ಸಂಪುಟ ವಿಸ್ತರಣೆಗೆ ಕೈ ಹಾಕಿದರೆ ಸಿಎಂ ಕುರ್ಚಿಗೆ ಕುತ್ತು

KannadaprabhaNewsNetwork |  
Published : Jul 08, 2026, 01:30 AM IST
7ಕೆಡಿವಿಜಿ4, 5-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ. ................7ಕೆಡಿವಿಜಿ6-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೆ.ಎಂ.ಸುರೇಶ ಪುಷ್ಪಾರ್ಚನೆ ಮಾಡಿದರು. | Kannada Prabha

ಸಾರಾಂಶ

ಕೇವಲ ಹತ್ತೇ ಹತ್ತು ಸಚಿವರೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಆಡಳಿತ ನಡೆಸಿರುವುದನ್ನು ನೋಡಿದರೆ ಸ್ವತಃ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿ ಕಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ ಸಂಪುಟದ ಬಗ್ಗೆ ವ್ಯಂಗ್ಯವಾಡಿದ್ದಾರೆ.

- ಹತ್ತೇ ಸಚಿವರೊಂದಿಗೆ ಮುಖ್ಯಮಂತ್ರಿ ಆಡಳಿತ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಲೇವಡಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೇವಲ ಹತ್ತೇ ಹತ್ತು ಸಚಿವರೊಂದಿಗೆ ರಾಜ್ಯದ ಮುಖ್ಯಮಂತ್ರಿಗಳು ಆಡಳಿತ ನಡೆಸಿರುವುದನ್ನು ನೋಡಿದರೆ ಸ್ವತಃ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿ ಕಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಿಎಂ ಡಿ.ಕೆ.ಶಿವಕುಮಾರ ಸಂಪುಟದ ಬಗ್ಗೆ ವ್ಯಂಗ್ಯವಾಡಿದರು.

ನಗರದ ಶ್ರೀನಿಧಿ ಕನ್ವೆನ್ಷನ್ ಹಾಲ್‌ನಲ್ಲಿ ಮಂಗಳವಾರ ಸಂಜೆ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಸಂಪುಟ ವಿಸ್ತರಣೆಗೆ ಕೈಹಾಕಿದರೆ ಮುಖ್ಯಮಂತ್ರಿ ಕುರ್ಚಿ ಭದ್ರವಾಗಿ ಇರುವುದಿಲ್ಲವೆಂಬುದು ಸ್ವತಃ ಸಿಎಂಗೂ ಗೊತ್ತಿದೆ ಎಂದರು.

ಮೂರನೇ ಮುಖ್ಯಮಂತ್ರಿ:

ಸಚಿವ ಸಂಪುಟ ವಿಸ್ತರಣೆಗೆ ಮುಖ್ಯಮಂತ್ರಿ ಯಾವಾಗ ಕೈ ಹಾಕುತ್ತಾರೋ ಆ ಕ್ಷಣವೇ ತಮ್ಮ ಬುಡಕ್ಕೆ ಬರುತ್ತದೆಂಬ ಭಯದ ಕಾರಣಕ್ಕೆ ಅಧಿಕಾರ ವಹಿಸಿಕೊಂಡು ತಿಂಗಳೇ ಕಳೆದರೂ ಸಂಪುಟ ವಿಸ್ತರಣೆಯ ದುಸ್ಸಾಹಸಕ್ಕೆ ಮುಂದಾಗಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕೌಂಟ್‌ಡೌನ್ ಸಹ ಶುರುವಾಗಿದೆ. ಮಾಧ್ಯಮದವರು, ಹೊರಗಿನ ಜನರಿಗೆ ಎಲ್ಲದೂ ಸದ್ಯಕ್ಕೆ ಸರಿಯಾದಂತೆ ಕಾಣಿಸಬಹುದು. ಆದರೆ, ಸಂಪುಟ ವಿಸ್ತರಣೆ ಯಾವ ದಿನ ಆಗುತ್ತದೋ ಅಂದಿನಿಂದಲೇ ರಾಜ್ಯದ ಮುಖ್ಯಮಂತ್ರಿ ಸ್ಥಾನದ ಕೌಂಟ್‌ಡೌನ್ ಆರಂಭವಾಗಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಈಗಾಗಲೇ ಆಂತರಿಕ ಕಚ್ಚಾಟ ಶುರುವಾಗಲಿದ್ದು, ಅದನ್ನು ತಡೆಯಲು ಯಾರಿಂದಲೂ ಸಾಧ್ಯವೂ ಇಲ್ಲ. ರಾಜ್ಯಕ್ಕೆ ಮೂರನೇ ಮುಖ್ಯಮಂತ್ರಿ ಬಂದರೂ ಅಚ್ಚರಿ ಇಲ್ಲ ಎಂದು ಅವರು ಹೇಳಿದರು.

