ರಾಮನಗರ: ಸಮೀಪದ ಬೈರಮಂಗಲ ಕೆರೆಯ ಬಳಿ ವೃಷಭಾವತಿ ನದಿಗೆ ಅಡ್ಡವಾಗಿ ನಿರ್ಮಿಸಿರುವ ಸೇತುವೆ ಕೆಳಗೆ 100 ಮತ್ತು 500 ರು.ಗಳ ಮುಖ ಬೆಲೆಯ ನಕಲಿ ನೋಟು ಕಟ್ಟುಗಳಿದ್ದ ಚೀಲ ಪತ್ತೆಯಾಗಿದೆ.
ಕೊಳಚೆ ನೀರಿನ ಮಧ್ಯೆ ನೋಟಿನ ಕಂತೆಗಳು ಬಿಡಿಬಿಡಿಯಾಗಿ ಬಿದ್ದಿದ್ದು, ಚೀಲಗಳಲ್ಲಿದ್ದ ನೋಟುಗಳು ನೋಡುವುದಕ್ಕೆ ಅಸಲಿಯಂತೆ ಕಾಣುತ್ತಿದ್ದವು. ಬುಧವಾರ ಬೆಳಗ್ಗೆ ಇದನ್ನು ಕಂಡ ವಾಹನ ಸವಾರನೊಬ್ಬ ತನ್ನ ಮೊಬೈಲ್ನಲ್ಲಿ ವಿಡಿಯೊ ಮತ್ತು ಫೋಟೊಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.
ಇದಾದ ಸ್ವಲ್ಪ ಹೊತ್ತಿನಲ್ಲಿಯೇ ವಿಷಯ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿ ರಸ್ತೆಯಲ್ಲಿ ಸಂಚರಿಸುವವರು ಹಾಗೂ ಸುತ್ತಮುತ್ತಲಿನ ಊರಿನವರು ವೃಷಭಾವತಿ ನದಿ ಸೇತುವೆ ಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ನೋಟಿನ ಕಂತೆಗಳನ್ನು ಕಂಡು ಕುತೂಹಲದಿಂದ ವೀಕ್ಷಿಸುತ್ತಿದ್ದರು. ನಂತರ ಚೆಲ್ಲಾಪಿಲ್ಲಿಯಾಗಿದ್ದ ನೋಟಿನ ಕಂತೆಗಳನ್ನು ಕೆಲವರು ಫೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಬಿಡದಿ ಪೊಲೀಸರು, ನೋಟುಗಳಿದ್ದ ಜಾಗಕ್ಕೆ ತೆರಳಿ ಪರಿಶೀಲಿಸಿದ ನಂತರ ಅವೆಲ್ಲವೂ ನಕಲಿ ನೋಟುಗಳೆಂದು ದೃಢಪಟ್ಟಿವೆ. 100 ಮತ್ತು 500 ರೂಪಾಯಿ ನೋಟಿನಂತೆ ಕಾಣುವ ಜೆರಾಕ್ಸ್ ಪ್ರತಿಗಳೆಂದು ಗೊತ್ತಾಗಿದೆ. ಅಲ್ಲದೆ ನಕಲಿ ನೋಟುಗಳ ಮೇಲೆ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಶಾಲಾ ಪ್ರಾಜೆಕ್ಟ್ ಬಳಕೆ ಉದ್ದೇಶಕ್ಕಾಗಿ(ಫಾರ್ ಪ್ರಾಜೆಕ್ಟ್ ಸ್ಕೂಲ್ ಯೂಸ್ ಓನ್ಲಿ) ಎಂದು ನಮೂದಿಸಲಾಗಿದೆ. ನೋಟುಗಳನ್ನು ವಶಕ್ಕೆ ಪಡೆದ ಪೊಲೀಸರು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಭೈರಮಂಗಲ ಕೆರೆಯ ಬಳಿ ವೃಷಭಾವತಿ ನದಿಯ ಕೊಳಚೆ ನೀರಿನಲ್ಲಿ ನಕಲಿ ನೋಟುಗಳು ಕಂತೆ ಹಾಗೂ ಚೀಲವನ್ನು ಎಸೆದಿರುವುದು.