ನಾವೆಲ್ಲರೂ ಐಕ್ಯತೆಯಿಂದ ಇದ್ದಾಗ ಮಾತ್ರ ಸಶಕ್ತರಾಗಲು ಸಾಧ್ಯ.
ಕನ್ನಡಪ್ರಭ ವಾರ್ತೆ ಜೋಯಿಡಾ
ಈಶ ಭಕ್ತಿಯೇ ದೇಶ ಭಕ್ತಿ, ನಮ್ಮಲ್ಲಿ ಒಗ್ಗಟ್ಟು ಅತ್ಯಂತ ಅವಶ್ಯಕವಾಗಿದ್ದು, ಒಗ್ಗಟ್ಟು ಇಲ್ಲದ ಕಾರಣಕ್ಕಾಗಿಯೇ ಹಿಂದೆ ಬ್ರಿಟಿಷರು ನಮ್ಮ ದೇಶವನ್ನಾಳಿದರು. ಆದ್ದರಿಂದ ನಾವೆಲ್ಲರೂ ಐಕ್ಯತೆಯಿಂದ ಇದ್ದಾಗ ಮಾತ್ರ ಸಶಕ್ತರಾಗಲು ಸಾಧ್ಯ ಎಂದು ಅಂಬಿಕಾನಗರದ ಶ್ರೀ ಗುರು ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.ತಾಲೂಕಿನ ಕುಂಬಾರವಾಡಾದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಹಿಂದೂ ವಿರಾಟ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಕುಂಬಾರವಾಡಾ ಮತ್ತು ಕಾರಟೋಳಿ ಮಂಡಲಗಳ ಹಳ್ಳಿ ಹಳ್ಳಿಗಳಿಂದ ಸುಮಾರು 1200ಕ್ಕೂ ಹೆಚ್ಚು ಹಿಂದೂ ಸಮಾಜ ಬಾಂಧವರು ಪಾಲ್ಗೊಂಡಿದ್ದ ಈ ಸಮಾವೇಶವು ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಂಗವಾಗಿ ಮಹಾಸತಿ ದೇವಸ್ಥಾನದಿಂದ ಕ್ಷೇತ್ರಪಾಲ ದೇವಸ್ಥಾನದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಮಹಿಳೆಯರು ಪೂರ್ಣಕುಂಭಗಳೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರೆ, ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಅನೇಕ ಕಲಾತಂಡಗಳು ಪ್ರದರ್ಶನ ನೀಡುವ ಮೂಲಕ ಸಮ್ಮೇಳನದ ಮೆರಗನ್ನು ಹೆಚ್ಚಿಸಿದವು.ಜಿಲ್ಲಾ ಸಂಪರ್ಕ ಪ್ರಮುಖರಾದ ಅರ್ಜುನ ನಾಯ್ಕ ದಿಕ್ಸೂಚಿ ಭಾಷಣ ಮಾಡಿದರು. ಹಿರಿಯ ವೈದ್ಯರಾದ ಡಾ. ಎಸ್. ಕೆ. ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನರೇಂದ್ರ ಮಹಾರಾಜ ಸಂಪ್ರದಾಯದ ವಿಕಾಸ ವೇಳಿಪ್, ವಾರಕರಿ ಸಂಪ್ರದಾಯದ ಸಂದೀಪ ವೇಳಿಪ್, ಅಯ್ಯಪ್ಪ ಸ್ವಾಮಿ ಸಂಪ್ರದಾಯದ ಸಂಜಯ ಡೇರೆಕರ್, ಜಾನಪದ ಹಾಡುಗಾರ್ತಿ ರುಕ್ಮಿಣಿ ವೇಳಿಪ್ ಹಾಗೂ ಆಯೋಜನಾ ಸಮಿತಿಯ ಪ್ರಮುಖರಾದ ಪುತ್ತು ಶೇಟ, ಚಂದ್ರಕಾಂತ ದೇಸಾಯಿ ಮತ್ತು ಚಂದ್ರಶೇಖರ ಬಂಗಾರಿ ಉಪಸ್ಥಿತರಿದ್ದರು.ಇದೇ ಸಂದರ್ಭ 15ಕ್ಕಿಂತ ಹೆಚ್ಚು ಸದಸ್ಯರಿರುವ ಅವಿಭಕ್ತ ಕುಟುಂಬದ ಪ್ರಮುಖರನ್ನು ಹಾಗೂ ಎಲ್ಲ ಗ್ರಾಮಗಳ ಮಿರಾಶಿಯವರನ್ನು ಗೌರವಿಸಲಾಯಿತು. ಹನುಮಾನ್ ಚಾಲೀಸಾ ಪಠಣ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಕಾರ್ಯಕ್ರಮವು ಭಕ್ತಿಯುತವಾಗಿ ಮುಕ್ತಾಯಗೊಂಡಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.