ಶ್ರೀಘ್ರ ಸಂಗೊಳ್ಳಿ ರಾಯಣ್ಣನ ಕಂಚಿನ ಮೂರ್ತಿ

KannadaprabhaNewsNetwork |  
Published : Jun 01, 2026, 02:45 AM IST
ಅಹಿಲ್ಯಾಬಾಯಿ ಹೋಳ್ಕರ್‌ ಆಡಳಿತದ ಕಾಲ ಸುವರ್ಣ ಯುಗ: ಶಾಸಕ ಯತ್ನಾಳ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜ್ಯದಲ್ಲಿಯೇ ದಾಖಲೆ ಆಗುವ ರೀತಿಯಲ್ಲಿ ಜನಸ್ತೋಮ ಸೇರಿ ಅನಾವರಣ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ನಗರದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಮೂರ್ತಿಯನ್ನು ಪ್ರತಿಷ್ಠಾಪಿಸಿ, ರಾಜ್ಯದಲ್ಲಿಯೇ ದಾಖಲೆ ಆಗುವ ರೀತಿಯಲ್ಲಿ ಜನಸ್ತೋಮ ಸೇರಿ ಅನಾವರಣ ಮಾಡಲಾಗುವುದು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳರು ಭರವಸೆ ನೀಡಿದರು.

ನಗರದ ಅಹಿಲ್ಯಾಬಾಯಿ ಹೋಳ್ಕರ್‌ ವೃತ್ತದಲ್ಲಿ ಭಾನುವಾರ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್‌ ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ನಗರದಲ್ಲಿ ಮಹಾರಾಷ್ಟ್ರಕ್ಕೆ ಸೀಮಿತವಾಗಿದ್ದ ಹಿಂದೂ ಧರ್ಮ ರಕ್ಷಕಿ ಅಹಿಲ್ಯಾಬಾಯಿ ಹೋಳ್ಕರ್‌ ಅವರ ಇತಿಹಾಸ ರಾಜ್ಯದಲ್ಲಿಯೂ ಪ್ರಚುರಪಡಿಸಲು ಅವರ ವೃತ್ತ ಸೇರಿದಂತೆ ಅನೇಕ ಮಹಾಪುರುಷರ, ಸ್ವಾತಂತ್ರ್ಯ ಹೋರಾಟಗಾರರ, ನಾಡಿಗಾಗಿ ಸೇವೆ ಸಲ್ಲಿಸಿದ ಮಹನೀಯರ ವೃತ್ತಗಳ ಸ್ಥಾಪನೆ, ರಸ್ತೆಗಳಿಗೆ ಹೆಸರು ನಾಮಕರಣ ಮಾಡಲಾಗಿದೆ. ರಾಯಣ್ಣನವರ ಮೂರ್ತಿ ಬಾಕಿಯಿದ್ದು, 2027ರ ಅಗಸ್ಟ್ 15 ರಂದು ಅದನ್ನೂ ಮಾಡುವುದಾಗಿ ತಿಳಿಸಿದರು.

ಭಾರತದ ಇತಿಹಾಸದಲ್ಲಿ ರಾಜಮಾತಾ ಅಹಿಲ್ಯಾಬಾಯಿ ಹೋಳ್ಕರ್‌ ಅವರು ನಡೆಸಿದ 35 ವರ್ಷಗಳ ಸುಧೀರ್ಘ ಆಡಳಿತ ಕಾಲವನ್ನು ಸುವರ್ಣ ಯುಗ ಎಂದು ಕರೆಯಲಾಗುತ್ತದೆ. ಅಹಿಲ್ಯಾಬಾಯಿ ಅವರು ಸಮರ್ಥ ಆಡಳಿತಗಾರರಾಗಿದ್ದರು. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ, ಮಹಿಳಾ ಸೈನ್ಯವನ್ನು ಕಟ್ಟಿದರು. ಕೃಷಿ, ವ್ಯಾಪಾರ ಮತ್ತು ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. ಉತ್ತಮ ಆಡಳಿತ, ದೇವಸ್ಥಾನಗಳ ಜೀರ್ಣೋದ್ಧಾರ ಮತ್ತು ಸಾಮಾಜಿಕ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದರು. ಅವರ ಜನಪರ ಹಾಗೂ ದೈವಿಕ ಕಾರ್ಯಗಳನ್ನು ಪರಿಗಣಿಸಿ ಲೋಕಮಾತಾ ಎಂದು ಗೌರವದಿಂದ ಕರೆಯಲಾಗುತ್ತದೆ ಎಂದರು.

