ನರೇಗಾದಡಿ ಕುರಿ, ಮೇಕೆ ಶೆಡ್‌ ನಿರ್ಮಿಸಿಕೊಳ್ಳಿ: ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ

KannadaprabhaNewsNetwork | Published : Apr 9, 2025 12:34 AM

ಸಾರಾಂಶ

ರೈತರು ಕೃಷಿ ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಕುರಿ, ಮೇಕೆ ಸಾಕಾಣಿಕೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ರೈತರು ಕೃಷಿ ಜೊತೆಗೆ ನರೇಗಾ ಯೋಜನೆಯಡಿಯಲ್ಲಿ ಸಹಾಯಧನ ಪಡೆದು ಕುರಿ, ಮೇಕೆ ಸಾಕಾಣಿಕೆ ಶೆಡ್‌ಗಳನ್ನು ನಿರ್ಮಾಣ ಮಾಡಿಕೊಳ್ಳಿ ಎಂದು ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯಲ್ಲಿ ಸೋಮವಾರ ನಡೆದ ತಾಲೂಕು ಕೃಷಿಕ ಸಮಾಜದ ಪದಾಧಿಕಾರಿಗಳ ಪ್ರಥಮ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತಾಲೂಕಿನಲ್ಲಿ ಮೂರು ಸಾವಿರ ಕುರಿ, ಮೇಕೆ ಶೆಡ್ ನಿರ್ಮಿಸಿಕೊಳ್ಳಲು ನರೇಗಾದಲ್ಲಿ ಅವಕಾಶವಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದರು.

ತಾಲೂಕಿನಲ್ಲಿ ರೈತರಿಗೆ ಸದ್ಯಕ್ಕೆ ಬೀಜ, ರಸಗೊಬ್ಬರದ ಕೊರತೆ ಇಲ್ಲ. ಕೃಷಿಕ ಸಮಾಜ ಭವನ ನಿರ್ಮಾಣದ ಹತ್ತಿರ ಬೋರ್‌ವೆಲ್‌ನ ಅವಶ್ಯಕತೆ ಇದೆ ಎಂದು ಗಮನಕ್ಕೆ ಬಂದಿದ್ದು, ಶೀಘ್ರ ಕೊರೆಸಿಕೊಡಲಾಗವುದು ಎಂದು ಹೇಳಿದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿ.ಸಿ. ಉಮ್ಮೇಶ ಮಾತನಾಡಿ, ಇತ್ತೀಚೆಗೆ ರೈತರು ಹೊರಗಿನ ರಸಗೊಬ್ಬರಕ್ಕೆ ಹೆಚ್ಚು ಅವಲಂಬಿತರಾಗಿದ್ದಾರೆ. ಇದರಿಂದ ಖರ್ಚು ಜಾಸ್ತಿಯಾಗಿ ಆದಾಯ ಕಡಿಮೆಯಾಗುತ್ತದೆ. ಹಾಗಾಗಿ ರೈತರು ಸಾವಯವ ಗೊಬ್ಬರ ಬಳಕೆ ಮಾಡಬೇಕು ಇದರಿಂದ ಹೆಚ್ಚು ಇಳುವರಿ ಜೊತೆಗೆ ಅಧಿಕ ಆದಾಯ ಗಳಿಸಬಹುದು ಎಂದರು.

ರೈತರು ಸ್ಥಳೀಯವಾಗಿ ಸಿಗುವ ಕೃಷಿ ಸಂಪನ್ಮೂಲಗಳನ್ನು ಕ್ರೂಡೀಕರಿಸಿಕೊಂಡು ಮೌಲ್ಯವರ್ಧನ ಮಾಡಬೇಕು, ಕೃಷಿ ಉತ್ಪನ್ನಗಳಿಗೆ ತಾವೇ ಉದ್ಯಮಿಗಳಾಗಬೇಕು, ವ್ಯಾಪಾರ ವಹಿವಾಟು ತಾವೇ ನಡೆಸಬೇಕು ಆಗ ಆರ್ಥಿಕವಾಗಿ ಮುಂದೆ ಬರಬಹುದು ಎಂದು ಹೇಳಿದರು.

ಕೃಷಿಕ ಸಮಾಜದ ಜಿಲ್ಲಾ ಅಧ್ಯಕ್ಷ ರೇವಣಸಿದ್ದಪ್ಪ, ತಾಲೂಕು ಅಧ್ಯಕ್ಷ ಮಡಿವಾಳಪ್ಪ ಮಾತನಾಡಿದರು.

ಈ ಸಂದರ್ಭ ಕೃಷಿಕ ಸಮಾಜದ ತಾಲೂಕು ಉಪಾಧ್ಯಕ್ಷ ವಿಜಯಪ್ಪ, ಪುರಸಭೆ ಸದಸ್ಯ ಲಾಟಿ ದಾದಾಪೀರ, ತೋಟಗಾರಿಕೆ ಇಲಾಖೆಯ ಜಯಸಿಂಹ, ಸಾಮಾಜಿಕ ವಲಯ ಅರಣಾಧಿಕಾರಿ ದೇವರಾಜ, ಮತ್ತೂರು ಬಸವರಾಜ, ಸಾಸ್ವಿಹಳ್ಳಿ ನಾಗರಾಜ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.

Share this article