ಹೃದಯಾಘಾತದಿಂದ ಬಿಎಸ್‌ಎಫ್‌ ವೀರಯೋಧ ಲೋಕೇಶ್ ಮೃತ

KannadaprabhaNewsNetwork |  
Published : Oct 27, 2025, 12:15 AM IST
26ಕೆಎಂಎನ್ ಡಿ27 | Kannada Prabha

ಸಾರಾಂಶ

ನಾಗಮಂಗಲ ತಾಲೂಕಿನ ಮೈಲಾರಪಟ್ಟಣ ಗ್ರಾಮದ ಲೇಟ್ ನಿಂಗಮ್ಮ ಮತ್ತು ಲೇಟ್ ಮಂದಾಲಿಗೌಡಪ್ಪ ದಂಪತಿ ಪುತ್ರ ಲೋಕೇಶ್(44) ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬಿಎಸ್‌ಎಫ್ ವೀರಯೋಧ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಂಜಾಬ್‌ನ ಪಠಾಣ್‌ಕೋಟ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ವೀರಯೋಧ ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಗುರುದಾಸ್‌ಪುರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಮೃತಪಟ್ಟಿದ್ದಾರೆ.

ತಾಲೂಕಿನ ಮೈಲಾರಪಟ್ಟಣ ಗ್ರಾಮದ ಲೇಟ್ ನಿಂಗಮ್ಮ ಮತ್ತು ಲೇಟ್ ಮಂದಾಲಿಗೌಡಪ್ಪ ದಂಪತಿ ಪುತ್ರ ಲೋಕೇಶ್(44) ಕರ್ತವ್ಯ ಮುಗಿಸಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಬಿಎಸ್‌ಎಫ್ ವೀರಯೋಧ.

ದೇಶ ಸೇವೆ ಮಾಡುವ ಉದ್ದೇಶದಿಂದ ಕಳೆದ 25 ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದ ಲೋಕೇಶ್ ಪಂಜಾಬ್‌ನ ಪಠಾಣ್‌ಕೋಟ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅ.23ರ ಗುರುವಾರ ರಾತ್ರಿ ಪಾಳಿ ಕೆಲಸ ಮುಗಿಸಿ ಶುಕ್ರವಾರ ಬೆಳಗ್ಗೆ 7 ಗಂಟೆ ಸಮಯದಲ್ಲಿ ಬ್ಯಾರಕ್‌ಗೆ ಬಂದು ಕಾಫಿ ಕುಡಿಯುತ್ತಿದ್ದರು.

ಈ ವೇಳೆ ಹೃದಯಾಘಾತ ಹಾಗೂ ಬ್ರೈನ್ ಸ್ಟ್ರೋಕ್‌ಗೆ ಒಳಗಾಗಿ ಕುಸಿದು ಬಿದ್ದ ಲೋಕೇಶ್ ಅವರನ್ನು ಸಮೀಪದ ಗುರುದಾಸ್‌ಪುರ್‌ನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಆದರೆ, ಚಿಕಿತ್ಸೆ ಫಲಿಸದೆ ಶನಿವಾರ ತಡರಾತ್ರಿ 1.40ರ ಸಮಯದಲ್ಲಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಹೇಳಲಾಗಿದೆ.

ಗುರುದಾಸ್‌ಪುರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಭೇಟಿ ಕೊಟ್ಟ ಬಿಎಸ್‌ಎಫ್ ಡಿಐಜಿ ಮತ್ತು ಕಮಾಂಡೆಡ್ ಅಧಿಕಾರಿಗಳು ಯೋಧ ಲೋಕೇಶ್ ಪಾರ್ಥಿವ ಶರೀರಕ್ಕೆ ಗೌರವ ರಕ್ಷೆ ನೀಡಿ ಅಮೃತ್‌ಸರ್‌ನ ರಾಜಾ ಸನ್ಸಿ ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಟ್ಟರು.

ಭಾನುವಾರ ರಾತ್ರಿ 10.30ರ ವಿಶೇಷ ವಿಮಾನದಲ್ಲಿ ಲೋಕೇಶ್ ಅವರ ಪಾರ್ಥಿವ ಶರೀರವನ್ನು ಪುಣೆ ಲೊಹೆಗಾನ್ ವಿಮಾನ ನಿಲ್ದಾಣಕ್ಕೆ ತಂದು ಅಲ್ಲಿಂದ ಮತ್ತೊಂದು ವಿಶೇಷ ವಿಮಾನದಲ್ಲಿ ಸೋಮವಾರ ಬೆಳಗ್ಗೆ 7.30ರ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತರಲಾಗುವುದು. ಬಳಿಕ ಬಿಎಸ್‌ಎಫ್ ಯೋಧರನ್ನೊಳಗೊಂಡ ಸೇನಾ ವಾಹನದಲ್ಲಿ ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಸ್ವಗ್ರಾಮ ಮೈಲಾರಪಟ್ಟಣಕ್ಕೆ ತರಲಾಗುವುದು.

ಗ್ರಾಮದಲ್ಲಿ ಸಾರ್ವಜನಿಕ ದರ್ಶನದ ನಂತರ ವಿಧಿ ವಿಧಾನಗಳನ್ನು ನೆರವೇರಿಸಲಾಗುವುದು. ಮಧ್ಯಾಹ್ನ 12.30ರ ಸುಮಾರಿಗೆ ಗ್ರಾಮದ ಹೊರವಲಯದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಲೋಕೇಶ್ ಅವರ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

ಮೃತ ಯೋಧ ಲೋಕೇಶ್ ಅವರು ಪತ್ನಿ ಆಶಾ, ಮಕ್ಕಳಾದ ಹರಿಣಿ ಎಲ್.ಗೌಡ, ಹಂಷಿಣಿ ಎಲ್.ಗೌಡ, ಸಹೋದರ ನಾಗರಾಜು, ಸಹೋದರಿ ಸವಿತ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಸಚಿವರ ಸಂತಾಪ:

ಪಂಜಾಬ್‌ನ ಬಾಲಕೋಟ್ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಮೈಲಾರಪಟ್ಟಣ ಗ್ರಾಮದ ಬಿಎಸ್‌ಎಫ್ ಯೋಧ ಲೋಕೇಶ್ ಅವರು ಬ್ರೈನ್ ಸ್ಟ್ರೋಕ್‌ನಿಂದ ನಿಧನರಾಗಿರುವ ಸುದ್ದಿ ತಿಳಿದು ಅತೀವ ದುಃಖವಾಗಿದೆ. ಲೋಕೇಶ್ ಅವರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿಯನ್ನು ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

ಎನ್.ಚಲುವರಾಯಸ್ವಾಮಿ, ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾದಾಪುರ ಸೋಮವಾರಪೇಟೆ ಹೋಬಳಿ ಕೇಂದ್ರದಿಂದ ಬೇರ್ಪಡಿಸಿ
ಸಮಾನತೆ ಸಾರಿದ ಮಡಿವಾಳ ಮಾಚಿದೇವ