ಇದೇ ವೇಳೆ ಸಮುದಾಯದ ಮುಖಂಡರನ್ನು ಸನ್ಮಾನಿಸಲಾಯಿತು. ಮಹಾನಗರ ಪಾಲಿಕೆ ಸದಸ್ಯ ರಾಜಶೇಖರ ಕುರಿ ನೇತೃತ್ವ ವಹಿಸಿದ್ದರು. ಮಹಾನಗರ ಪಾಲಿಕೆ ಮೇಯರ್‌ ಎಂ.ಎಸ್.ಕರಡಿ, ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಜವಾಹರ ಗೋಸಾವಿ, ರಾಹುಲ ಜಾಧವ, ಮುಖಂಡರಾದ ಅಶೋಕ ಬೆಲ್ಲದ, ರಮೇಶ ಪಡಸಲಗಿ, ರಮೇಶ ವೀರಕರ, ಸೋಮು ರಣದೇವಿ, ರಾಜಶೇಖರ ಭಜಂತ್ರಿ, ನಾಗರಾಜ ಮುಳವಾಡ, ಶಂಕರ ಬಾಡಗಂಡಿ, ಮಾಂತೇಶ ಒಣರೊಟ್ಟಿ, ಗಿರೀಶ ಕೆಳಗಡೆ ಸೇರಿದಂತೆ ಹಿತೈಷಿಗಳು, ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಅಹಿಲ್ಯಾಬಾಯಿ ಹೋಳ್ಕರ್ ಮಹಿಳೆಯರು ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಮಂತ್ಲಿ ಫಿಕ್ಸ್ ಮಾಡಿಯೂ ಸಚಿವ ಸ್ಥಾನ ಕೊಡಬಹುದು

136 ಶಾಸಕರು ಮಂತ್ರಿಗಳು ಆಗಬೇಕು ಎನ್ನುತ್ತಾರೆ. ಕೆಲವರು ಸೇವೆ ಮಾಡ್ತೀವಿ ಎಂದು, ಕೆಲವರು ಲೂಟಿ ಮಾಡ್ತೋಕೆ ಸಚಿವ ಸ್ಥಾನ ಕೇಳ್ತಾರೆ. ದುಡ್ಡಿಗೆ ಸಚಿವ ಸ್ಥಾನ ವ್ಯಾಪಾರ ಆಗಬಹುದು. ಮಂತ್ಲಿ ಫಿಕ್ಸ್ ಮಾಡಿಯೂ ಸಚಿವ ಸ್ಥಾನ ಕೊಡಬಹುದು ಎಂದು ಯತ್ನಾಳ ಹೊಸ ಬಾಂಬ್ ಹಾಕಿದರು. ಸಿದ್ದರಾಮಯ್ಯರನ್ನು ತೆಗೆದಿದ್ದು ಈಗ ಬಹಳ ಜನರಿಗೆ ನೋವಾಗ್ತಿದೆ, ಸಿದ್ದರಾಮಯ್ಯಗೆ ಬೆನ್ನ ಹಿಂದೆ ಇದ್ದು ಚೂರಿ ಹಾಕಿದ್ರು. ಅವರು ಯಾರು ಅನ್ನೋದು ಈಗ ಗೊತ್ತಾಗ್ತಿದೆ, ಸಿದ್ದರಾಮಯ್ಯ ಮಗ್ಗಲು ಇದ್ದವರು ಚೂರಿ ಹಾಕಿದ್ದಾರೆ. ಇದು ಹಾಲುಮತ ಸಮಾಜಕ್ಕೂ ಗೊತ್ತಾಗಿದೆ. ಸಿದ್ದರಾಮಯ್ಯರಿಗೆ ಹೀಗೆ ಅವಮಾನ ಮಾಡಬಾರದಿತ್ತು. ಕಾಂಗ್ರೆಸ್ ಪಕ್ಷ ಅಧಿಕಾರ ಇರುವಲ್ಲಿ ಎಲ್ಲ ಕಡೆ ಮೇಲ್ಜಾತಿಯವರೆ ಸಿಎಂ ಆಗಿದ್ದಾರೆ. ಎಲ್ಲಾ ಮೇಲ್ಜಾತಿಯವರೆ ಮುಖ್ಯಮಂತ್ರಿ ಆಗಿದ್ದಾರೆ, ಈಗ ರಾಹುಲ್‌ ಗಾಂಧಿಗೆ ದಲಿತರು, ಹಿಂದುಳಿದವರ ಬಗ್ಗೆ ಮಾತಾಡೋ ಅರ್ಹತೆ ಉಳಿದಿಲ್ಲ. ರಾಹುಲ್ ಗಾಂಧಿ ದಲಿತ ವಿರೋಧಿ, ಹಿಂದುಳಿದವರ ವಿರೋಧಿ ಎಂದರು.

