ಕನ್ನಡಪ್ರಭ ವಾರ್ತೆ ಮಡಿಕೇರಿ
ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಕ್ರೀಡಾಪಟು ಡಾ. ಪುಷ್ಪಾ ಕುಟ್ಟಣ್ಣ, ಸಿಬಿಎಸ್ಇ ಪರಿವೀಕ್ಷಕ ಅಫ್ಸರ್ ಅಹಮದ್ ಮತ್ತು ಶಾಲಾ ಕ್ರೀಡಾಧ್ಯಕ್ಷರಾದ ರಘು ಮಾದಪ್ಪ ಅವರನ್ನು ಶಾಲಾ ವಾದ್ಯದೊಂದಿಗೆ ಶಾಲಾ ಪ್ರಾಂಶುಪಾಲರು, ಆಡಳಿತಾಧಿಕಾರಿಗಳು ಮತ್ತು ಕ್ರೀಡಾ ಹಾಗೂ ದೈಹಿಕ ಶಿಕ್ಷಕರು ಸ್ವಾಗತಿಸಿದರು. ಅತಿತಿಗಳು ಸಿಬಿಎಸ್ಇ ಕ್ರೀಡಾ ಧ್ವಜಾರೋಹಣ ಮಾಡುವ ಮೂಲಕ ಟೂರ್ನಮೆಂಟ್ಗೆ ಚಾಲನೆ ನೀಡಿದರು.
ಆಟಗಾರರ ಪಥಸಂಚಲನವು ಶಿಸ್ತಿನ ಮತ್ತು ಏಕತೆಯ ಪ್ರತೀಕವಾಗಿ ಜನರ ಮನಸೆಳೆಯಿತು. ಪರ್ಲಿನ್ ಪೊನ್ನಮ್ಮ ಓಲಿಂಪಿಕ್ ಜ್ಯೋತಿಯನ್ನು ಬೆಳಗಿಸಿ ಪ್ರತಿಜ್ಞೆ ಸ್ವೀಕರಿಸಿದರು.ಶಾಲೆ ಪ್ರಾಂಶುಪಾಲರಾದ ಸುಮಿತ್ರಾ ಕೆ.ಎಸ್. ಕ್ರೀಡೆಯ ಮಹತ್ವ ಮತ್ತು ಯುವ ಆಟಗಾರರ ತಂಡದ ಕೆಲಸದ ಅಗತ್ಯವನ್ನು ವಿವರಿಸಿ ಸ್ವಾಗತಿಸಿದರು.
ಮುಖ್ಯ ಅತಿಥಿ ಪುಷ್ಪಾ ಕುಟ್ಟಣ್ಣ ಮಾತನಾಡಿ, ಕೊಡಗು ವಿದ್ಯಾಲಯ ಶಾಲೆಯು ಇಂತಹ ಒಂದು ಬೃಹತ್ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಿರುವುದು ನಮ್ಮ ಕೊಡಗಿಗೆ ಒಂದು ಹೆಮ್ಮೆಯ ವಿಷಯ ಎಂದು ಹೇಳಿದರು.ಭಾರತ ಕ್ರೀಡಾ ಪ್ರಾಧಿಕಾರ (ಸಾಯ್), ಮಡಿಕೇರಿ ಮತ್ತು ಕೊಡಗು ವಿದ್ಯಾಲಯದ ಹಳೆ ವಿದ್ಯಾರ್ಥಿಗಳ ನಡುವಿನ ಪ್ರದರ್ಶನ ಪಂದ್ಯ ನಡೆಯಿತು. ರೋಚಕ ಆಟದಲ್ಲಿ, ಹಳೆ ವಿದ್ಯಾರ್ಥಿ ತಂಡ ಜಯಶಾಲಿಯಾಗಿ ಹೊರಹೊಮ್ಮಿತು. ಎರಡೂ ತಂಡಗಳ ಆಟಗಾರರು ಮತ್ತು ಕೋಚ್ಗಳಿಗೆ ಸ್ಮರಣಿಕೆಯನ್ನು ವಿತರಿಸಲಾಯಿತು.