್ರಾಮದ 2ನೇ ವಾರ್ಡ್ನಲ್ಲಿ 15 ದಿನಗಳಿಂದ ಕುಡಿಯುವ ನೀರು ಪೋಲಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿಗೆ ಕ್ರಮಕೈಗೊಂಡಿಲ್ಲ. ಹೀಗಾಗಿ ಅಪಾರ ಪ್ರಮಾಣದ ನೀರು ವ್ಯರ್ಥವಾಗಿ ಹರಿಯುತ್ತಿದೆ.
ನಿತ್ಯ ಸಾವಿರಾರು ಲೀಟರ್ ನೀರು ಪೋಲಾಗುತ್ತಿದ್ದರೂ ಗ್ರಾಮೀಣ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಅಧಿಕಾರಿಗಳು ಕ್ರಮಕೈಗೊಳ್ಳದೆ ಇರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲೀನಗೊಂಡ ಪ್ರದೇಶ:
ಜನತಾ ಕಾಲನಿಯ ಮನೆಗಳು ಮುಂದೇ ಅಪಾರ ಪ್ರಮಾಣ ನೀರು ನಿಂತಿದ್ದು ದುರ್ನಾತ ಬೀರುತ್ತಿದೆ. ಜತೆಗೆ ಸಾಂಕ್ರಾಮಿಕ ರೋಗಗಳ ಭಯವೂ ಸ್ಥಳೀಯರಿಗೆ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟದಿಂದ ಮನೆಯ ಬಾಗಿಲು ಸಹ ತೆಗೆಯದಂತ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆ ನೀರಿನಿಂದ ಮಲೀನವಾಗಿದ್ದು ವಾಹನ ಸವಾರರು ಸಂಚಾರಕ್ಕೆ ಪರದಾಡುವಂತೆ ಆಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಬೃಹತ್ ಗುಂಡಿ:
ಮೂರು ದಿನಗಳ ಹಿಂದೆ ಪೈಪ್ಲೈನ್ ಕಾಮಗಾರಿ ರಿಪೇರಿಗಾಗಿ ಅಗೆದ ಗುಂಡಿಯು ದೊಡ್ಡದಿದ್ದು ಇದು ಮುಖ್ಯ ರಸ್ತೆಯ ಪಕ್ಕದಲ್ಲಿ ಇದೆ. ರಾತ್ರಿ ಈ ಗುಂಡಿ ಕಾಣದೆ ಇರುವುದರಿಂದ ಬೈಕ್ ಸವಾರರು, ಪಾದಚಾರಿಗಳು ಬೀಳುವ ಸಾಧ್ಯತೆ ಇದೆ. ತಕ್ಷಣ ಕಾಮಗಾರಿ ಮುಗಿಸಿ ಗುಂಡಿ ಮುಚ್ಚಬೇಕಾಗಿದೆ.
ನಮ್ಮ ಮಾತು ಕೇಳುತ್ತಿಲ್ಲ:ಅಪಾರ ಪ್ರಮಾಣ ನೀರು ಹರಿದು ಹೋಗುತ್ತಿರುವ ಕುರಿತು ಜೆಜೆಎಂ ಎಂಜಿನಿಯರ್ ಮೋಸಿನ್ ಅವರಿಗೆ ಹೇಳಿದರೂ ಸ್ಪಂದಿಸಿಲ್ಲ. ಅಧ್ಯಕ್ಷರು, ಸದಸ್ಯರು ಸೇರಿದಂತೆ ಎಲ್ಲ ಹೇಳಿದರೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಕೆಲಸಕ್ಕೂ ಬರುವುದಿಲ್ಲ. ಅವರ ಸಲುವಾಗಿ ನಮಗೆ ಸಾಕಾಗಿ ಹೋಗಿದೆ ಎಂದು ಪಿಡಿಒ ಗಂಗಯ್ಯ ವಸ್ತ್ರದ ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ನಮ್ಮ ಸಿಬ್ಬಂದಿಯಿಂದಲೇ ಕಾಮಗಾರಿ ದುರಸ್ತಿ ಆಗಿದ್ದರೇ ಮಾಡುತ್ತಿದ್ದೇವೆ. ಅದು ಅಸಾಧ್ಯವೆಂದು ಅರಿತ ಬಳಿಕ ಸುಮ್ಮನಾದೇವು ಎಂದರು.15 ದಿನಗಳಿಂದ ನೀರು ಪೋಲಾಗುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಕ್ರಮವಹಿಸಿಲ್ಲ. ಅತ್ತ ದುರಸ್ತಿಗಾಗಿ ಅಗೆದ ಗುಂಡಿಯೂ ಸಂಚಕಾರಕ್ಕಾಗಿ ಕಾಯುತ್ತಿದೆ. ತಕ್ಷಣ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.