ನಮ್ಮದೇ ಸ್ವಯಂಕೃತ ಅಪರಾಧ:

ಸ್ವಯಂಕೃತ ಅಪರಾಧದಿಂದ ಇವತ್ತು ನಾವು ವಿಪಕ್ಷದಲ್ಲಿದ್ದೇವೆ. ನಾವು ವಿರೋಧ ಪಕ್ಷದಲ್ಲಿ ಕೂಡಲು ಕಾಂಗ್ರೆಸ್ ಎಷ್ಟು ಕಾರಣ, ನಾವು ಎಷ್ಟು ಕಾರಣವೆಂದು ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ಆದರೆ, ನಮ್ಮದೇ ಸ್ವಯಂಕೃತಾಪರಾಧದಿಂದ ಇಲ್ಲಿ ನಿಂತಿದ್ದೇವೆಂಬ ವಾಸ್ತವವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಇನ್ನಾದರೂ ನಾವು ಪಕ್ಷ ಸಂಘಟನೆ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಶ್ರಮಿಸೋಣ ಎಂದು ಬಿ.ವೈ.ವಿಜಯೇಂದ್ರ ತಿಳಿಸಿದರು.

ಕೇಂದ್ರದ ಮಾಜಿ ಸಚಿವ ಡಾ. ಜಿ.ಎಂ. ಸಿದ್ದೇಶ್ವರ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೆ.ಎಂ.ಸುರೇಶ್‌ ಅವರನ್ನು ಗೆಲ್ಲಿಸಬೇಕು. ಈ ಹಿಂದೆ ಡಾ. ಎ.ಎಚ್. ಶಿವಯೋಗಿ ಸ್ವಾಮಿ ಸ್ಪರ್ಧಿಸಿದ್ದ ಚುನಾವಣೆಯಲ್ಲಿ 7-8 ಸಾವಿರ ಮತ ತಿರಸ್ಕೃತವಾಗಿದ್ದವು. ವಿದ್ಯಾವಂತರ ಮತವೇ ಹೀಗಾದರೆ ಹೇಗೆ? ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಮತದಾರರಿಗೆ ಬ್ಯಾಲೆಟ್ ಪತ್ರದ ನಮೂನೆ ನೀಡಿ, ನಿಯಮಾನುಸಾರ ಮತ ಚಲಾಯಿಸುವುದನ್ನು ತಿಳಿಸಿ ಕೊಡುವ ಕೆಲಸವಾಗಬೇಕು ಎಂದರು.

ಕೆ.ಎಂ.ಸುರೇಶಗೆ ಪ್ರಥಮ ಪ್ರಾಶಸ್ತ್ಯದ ಮತ:

