ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮುಖಂಡರಿಂದ ಜಂಟಿ ಸುದ್ದಿಗೋಷ್ಠಿ
ಶೃಂಗೇರಿ ಕ್ಷೇತ್ರದ ವಿಧಾನ ಸಭಾ ಚುನಾವಣೆ ಈಗಿನ ಫಲಿತಾಂಶವನ್ನು ರದ್ದು ಪಡಿಸಿ ಪ್ರಜಾಪ್ರಭುತ್ವ ಎತ್ತಿ ಹಿಡಿಯಬೇಕು ಎಂದು ಕಾಂಗ್ರೆಸ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಎಂ.ಆರ್.ರವಿಶಂಕರ್ ಚುನಾವಣಾ ಆಯೋಗವನ್ನು ಆಗ್ರಹಿಸಿದರು.
ಬುಧವಾರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಮುಖಂಡರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶೃಂಗೇರಿ ವಿಧಾನ ಸಭಾ ಚುನಾವಣೆ ಈ ಫಲಿತಾಂಶ ದೇಶದ ಇತಿಹಾಸದಲ್ಲೇ ಕಪ್ಪು ಚುಕ್ಕೆಯಾಗಿದೆ. ಇದು ಕ್ರಿಮಿನಲ್ ಪ್ರಕರಣ. ಈ ಫಲಿಂತಾಶವನ್ನು ಕಾಂಗ್ರೆಸ್ ವಿರೋಧಿಸುತ್ತದೆ. ಈಗಾಗಲೇ ಸಿಎಂ ಹಾಗೂ ಡಿಸಿಎಂ ಕ್ರಿಮಿನಲ್ ವ್ಯವಹಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ. ಮತ ಎಣಿಕೆಗೂ ಮುನ್ನ ಸ್ಟ್ರಾಂಗ್ ರೂಂ ಬೀಗ ತೆಗೆದಾಗ 20 ಬಾಕ್ಸ್ ಗಳಲ್ಲಿ 9 ಬಾಕ್ಸ್ ನ ಸೀಲ್ ಒಡೆದಿತ್ತು. ತಕ್ಷಣ ಆರ್ ಒ ಗಮನಕ್ಕೆ ತರಲಾಯಿತು. ಮರು ಮತ ಎಣಿಕೆಗೆ ಕಾಂಗ್ರೆಸ್ ಪಕ್ಷ ವಿರೋಧ ವ್ಯಕ್ತಪಡಿಸಿತ್ತು. ರಾಜೇಗೌಡರು ಸಹ ವಿರೋಧಿಸಿದ್ದರು. ಚುನಾವಣಾ ಅಧಿಕಾರಿ, ಮತಗಟ್ಟೆ ಅಧಿಕಾರಿಗಳು ನಮ್ಮ ಮನವಿಗೆ ಮಾನ್ಯತೆ ನೀಡದೆ ಎಣಿಕೆ ಮಾಡಿದ್ದಾರೆ. ಮತ ಎಣಿಕೆ ಸಂದರ್ಭದಲ್ಲಿ ರಾಜೇಗೌಡರಿಗೆ ಬಂದ ಅಂಚೆ ಮತಗಳ ಕಟ್ಟು ನುಜ್ಜು ಗುಜ್ಜಾಗಿತ್ತು.ಈ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.2023 ರಲ್ಲಿ ಸೋತ ಅಭ್ಯರ್ಥಿ ಜೀವರಾಜ್ ಹೈಕೋರ್ಟಿಗೆ ದೂರು ದಾಖಲಿಸಿದ್ದರು. ಆದರೆ, 2023 ರಲ್ಲಿ ಎಣಿಕೆ ಯಲ್ಲಿದ್ದ ಆರ್.ಓ. ಮೇಲೆ ದೂರು ದಾಖಲಿಸಿಲ್ಲ. ಆಗಿನ ಜಿಲ್ಲಾಧಿಕಾರಿ, ಚುನಾವಣಾಧಿಕಾರಿಗಳ ಮೇಲೆ ಏಕೆ ದೂರು ದಾಖಲಿಸಿಲ್ಲ ಎಂದು ಪ್ರಶ್ನಿಸಿದರು. ಜೀವರಾಜ್ ಶಾಸಕರಾಗಿ ಆಯ್ಕೆ ಘೋಷಣೆರದ್ದು ಪಡಿಸಬೇಕು. 2023ರಲ್ಲಿ ಘೋಷಣೆ ಆದಂತೆ ರಾಜೇಗೌಡರು ಶಾಸಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಬೇಕು. ಗುರುವಾರ 3 ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರಿಗೆ ತೆರಳಿ ಈಗಿನ ಫಲಿತಾಂಶ ತಡೆ ಹಿಡಿಯಬೇಕು ಎಂದು ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಮನವಿ ನೀಡಲಾಗುವುದು ಎಂದರು.
ಕಾಂಗ್ರೆಸ್ ತಾಲೂಕು ಸಮಿತಿ ಸದಸ್ಯ ಎಚ್.ಎಂ.ಮನು ಮಾತನಾಡಿ ಚುನಾವಣೆ ವ್ಯವಸ್ಥೆಯ ಮೇಲೆ ನಂಬಿಕೆ ಕಡಿಮೆಯಾಗಿದೆ. ಕ್ರಿಮಿನಲ್ ವ್ಯವಹಾರ ನಡೆದಿದೆ ಎಂಬ ಅನುಮಾನ ಕಾಡುತ್ತಿದೆ.ಚುನಾವಣಾ ಆಯೋಗ ಮದ್ಯ ಪ್ರವೇಶಿಸಿ 2023 ರಲ್ಲಿ 3 ಪಕ್ಷದ ಚುನಾವಣಾ ಏಜೆಂಟರಾಗಿದ್ದವರು ದೇವಸ್ಥಾನಕ್ಕೆ ಬಂದು ಜನರಿಗೆ ಸತ್ಯ ತಿಳಿಸಬೇಕು ಎಂದು ಒತ್ತಾಯಿಸಿದರು.