ಡಿ.ಕೆ.ಶಿವಕುಮಾರ ಸಿಎಂ ಆಗುತ್ತಿರುವ ಸಂತೋಷ ಬಿಜೆಪಿ ರಾಜ್ಯಾಧ್ಯಕ್ಷರಿಗೆ ಇದೆ. ಡಿಕೆಶಿ ಮೊದಲ ಫೋನ್ ಹೋಗಿದ್ದೆ ಬಿಜೆಪಿ ರಾಜ್ಯಾಧ್ಯಕ್ಷರಿಗೆ. ತಂದೆ ಫ್ರೆಂಡ್ ಹೋದ್ರು, ನನ್ನ ಪಾಟ್ನರ್‌ ಬಂದ್ರು, ಡಿಕೆಶಿ ಸಿಎಂ ಆಗಿದ್ದಕ್ಕೆ ಮುಸ್ಲಿಂರು ಸಂಭ್ರಮಿಸಿದ್ದಾರೆ. ಸಿದ್ದರಾಮಯ್ಯ ಮುಸ್ಲಿಂರಿಗೆ ಬಹಳ ಮಾಡಿದ್ದಾರೆ. ಒಬ್ಬ ಮುಸ್ಲಿಂ ವಿರೋಧಿಸಲಿಲ್ಲ, ಹಿಂದೂಗಳು ಹೀನಾಯವಾಗಿ ಸಿದ್ದರಾಮಯ್ಯ ಬಗ್ಗೆ ಮಾತನಾಡಲ್ಲ. ನಾನು ಸಿದ್ದರಾಮಯ್ಯ ವಿರುದ್ಧ ಮಾತನಾಡಲ್ಲ. ನಮ್ಮ ಫೈಲ್ ಗಳಿದ್ದರೂ ಯತ್ನಾಳ ಫೈಲ್ ತೆಗೆದುಕೊಂಡು ಬನ್ನಿ ಎನ್ನುತ್ತಿದ್ರು. ಈಗ ಬೇರೆಯವರ ಫೈಲ್‌ಗಳು ಓಪನ್ ಆಗ್ತಾವೆ ಹುಷಾರ್‌ ಎಂದು ಯತ್ನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಳಕಲ್ಲ ಬಸ್ ನಿಲ್ದಾಣದಲ್ಲಿ ಸೌಲಭ್ಯಗಳು ಮರೀಚಿಕೆ
ಗಣೇಶನಿಗೆ 101 ತೆಂಗಿನಕಾಯಿ ಒಡೆದು ಕೈ ಕಾರ್ಯಕರ್ತರ ಪೂಜೆ