ಕೆನಾಲ್: 30ರಂದು ಪರಮೇಶ್ವರ್ ಮನೆ ಮುಂದೆ ಧರಣಿ

KannadaprabhaNewsNetwork |  
Published : May 28, 2024, 01:03 AM IST

ಸಾರಾಂಶ

ಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರ ಕಡೆಗೆ ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಎರಡು ಜಿಲ್ಲೆಯ ಜನರ ನಡುವೆ ಉಂಟಾಗಿರುವ ಗೊಂದಲ ಬಗೆಹರಿಸಬೇಕು

ಕನ್ನಡಪ್ರಭ ವಾರ್ತೆ ತುಮಕೂರುಜಿಲ್ಲೆಗೆ ಹಂಚಿಕೆಯಾಗಿರುವ ನೀರನ್ನು ಎಕ್ಸ್‌ಪ್ರೆಸ್ ಕೆನಾಲ್ ಮೂಲಕ ರಾಮನಗರ ಜಿಲ್ಲೆಯ ಮಾಗಡಿ ಮತ್ತಿತರ ಕಡೆಗೆ ತೆಗೆದುಕೊಂಡು ಹೋಗುವ ಕಾಮಗಾರಿಯನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರ ಮಧ್ಯ ಪ್ರವೇಶಿಸಿ ಎರಡು ಜಿಲ್ಲೆಯ ಜನರ ನಡುವೆ ಉಂಟಾಗಿರುವ ಗೊಂದಲ ಬಗೆಹರಿಸಬೇಕು ಎಂದು ಒತ್ತಾಯಿಸಿ ಮೇ 30 ರಂದು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಮನೆ ಮುಂದೆ ಪ್ರತಿಭಟನಾ ಧರಣಿ ನಡೆಯಲಿದೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಹೇಳಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತುಮಕೂರು ಜಿಲ್ಲೆಯ ಕುಣಿಗಲ್‌ಗೆ ಹಂಚಿಕೆಯಾಗಿರುವ ನೀರು ತೆಗೆದುಕೊಂಡು ಹೋಗಲು ಈಗಾಗಲೇ ತಯಾರಾಗಿದ್ದ ನಾಲೆಯ ಆಧುನೀಕರಣ ಕಾಮಗಾರಿಯೂ ಪೂರ್ಣಗೊಂಡಿದೆ. ಅಲ್ಲದೆ ಎತ್ತಿನ ಹೊಳೆ ಯೋಜನೆಯಿಂದ ಕೊರಟಗೆರೆ ತಾಲೂಕು ಎಲೆರಾಂಪುರದಿಂದ 1.8 ಟಿ.ಎಂ.ಸಿ ನೀರು ತೆಗೆದುಕೊಂಡು ಹೋಗಲು ಪಂಪ್ ಹೌಸ್ ಸಹ ನಿರ್ಮಾಣಗೊಂಡಿದೆ. ಸಾವಿರಾರು ಕೋಟಿ ರು. ದುಂದುವೆಚ್ಚ ಮಾಡಿ ಪೈಪ್‌ಲೈನ್ ಮೂಲಕ ನೀರು ತೆಗೆದುಕೊಂಡು ಹೋಗುವ ಅಗತ್ಯವಿದೆಯೇ? ಎಂದು ಪ್ರಶ್ನಿಸಿದರು.ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್‌ನ ಮೂಲ ನಕ್ಷೆಯನ್ನು ಮುಚ್ಚಿಟ್ಟು, ಪ್ರಭಾವಿ ಮಂತ್ರಿಗಳಿಗೆ ಹೆದರಿ ನೀರಾವರಿ ಇಲಾಖೆ ಹಾಲಿ ಇರುವ ನಾಲೆಯ ಮಟ್ಟಕ್ಕಿಂತ ೧೫ ಅಡಿ ಆಳದಲ್ಲಿ ಜಾಕ್‌ವೆಲ್ ನಿರ್ಮಿಸಲು ಹೊರಟಿದೆ. ಅತಿ ಆಳದಲ್ಲಿರುವ ಚಾಕ್‌ವೆಲ್‌ನಿಂದ ಹೆಚ್ಚು ನೀರು ಹರಿಯುವ ಪರಿಣಾಮ ಹೇಮಾವತಿ ನಾಲೆಯ 70 ಕಿ.ಮೀಗಿಂತ ಮುಂದೆ ಇರುವ ಊರುಗಳಿಗೆ ನೀರಿನ ಕೊರತೆ ಯಾಗಲಿದೆ ಎಂದರು.