ಸಾಮಾನ್ಯ ಚುನಾವಣೆಗಳಲ್ಲಿ 300 ಬ್ಯಾಲೆಟ್ ಪೋಸ್ಟ್‌ನಲ್ಲೇ ಮತ ಹಾಕಿದ್ದರಲ್ಲೇ ನೂರಾರು ತಿರಸ್ಕೃತವಾಗುತ್ತವೆ. ಮತ ತಿರಸ್ಕೃತವಾದರೆ ಪದವೀಧರರ ಕ್ಷೇತ್ರದ ಮತದಾರರು ಪಡೆದ ಪದವಿಗೂ ಶೋಭೆ ತರುವುದಿಲ್ಲ. ಪದವೀಧರರು ಮತ್ತೊಬ್ಬರಿಗೆ ತಿಳಿ ಹೇಳಿ, ನಮ್ಮ ಅಭ್ಯರ್ಥಿ ಕೆ.ಎಂ.ಸುರೇಶ್‌ಗೆ ಮತ ಕೇಳಬೇಕು. ನಗರ, ಗ್ರಾಮೀಣ ಪ್ರದೇಶದಲ್ಲಿ ಕೆ.ಎಂ.ಸುರೇಶ ಮೊದಲ ಸುತ್ತಿನಲ್ಲೇ ಗೆಲ್ಲುವುದನ್ನು ದಾವಣಗೆರೆಯಿಂದಲೇ ಮಾಡಿ, ತೋರಿಸಬೇಕು. ಕೆ.ಎಂ.ಸುರೇಶಗೆ ಪ್ರಥಮ ಪ್ರಾಶಸ್ತ್ಯದ ಮತ ಕೊಡಿಸಿ, ಗೆಲ್ಲಿಸಬೇಕು ಎಂದು ಅವರು ಮನವಿ ಮಾಡಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾ ಪೂರ್ವಭಾವಿ ಸಭೆ. ಪಕ್ಷ ಕೊಟ್ಟ ಕೆಲಸ ಕಾಯಾ, ವಾಚಾ, ಮನಸಾ ಸಂಪೂರ್ಣ ಸಂಕಲ್ಪದೊಂದಿಗೆ ಮಾಡುತ್ತೇವೆ. ನಮ್ಮ ಕಣ್ಣ ಮುಂದೆ ಚುನಾವಣೆಯನ್ನು ನಾವು ಮಾಡಬೇಕಾಗಿದೆ. ಕಾಂಗ್ರೆಸ್ ಸರ್ಕಾರವಿದೆ. ಆಡಳಿತ ಯಂತ್ರದ ದುರುಪಯೋಗ ಆಗುತ್ತದೆ. ಹಣ ಬಲ, ತೋಳ್ಬಲ ಈ ಚುನಾವಣೆಯಲ್ಲಿ ನಡೆಯಲ್ಲ. ಮತದಾರರ ಮನಸ್ಸನ್ನು ನಾವು ಮುಟ್ಟಬೇಕಿದೆ. ನಾವು, ನೀವೆಲ್ಲಾ ಸೇರಿ ಕೆ.ಎಂ.ಸುರೇಶ ಅವರನ್ನು ಗೆಲ್ಲಿಸುವ ಕೆಲಸ ಮಾಡೋಣ ಎಂದು ತಿಳಿಸಿದರು.

2 ಲಕ್ಷದಷ್ಟು ಮತದಾರರ ನೋಂದಣಿ:

ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, 12 ವರ್ಷದ ನಂತರ ದಾವಣಗೆರೆ ಅಭ್ಯರ್ಥಿಗೆ ಅವಕಾಶ ನೀಡಲಾಗಿದೆ. ದಾವಣಗೆರೆ, ಹರಿಹರ, ಜಗಳೂರು ತಾಲೂಕು ಒಳಗೊಂಡ ದಾವಣಗೆರೆ ಜಿಲ್ಲೆ, ಚಿತ್ರದುರ್ಗ ಜಿಲ್ಲೆ, ತುಮಕೂರು ಜಿಲ್ಲೆ, ಕೋಲಾರ, ಚಿಕ್ಕಬುಳ್ಳಾಪುರ ಜಿಲ್ಲೆ ಒಳಗೊಂಡ 5 ಲೋಕಸಭಾ ಕ್ಷೇತ್ರ, 33 ವಿಧಾನಸಭಾ ಕ್ಷೇತ್ರದ ವ್ಯಾಪ್ತಿ ಆಗ್ನೇಯ ಪದವೀಧರರ ಕ್ಷೇತ್ರದ್ದು. 2 ಲಕ್ಷದಷ್ಟು ಮತದಾರರ ನೋಂದಣಿಯಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 29739 ಮತದಾರರ ನೋಂದಣಿ ಮಾಡಿಸಿದ್ದು, ನೀವೆಲ್ಲಾ ಪ್ರಯತ್ನಪಟ್ಟರೆ ಇನ್ನೂ 10 ಸಾವಿರ ಪದವೀಧರ ಮತದಾರರ ನೋಂದಣಿ ಮಾಡಿಸಬಹುದು. ಎಲ್ಲರೂ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ ಎಂದರು.

ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಆಗ್ನೇಯ ಪದವೀಧರರ ಕ್ಷೇತ್ರದ ಎನ್‌ಡಿಎಮೈತ್ರಿಕೂಟದ ಅಭ್ಯರ್ಥಿ ಕೆ.ಎಂ.ಸುರೇಶ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ವಿಪ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೇಶವಪ್ರಸಾದ, ಮೇಘರಾಜ, ಎಂ.ಬಸವರಾಜ ನಾಯ್ಕ, ಯಶವಂತರಾವ್ ಜಾಧವ್. ಅಣಬೇರು ಜೀವನಮೂರ್ತಿ, ಮಾಡಾಳ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ, ಅಣ್ಣೇಶ್, ರಾಜನಹಳ್ಳಿ ಶಿವಕುಮಾರ, ಆರ್.ಎಲ್. ಶಿವಪ್ರಕಾಶ, ದೊಗ್ಗಳ್ಳಿ ಬಾತಿ ವೀರೇಶ, ಕಡ್ಲೇಬಾಳು ಧನಂಜಯ, ಅನಿಲ ನಾಯ್ಕ, ಮಾಯಕೊಂಡ ಜಿ.ಎಸ್. ಶ್ಯಾಮ್, ಚಂದ್ರಶೇಖರ ಪೂಜಾರ, ಪ್ರವೀಣ ಜಾಧವ್ ಇತರರು ಇದ್ದರು.

- - -

(ಬಾಕ್ಸ್‌)

* ಎಸ್ಐಆರ್ ಅಕ್ರಮ ಸಹಿಸಲ್ಲ: ಸಿದ್ದೇಶ್ವರ ಎಸ್ಐಆರ್ ಪ್ರಕ್ರಿಯೆ ಬಗ್ಗೆ ಪತ್ರಿಕೆ, ಟಿವಿಗಳಲ್ಲಿ ನೋಡುತ್ತಿದ್ದೇವೆ. ಶಾದಿ ಮಹಲ್, ಕಲ್ಯಾಣ ಮಂಟಪ ಎಲ್ಲೋ ಕುಳಿತು, ಒಂದೇ ಸಮುದಾಯದವನ್ನು ಎಸ್ಐಆರ್ ಮಾಡುತ್ತಿರುವುದನ್ನು ನೋಡಿದ್ದೇವೆ. ದಾವಣಗೆರೆ ಉತ್ತರ, ದಕ್ಷಿಣಗಳೂ ನಮಗೆ ಅತಿ ಮುಖ್ಯ. ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು ಎಸ್ಐಆರ್ ಬಗ್ಗೆ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಎಲ್ಲಾದರೂ ಸಾಮೂಹಿಕವಾಗಿ ಒಂದೇ ಕಡೆ ಎಸ್ಐಆರ್‌ ಪ್ರಕ್ರಿಯೆ ನಡೆಸಿದ್ದರೆ ತಕ್ಷಣವೇ ನಮ್ಮ ಗಮನಕ್ಕೆ, ಜಿಲ್ಲಾಧ್ಯಕ್ಷರು, ನಮ್ಮೆಲ್ಲಾ ಮುಖಂಡರ ಗಮನಕ್ಕೆ ತಂದರೆ ಸೂಕ್ತ ಕ್ರಮಕ್ಕೆ ಒತ್ತಡ ಹೇರುತ್ತೇವೆ.

- ಡಾ. ಜಿ.ಎಂ.ಸಿದ್ದೇಶ್ವರ, ಬಿಜೆಪಿ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ.

- - -

-7ಕೆಡಿವಿಜಿ4, 5: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಹಮ್ಮಿಕೊಂಡಿದ್ದ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯ ಪೂರ್ವಭಾವಿ ಸಭೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ ಉದ್ಘಾಟಿಸಿದರು. -7ಕೆಡಿವಿಜಿ6: ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಭಾರತ ಮಾತೆ, ಬಿಜೆಪಿ ಸಂಸ್ಥಾಪಕರ ಭಾವಚಿತ್ರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಡಾ.ಎ.ಎಚ್.ಶಿವಯೋಗಿಸ್ವಾಮಿ, ಕೆ.ಎಂ.ಸುರೇಶ ಪುಷ್ಪಾರ್ಚನೆ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಾಲೂಕಿನಲ್ಲಿ ೧೯೬೭ಮೆಟ್ರಿಕ್ ಟನ್ ಗೊಬ್ಬರ ದಾಸ್ತಾನು
ಬೆಳೆಗೆ ನೀರು ಕೊಡದಿದ್ದರೆ ಕೋಟ್ಯಂತರ ರು. ನಷ್ಟ