ಲಕ್ಷ್ಮೇಶ್ವರ: ಪತ್ರಕರ್ತರು ಸಮಾಜದ ಓರೆಕೋರೆ ತಿದ್ದುವ ಕಾರ್ಯ ಮಾಡುವ ಜತೆ ನೈಜ ಸಮಸ್ಯೆಗಳನ್ನು ಅಧಿಕಾರಿ ಮತ್ತು ರಾಜಕಾರಣಿಗಳ ಮುಂದೆ ತೆರೆದಿಡುವ ಕಾರ್ಯ ಮಾಡಬೇಕು ಎಂದು ಸಿಪಿಐ ನಾಗರಾಜ ಮಾಡಳ್ಳಿ ಹೇಳಿದರು.
ಸಂವಿಧಾನದ ನಾಲ್ಕನೇ ಅಂಗವಾಗಿ ಗುರುತಿಸಲ್ಪಡುವ ಪತ್ರಿಕಾ ರಂಗವು ಈಗ ಹೆಚ್ಚು ಶಸಕ್ತವಾಗಿದೆ. ಸಮಾಜದಲ್ಲಿನ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಮೂಲಕ ಸಮಸ್ಯೆಗೆ ಪರಿಹಾರ ಒದಗಿಸಿಕೊಡುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವಾಗಿದೆ. ಆಧುನಿಕ ಜಗತ್ತಿನಲ್ಲಿ ಪತ್ರಕರ್ತರ ಜವಾಬ್ದಾರಿ ಹೆಚ್ಚಾಗಿದೆ. ಸಮಾಜದ ಜನರು ನಿಮ್ಮಿಂದ ಸುಧಾರಣೆ ಬಯಸುವ ಕಾರ್ಯ ಮಾಡುತ್ತಿರುವುದು ನಿಮ್ಮ ಮೇಲೆ ಸಾರ್ವಜನಿಕರು ಇಟ್ಟಿರುವ ಭರವಸೆಯಾಗಿದೆ.ನೋಂದವರ, ದೀನ ದಲಿತರ, ತುಳಿತಕ್ಕೆ ಒಳಗಾದವರ, ರೈತರ ಕಷ್ಟಗಳ ಬಗ್ಗೆ ವರದಿ ಮಾಡುವ ಮೂಲಕ ಅವರನ್ನು ಮುಖ್ಯವಾಹಿನಿಗೆ ತರುವಲ್ಲಿ ಪತ್ರಕರ್ತರ ಮೇಲೆ ಗುರುತರ ಜವಾಬ್ದಾರಿ ಇದೆ ಎಂದು ಹೇಳಿದರು.
ಈ ವೇಳೆ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಬಾಳೇಶ್ವರಮಠ ಮಾತನಾಡಿ, ಪತ್ರಕರ್ತರು ತಮ್ಮೆಲ್ಲ ನೋವು ನುಂಗಿ ಸಮಾಜದ ಹಿತಕ್ಕಾಗಿ ದುಡಿಯುತ್ತಾರೆ, ಸರ್ಕಾರ ಪತ್ರಕರ್ತರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ, ತಮ್ಮ ಹೆಸರು ಮತ್ತು ತಾವು ಹೇಳಿಕೆ ಕೊಟ್ಟ ಸುದ್ದಿ ಹೇಗೆ ಬಂದಿದೆ ಎಂಬ ಬಗ್ಗೆ ಮಾತ್ರ ವಿಚಾರಿಸುತ್ತಾರೆ. ಆದರೆ ಪತ್ರಕರ್ತರ ಸಮಸ್ಯೆ ಬಗ್ಗೆ ಬೆಳಕು ಚೆಲ್ಲುವ ಕಾರ್ಯ ಯಾವ ಅಧಿಕಾರಿ ಮತ್ತು ರಾಜಕಾರಣಿಗಳು ಮಾಡದಿರುವುದು ದುರ್ದೈವದ ಸಂಗತಿಯಾಗಿದೆ. ಪತ್ರಕರ್ತರು ಪ್ರತಿನಿತ್ಯ ಒಂದಿಲ್ಲೊಂದು ಭಯದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಭಯಮುಕ್ತ ವಾತಾವರಣ ನಿರ್ಮಿಸುವ ಕಾರ್ಯ ರಾಜಕೀಯ ನಾಯಕರು ಮಾಡಬೇಕು ಎಂದು ಹೇಳಿದರು.ಈ ವೇಳೆ ಚಂಬಣ್ಣ ಬಾಳಿಕಾಯಿ, ಪುರ್ಣಾಜಿ ಕರಾಟೆ, ಕಸಾಪ ಅಧ್ಯಕ್ಷ ಈಶ್ವರ ಮೆಡ್ಲೇರಿ, ಡಾ. ಶ್ರೀಕಾಂತ ಖಾಟೆವಾಲೆ, ಸುರೇಶ ಕುಂಬಾರ ಮಾತನಾಡಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪೂರ, ವೀರಣ್ಣ ಪವಾಡದ, ಪದ್ಮರಾಜ ಪಾಟೀಲ, ಬಿ.ಎಂ. ಕುಂಬಾರ, ಗಂಗಾಧರ ಮೆಣಸಿನಕಾಯಿ, ಶರಣು ಗೋಡಿ, ರವಿ ಲಿಂಗಶೆಟ್ಟಿ, ನಾಗೇಶ ಅಮರಾಪೂರ, ಎನ್.ಎರ್.ಸಾತಪೂತೆ, ಸತೀಶ ಬೊಮಲೆ, ಗಿರೀಶ್ ನೇಕಾರ, ನಾಗರಾಜ ಮಜ್ಜಿಗುಡ್ಡ ಇದ್ದರು. ರಮೇಶ ನಾಡಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹಣಗಿ ನಿರೂಪಿಸಿದರು. ದಿಗಂಬರ ಪೂಜಾರ ವಂದಿಸಿದರು.