ಬೈಕ್‌ಗೆ ಕಾರು ತಾಕಿ ಜಗಳ: ಉದ್ಯಮಿ ಕಪಾಳ ಮೋಕ್ಷಕ್ಕೆ ಬೈಕ್‌ ಸವಾರ ಬಲಿ!

KannadaprabhaNewsNetwork |  
Published : May 07, 2024, 02:00 AM ISTUpdated : May 07, 2024, 09:04 AM IST
girl death

ಸಾರಾಂಶ

ಕಾರು ತಾಕಿಸಿ ಹೋದ ಮಹಿಳೆ ಹಿಂಬಲಿಸಿದ ಸವಾರನನ್ನು ಮನೆಗೆ ಕರೆದು ಸಂಧಾನ ಯತ್ನ ನಡೆಸಿದಾಗ ಇವರ ಮಧ್ಯ ಪ್ರವೇಶಿಸಿದ ಪತಿಯು ಸವಾರನ ಮೇಲೆ ಹಲ್ಲೆ ನಡೆಸಿ, ಕಪಾಳಮೋಕ್ಷ ಮಾಡಿದ್ದಾನೆ. ನೋವಿನಲ್ಲೆ ಮನೆಗೆ ಬಂದ ಪ್ರಭುರಾಮ್‌ ರಾತ್ರಿ ಮಲಗಿದ್ದಲ್ಲೇ ಪ್ರಾಣ ಬಿಟ್ಟಿದ್ದಾನೆ.

 ಬೆಂಗಳೂರು ;  ದ್ವಿಚಕ್ರ ವಾಹನಕ್ಕೆ ಕಾರು ತಾಕಿದ ವಿಚಾರಕ್ಕೆ ನಡೆದ ಜಗಳದ ವೇಳೆ ಕೋಪಗೊಂಡ ರಿಯಲ್ ಎಸ್ಟೇಟ್ ಉದ್ಯಮಿ ಕಪಾಳಮೋಕ್ಷ ಮಾಡಿದ ಪರಿಣಾಮ ದ್ವಿಚಕ್ರ ವಾಹನ ಸವಾರ ಮೃತಪಟ್ಟಿರುವ ಘಟನೆ ಕಾಡುಗೋಡಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಳ್ತೂರು ಕಾಲೋನಿ ನಿವಾಸಿ ಪ್ರಭುರಾಮ್ ಪ್ರಸಾದ್ (33) ಕೊಲೆಯಾದ ದುರ್ದೈವಿ. ಕೃತ್ಯ ಎಸಗಿದ ರಿಯಲ್ ಎಸ್ಟೇಟ್ ಉದ್ಯಮಿ ಅನಿಲ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಪ್ರಭುರಾಮ್‌ ಪ್ರಸಾದ್‌, ಭಾನುವಾರ ದ್ವಿಚಕ್ರ ವಾಹನದಲ್ಲಿ ಸಹೋದರಿ ಪುತ್ರ ಅಭಿಲಾಷ್‌ನನ್ನು ಕೂರಿಸಿಕೊಂಡು ಬೆಳ್ತೂರಿನ ಜಾತ್ರೆಗೆ ಹೋಗಿದ್ದರು. ರಾತ್ರಿ ಸುಮಾರು 7 ಗಂಟೆಗೆ ಮನೆಗೆ ವಾಪಾಸ್‌ ಆಗುವಾಗ, ದುರ್ಗಮ್ಮ ದೇವಾಲಯದ ಬಳಿ ದ್ವಿಚಕ್ರ ವಾಹನದಿಂದ ಏನೋ ಶಬ್ಧ ಕೇಳಿದೆ. ತಕ್ಷಣ ದ್ವಿಚಕ್ರ ವಾಹನ ನಿಲ್ಲಿಸಿ ಪರಿಶೀಲಿಸಲು ಮುಂದಾಗಿದ್ದಾರೆ.

