ಕೊಪ್ಪಳ: ಬಿಎಸ್ ಪಿಎಲ್ ಕಾರ್ಖಾನೆ ಸ್ಥಾಪಿಸಬೇಕು ಇಲ್ಲವೇ ಅದಕ್ಕಾಗಿ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರಿ ಕೆಲಸವನ್ನಾದರೂ ನೀಡಿ ಎಂದು ಬಿಎಸ್ ಪಿಎಲ್ ಕಾರ್ಖಾನೆಗೆ ಭೂಮಿ ಕಳೆದುಕೊಂಡಿರುವ ಹಾಲವರ್ತಿ, ಬಸಾಪುರ ಕಿಡದಾಳ, ಬೇಳವಿನಾಳ ಮತ್ತು ಕೊಪ್ಪಳ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಇತ್ತ ಭೂಮಿಯೂ ಇಲ್ಲ, ಭೂಮಿ ಕಳೆದುಕೊಂಡಿರುವುದಕ್ಕೆ ಕಾರ್ಖಾನೆಯಲ್ಲಿ ಕೆಲಸವೂ ಇಲ್ಲದಂತೆ ರೈತರ ಮಕ್ಕಳು ನಿರುದ್ಯೋಗಿಗಳಾಗಿದ್ದಾರೆ. ಹೀಗಾಗಿ, ಸರ್ಕಾರ ಕೂಡಲೇ ಕಾರ್ಖಾನೆಯನ್ನಾದರೂ ಪ್ರಾರಂಭಿಸಲಿ ಅಥವಾ ಭೂಮಿ ಕಳೆದುಕೊಂಡ ರೈತರಿಗೆ ಸರ್ಕಾರಿ ನೌಕರಿಯನ್ನಾದರೂ ನೀಡಲಿ ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಕೊಪ್ಪಳ ನಗರದಲ್ಲಿ ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಹನುಮಂತಪ್ಪ ಕೌದಿ, ನಾಗರಾಜ ಗುರಿಕಾರ, ಕಾಮಣ್ಣ ಕಂಬಳಿ, ಹೇಮಪ್ಪ ಇಟಗಿ, ಹನುಮೇಶ ಹಾಲವರ್ತಿ, ಪ್ರಾಣೇಶ, ಗೋಣಿಬಸಪ್ಪ, ದೇವಮ್ಮ ಹರಿಜನ, ರೇವಪ್ಪ ಹರಿಜನ, ಗ್ಯಾನಪ್ಪ ತಳಕಲ್ ಮೊದಲಾದವರು ಇದ್ದರು.