ಕನ್ನಡಪ್ರಭ ವಾರ್ತೆ ಉಡುಪಿ
ರಜಾ ದಿನಗಳಲ್ಲಿ ಮೊಬೈಲ್ ಹಾಗೂ ಟಿವಿಯ ಬಳಕೆಯಲ್ಲಿ ಕಾಲಹರಣ ಮಾಡದೇ, ಹತ್ತು ದಿನದ ಶಿಬಿರದ ಸಂಪೂರ್ಣ
ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್ ಹೇಳಿದರು.ಅವರು ಬುಧವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ಸಹಯೋಗದಲ್ಲಿ ಕಾರ್ಕಳದ ಯಕ್ಷ ರಂಗಾಯಣದ ಸಭಾಂಗಣದಲ್ಲಿ ನಡೆದ ‘ಬಾಲಲೀಲೆ’ ಮಕ್ಕಳ ರಂಗ ಶಿಬಿರ ಉದ್ಘಾಟಿಸಿ ಮಾತನಾಡಿದರು.ಯಕ್ಷಗಾನಕ್ಕೆ ಹೊಸ ಪೀಳಿಗೆ ತಯಾರು ಮಾಡುವುದರ ಜೊತೆಯಲ್ಲಿ ಯಕ್ಷಗಾನದ ವಿವಿಧ ರೀತಿಯ ಆಯಾಮಗಳಿಗೆ ಹೊಸ
ಸ್ಪರ್ಶ ನೀಡುವ ಕಾರ್ಯ ರಂಗಾಯಣದ ಮೂಲಕ ಇನ್ನಷ್ಟು ನಡೆಯಬೇಕು ಎಂದರು.ಖ್ಯಾತ ಅರ್ಕಿಟೆಕ್ಟ್ ಪ್ರಮಲ್ ಕುಮಾರ್ ಮಾತನಾಡಿ, ಯುವಪೀಳಿಗೆಯು ದೊರೆತ ಅವಕಾಶಗಳ ಸದುಪಯೋಗ ಪಡೆದುಕೊಂಡು ಬದುಕಿನಲ್ಲಿ ಏಳಿಗೆಯನ್ನು ಹೊಂದುವುದರೊಂದಿಗೆ ದೇಶವನ್ನು ಕಟ್ಟುವಂತಹ ಭವ್ಯವಾದ ಕನಸುಗಳು, ಯೋಜನೆಗಳು ಯುವ ಮನಸ್ಸುಗಳಲ್ಲಿ ಮೂಡಿಬರಬೇಕು ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಕಳ ಯಕ್ಷ ರಂಗಾಯಣದ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ, ಶೈಕ್ಷಣಿಕೆಚಟುವಟಿಕೆಯ ಹೊರತಾಗಿ ಚಿತ್ರಕಲೆ, ಸಾಹಿತ್ಯ, ಸಂಗೀತ ಹಾಗೂ ಇನ್ನೀತರ ಸಾಂಸ್ಕೃತಿಕ ಚಟುವಟಿಕೆಯ ಭಾಗವಹಿಸುವಿಕೆಯಲ್ಲಿ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ವಸಂತ್ ನಿರೂಪಿಸಿ, ವಂದಿಸಿದರು.