ಕೊಪ್ಪಳ: ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಜನತಾ ಪ್ರೇಮಿಯರ್ ಲೀಗ್ (ಜೆಪಿಎಲ್) ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗುವ ಮೂಲಕ ರಾಜ್ಯಮಟ್ಟದಲ್ಲಿ ಜಿಲ್ಲೆಗೆ ಕೀರ್ತಿ ತರಬೇಕೆಂದು ಅಂಜನಾದ್ರಿ ಫೈಟರ್ಸ್ ತಂಡದ ಆಟಗಾರರಿಗೆ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಕರೆ ನೀಡಿದರು.
ಮಾಜಿ ಪ್ರಧಾನ ಮಂತ್ರಿ ಹಾಗೂ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ ಜನ್ಮ ದಿನಾಚರಣೆ ಹಾಗೂ ಪಕ್ಷದ ರಜತ ಮಹೋತ್ಸವದ ಅಂಗವಾಗಿ ರಾಜ್ಯಮಟ್ಟದ ಜನತಾ ಪ್ರೇಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಬೆಂಗಳೂರಿನ ಮಾದಾವರದ ನೈಸ್ ಗ್ರೌಂಡ್ ನಲ್ಲಿ ಮೇ.15, 16 ಹಾಗೂ17ರಂದು ಆಯೋಜಿಸಲಾಗಿದೆ. ಕೊಪ್ಪಳ ಸೇರಿದಂತೆ ಒಟ್ಟು 26 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿವೆ. ಈ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಟ್ರೋಫಿ ಗೆಲ್ಲುವ ಮೂಲಕ ಕೊಪ್ಪಳಕ್ಕೆ ಕೀರ್ತಿ ತರಬೇಕು ಎಂದು ಹೇಳಿದರು.
ಒಟ್ಟು 16 ಆಟಗಾರರನ್ನು ಒಳಗೊಂಡ ತಂಡ ಕೊಪ್ಪಳ ಜಿಲ್ಲಾ ಜೆಡಿಎಸ್ ಘಟಕ ಪ್ರತಿನಿಧಿಸುತ್ತಿದೆ. ಜಿಲ್ಲೆಯ ಕ್ರೀಡಾ ಘಟಕದ ಅಧ್ಯಕ್ಷ ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಅಂಜನಾದ್ರಿ ಫೈಟರ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಹಾಗೂ ಯುವ ಘಟಕಗಳು ಜಂಟಿಯಾಗಿ ಪಂದ್ಯಾವಳಿ ಆಯೋಜಿಸಿವೆ. ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪಕ್ಷದ ಪ್ರಮುಖ ಮುಖಂಡರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ನಮ್ಮ ತಂಡ ಬಲಶಾಲಿಯಾಗಿದ್ದು ಚಾಂಪಿಯನ್ ಆಗುವ ವಿಶ್ವಾಸವಿದೆ ಎಂದು ಜಿಲ್ಲಾಧ್ಯಕ್ಷ ಸುರೇಶ್ ಭೂಮರಡ್ಡಿ ಹೇಳಿದರು.ಸಿ.ವಿ.ಚಂದ್ರಶೇಖರ್ ನಮ್ಮ ತಂಡದ ಪ್ರಾಯೋಜಕತ್ವ ವಹಿಸಿದ್ದಾರೆ.ತಂಡದ ಎಲ್ಲ ಆಟಗಾರರು ಪಕ್ಷದ ಸದಸ್ಯತ್ವ ಪಡೆದಿದ್ದಾರೆ.ಟ್ರೋಫಿ ಮತ್ತು ₹5 ಲಕ್ಷ ನಗದು ಪುರಸ್ಕಾರ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮುತ್ತೇವೆ.ಆ ಮೂಲಕ ಯುವಕರನ್ನು ದೊಡ್ಡ ಪ್ರಮಾಣದಲ್ಲಿ ಪಕ್ಷಕ್ಕೆ ಆಕರ್ಷಿಸುತ್ತೇವೆ ಎಂದು ಸೈಯದ್ ಮಹೇಮೂದ್ ಹುಸೇನಿ ಬಲ್ಲೆ ಹೇಳಿದರು.