ಹೇಮಾವತಿ ನೀರನ್ನೇ ನಂಬಿ ನಿರ್ಮಿಸಿರುವ ಸುಮಾರು 28 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಸಹ ಉಪಯೋಗಕ್ಕೆ ಬಾರದಂತಾಗುತ್ತವೆ ಎಂಬ ಆಂತಕ ಜಿಲ್ಲೆಯ ಜನರನ್ನು ಕಾಡುತ್ತಿದೆ. ಹಾಗಾಗಿ ಹೇಮಾವತಿ ನಾಲಾ ವಲಯದ ಅಧಿಕಾರಿಗಳು ಹಾಗೂ ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಮದ್ಯ ಪ್ರವೇಶ ಮಾಡಬೇಕು. ರಾಮನಗರ, ತುಮಕೂರು ಜಿಲ್ಲೆಯ ಜನರಿಗೆ ವಾಸ್ತವ ತಿಳಿಸಬೇಕು ಎಂದು ಹೇಳಿದರು.ಕಳೆದ ಒಂದು ತಿಂಗಳಿನಿಂದ ಹೇಮಾವತಿ ಎಕ್ಸ್‌ಪ್ರೆಸ್ ಕೆನಾಲ್ ವಿರುದ್ಧ ಪ್ರತಿಭಟನೆ ನಡೆಯುತ್ತಲಿದೆ. ಹೆಬ್ಬೂರು, ಸಿ.ಎಸ್.ಪುರ ಭಾಗದಲ್ಲಿ ತೆಗೆದಿದ್ದ ನಾಲೆಯನ್ನು ಹೋರಾಟಗಾರರು ಮುಚ್ಚಿ, ಪೈಪ್ ತುಂಬಿಕೊಂಡು ಬಂದ ಲಾರಿಗಳನ್ನು ವಾಪಸ್ ಕಳುಹಿಸಲಾಗಿದೆ. ಆದರೆ ರೈತರ ಪ್ರತಿಭಟನೆಗೆ ಮಣಿದು ಪೈಪ್ ಇಳಿಸದೆ ಹೋದ ಲಾರಿಗಳು, ಕುಣಿಗಲ್ ಶಾಸಕ ಡಾ.ಎಚ್.ಡಿ.ರಂಗನಾಥ್ ಅವರ ಜಮೀನಿನಲ್ಲಿ ಪೈಪ್‌ಗಳನ್ನು ದಾಸ್ತಾನು ಮಾಡಿವೆ ಎಂದರು.

ತುಮಕೂರು ಜಿಲ್ಲೆಗೆ ಅನ್ಯಾಯ ಮಾಡಿ, ರಾಮನಗರ ಜಿಲ್ಲೆಗೆ ಹೇಮಾವತಿ ನೀರು ತೆಗೆದುಕೊಂಡು ಹೋಗುವ ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯನ್ನು ರದ್ದು ಪಡಿಸುವವವರೆಗೂ ನಮ್ಮ ಹೋರಾಟ ನಿಲ್ಲದು. ಮೇ 30 ರಂದು ಜಿಲ್ಲೆಯ ಎಲ್ಲಾ ಶಾಸಕರು, ವಿರೋಧ ಪಕ್ಷದ ನಾಯಕರು, ರೈತರು ಸೇರಿ ಉಸ್ತುವಾರಿ ಸಚಿವರ ಗೊಲ್ಲಹಳ್ಳಿ ಮನೆಯ ಮುಂದೆ ಪ್ರತಿಭಟನಾ ಧರಣಿ ನಡೆಸಲಾಗುವುದು ಎಂದರು.ಮುಖಂಡ ದಿಲೀಪ್ ಮಾತನಾಡಿ, ಜಿಲ್ಲೆಗೆ ಹೇಮಾವತಿ ನಾಲೆಯಿಂದ 24.05 ಟಿ.ಎಂ.ಸಿ ನೀರು ಸಂಪೂರ್ಣವಾಗಿ ಹರಿದಿಲ್ಲ. ಕುಡಿಯುವ ನೀರು ಮತ್ತು ನೀರಾವರಿ ನೀಡಲು ನಡೆದಿದ್ದ ವಿಸ್ತರಣಾ ನಾಲೆಗಳಲ್ಲಿ ಒಂದು ದಿನವೂ ನೀರು ಹರಿದಿಲ್ಲ. ಹೀಗಿರುವಾಗ ಏಕಾಎಕಿ ನಾಲೆಯಿಂದ ೧೫ ಅಡಿ ಆಳದಲ್ಲಿ ಪೈಪ್‌ಲೈನ್ ಮೂಲಕ ನೀರು ಡ್ರಾ ಮಾಡಿದರೆ, ಮುಂದಿನ ಊರುಗಳಿಗೆ ನೀರು ಹರಿಯುವ ವೇಗ ಮತ್ತು ಪ್ರಮಾಣ ಕುಗ್ಗಲಿದೆ. ಹೇಮಾವತಿ ನೀರನ್ನು ನಂಬಿ ಕೈಗೊಂಡಿರುವ ಹಲವಾರು ಯೋಜನೆಗಳು ಉಪಯೋಗಕ್ಕೆ ಬಾರದಂತಾಗುತ್ತವೆ. ಹಾಗಾಗಿ ಸರ್ಕಾರ ಮಧ್ಯ ಪ್ರವೇಶಿಸಬೇಕು. ಸದರಿ ಯೋಜನೆಯ ವಿರುದ್ದ ಕಾವೇರಿ ಟ್ರುಬ್ಯುನಲ್ ಮುಂದೆಯೂ ಅರ್ಜಿ ಸಲ್ಲಿಸಲು ಸಹ ಅಗತ್ಯ ದಾಖಲೆಗಳನ್ನು ಕಲೆ ಹಾಕಲಾಗುತ್ತಿದೆ ಎಂದು ಹೇಳಿದರು.ಮುಖಂಡರಾದ ಪಂಚಾಕ್ಷರಯ್ಯ, ಬೆಟ್ಟಸ್ವಾಮಿ, ತಿಪಟೂರಿನ ಎಂ.ಪಿ.ಪ್ರಸನ್ನಕುಮಾರ್, ಭೂ ರಾಮಣ್ಣ, ಸೌಮ್ಯ, ಪ್ರಭಾಕರ್ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