20 ಅಡಿ ಆಳದ ಬಾವಿಗೆ ಬಿದ್ದ ಎಮ್ಮೆ; ಸಮಯಪ್ರಜ್ಞೆ ಮೆರೆದು ಜೀವ ಉಳಿಸಿದ ಅಗ್ನಿಶಾಮಕ ಸಿಬ್ಬಂದಿ!

KannadaprabhaNewsNetwork |  
Published : May 14, 2026, 01:15 AM IST
 | Kannada Prabha

ಸಾರಾಂಶ

ತಾಲೂಕಿನ ಕೆಳಗಿನ ಮಕ್ಕೇರಿ ಶೇಜವಾಡದ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಅನಿರೀಕ್ಷಿತ ಅವಘಡದಲ್ಲಿ, 20 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ.

ಕಾರವಾರ:

ತಾಲೂಕಿನ ಕೆಳಗಿನ ಮಕ್ಕೇರಿ ಶೇಜವಾಡದ ಬಳಿ ಬುಧವಾರ ಮುಂಜಾನೆ ಸಂಭವಿಸಿದ ಅನಿರೀಕ್ಷಿತ ಅವಘಡದಲ್ಲಿ, 20 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದ ಎಮ್ಮೆಯೊಂದನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ಅತ್ಯಂತ ಸಾಹಸಮಯವಾಗಿ ರಕ್ಷಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಯ ಈ ಚುರುಕಿನ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.ಬುಧವಾರ ಬೆಳಗ್ಗೆ ಸುಮಾರು 7 ಗಂಟೆಯ ವೇಳೆಗೆ ಸ್ಥಳೀಯ ನಿವಾಸಿ ಅಶೋಕ ನಾಯ್ಕ ಅವರಿಗೆ ಸೇರಿದ ಎಮ್ಮೆ ಮೇಯಲು ಹೋಗಿದ್ದಾಗ, ಪ್ರಮೀಳಾ ನಾಯ್ಕ ಎಂಬುವವರಿಗೆ ಸೇರಿದ ತೆರೆದ ಬಾವಿಗೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದೆ. ಸುಮಾರು 20 ಅಡಿ ಆಳವಿದ್ದ ಈ ಬಾವಿಯಲ್ಲಿ 5 ಅಡಿಯಷ್ಟು ನೀರಿದ್ದು, ಎಮ್ಮೆ ಹೊರಬರಲಾಗದೆ ತೀವ್ರವಾಗಿ ಒದ್ದಾಡುತ್ತಿತ್ತು.ಬಾವಿಯೊಳಗಿನಿಂದ ಎಮ್ಮೆಯ ಕಿರುಚಾಟ ಕೇಳಿ ಗಾಬರಿಗೊಂಡ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಎಮ್ಮೆಯನ್ನು ಮೇಲೆತ್ತಲು ಸ್ಥಳೀಯವಾಗಿ ಸಾಧ್ಯವಾಗದ ಕಾರಣ, ತಕ್ಷಣವೇ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಯಿತು. ಮಾಹಿತಿ ಪಡೆದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ದಳದ ವಾಹನವು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತಲುಪಿತು.ಅಗ್ನಿಶಾಮಕ ಠಾಣಾಧಿಕಾರಿ ಮಹಾಬಲೇಶ್ವರ ಎನ್. ಗೌಡ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿ ಹಗ್ಗ ಮತ್ತು ಬೆಲ್ಟ್‌ಗಳ ಸಹಾಯದಿಂದ ಬಾವಿಗೆ ಇಳಿದು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಅತ್ಯಂತ ಜಾಗರೂಕತೆಯಿಂದ ಎಮ್ಮೆಗೆ ಹಗ್ಗಗಳನ್ನು ಕಟ್ಟಿ, ಸ್ಥಳೀಯರ ಸಹಕಾರದೊಂದಿಗೆ ಅದನ್ನು ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು. ಎಮ್ಮೆಯ ಜೀವ ಉಳಿದಿದ್ದನ್ನು ಕಂಡು ಮಾಲಕ ಅಶೋಕ ನಾಯ್ಕ ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಟ್ಟರು.ತಮ್ಮ ಎಮ್ಮೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ಅಗ್ನಿಶಾಮಕ ತಂಡಕ್ಕೆ ಮಾಲಕರು ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದರು. ಈ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿನಾಯಕ ನಾಯ್ಕ, ಬಸವರಾಜ್ ಉಳ್ಳಾಗಡ್ಡಿ, ಮಿಥುನ್ ಅಂಕೋಲೆಕರ ಹಾಗೂ ವೀರಭದ್ರಯ್ಯ ಪಾಲ್ಗೊಂಡು ಸಮಯಪ್ರಜ್ಞೆ ಮೆರೆದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಫ್‌ಐಡಿ ಇಲ್ಲದೇ ರೈತರಿಗೆ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ರೈತರ ಆಗ್ರಹ
ನೀಟ್ ಪರೀಕ್ಷೆ ರದ್ದುಪಡಿಸಲು ಆಗ್ರಹ, ಎಸ್‌ಎಫ್‌ಐ ಪ್ರತಿಭಟನೆ