ಬೈಕ್‌ಗೆ ಕಾರು ತಾಕಿಸಿದ ಮಹಿಳೆ:  ಇದೇ ಸಮಯಕ್ಕೆ ಆರೋಪಿ ಅನಿಲ್‌ ಪತ್ನಿ ಕಾರು ಚಾಲನೆ ಮಾಡಿಕೊಂಡು ಅದೇ ಮಾರ್ಗದಲ್ಲಿ ಬಂದಿದ್ದು, ಹಾರನ್‌ ಮಾಡಿದ್ದಾರೆ. ಇದು ಪ್ರಭುರಾಮ್‌ಗೆ ಕೇಳಿಸಿಲ್ಲ. ಆದರೂ ಆಕೆ ಕಾರನ್ನು ದ್ವಿಚಕ್ರ ವಾಹನಕ್ಕೆ ತಾಕಿಸಿಕೊಂಡೇ ಮುಂದೆ ಹೋಗಿದ್ದಾರೆ. ಇದರಿಂದ ಕೋಪಗೊಂಡ ಪ್ರಭುರಾಮ್‌, ಆ ಕಾರನ್ನು ಹಿಂಬಾಲಿಸಿ ಅಡ್ಡಗಟ್ಟಿ ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಆಗ ಆಕೆ ರಸ್ತೆಯಲ್ಲಿ ಮಾತನಾಡುವುದು ಬೇಡ. ಪಕ್ಕದಲ್ಲೇ ಮನೆ ಇದೆ ಬನ್ನಿ ಎಂದು ಹೇಳಿದ್ದಾರೆ. ಇದಕ್ಕೆ ಪ್ರಭುರಾಮ್‌ ಒಪ್ಪಿಕೊಂಡಿದ್ದಾರೆ.

ಮಹಿಳೆ ಪತಿಯಿಂದ ಕಪಾಳಕ್ಕೆ ಹೊಡೆತ ಮೊದಲಿಗೆ ಕಾರಿನಲ್ಲಿ ಮನೆಗೆ ತೆರಳಿದ ಮಹಿಳೆ, ನಡೆದ ಘಟನೆಯನ್ನು ಪತಿ ಅನಿಲ್‌ಗೆ ಹೇಳಿದ್ದಾರೆ. ಅಷ್ಟರಲ್ಲಿ ಪ್ರಭುರಾಮ್‌ ಆಕೆಯ ಮನೆ ಬಳಿ ಬಂದಿದ್ದಾರೆ. ಈ ವೇಳೆ ಪ್ರಭುರಾಮ್‌ ಮತ್ತು ಅನಿಲ್‌ ನಡುವೆ ಮಾತಿಗೆ ಮಾತು ಬೆಳೆದಿದೆ. ಅನಿಲ್‌, ನಾಲ್ಕೈದು ಬಾರಿ ಪ್ರಭುರಾಮ್‌ ಕಪಾಳಕ್ಕೆ ಹೊಡೆದಿದ್ದಾರೆ. ಈ ವೇಳೆ ಸ್ಥಳೀಯರು ಮಧ್ಯ ಪ್ರವೇಶಿಸಿ ಜಗಳ ಬಿಡಿಸಿ ಅನಿಲ್‌ನನ್ನು ಸ್ಥಳದಿಂದ ಕಳುಹಿಸಿದ್ದಾರೆ.

ಬಾಕ್ಸ್‌:ಮಲಗಿದ್ದಲೇ ಪ್ರಭುರಾಮ್‌ ಸಾವು! ಕಪಾಳಕ್ಕೆ ಹೊಡೆದ ನೋವಿನಲ್ಲಿ ಮನೆಗೆ ಬಂದ ಪ್ರಭುರಾಮ್‌, ಊಟ ಮಾಡಿ ನಿದ್ದೆಗೆ ಜಾರಿದ್ದಾರೆ. ತಡರಾತ್ರಿ ಸುಮಾರು 1 ಗಂಟೆ ಸುಮಾರಿಗೆ ತಾಯಿ, ನೋವು ಹೇಗಿದೆ ಎಂದು ಪ್ರಭುರಾಮ್‌ನನ್ನು ಕೇಳಲು ಮುಂದಾದಾಗ, ಪ್ರಭುರಾಮ್‌ ಮಲಗಿದ್ದಲ್ಲೇ ಮೃತಪಟ್ಟಿರುವುದು ಕಂಡು ಬಂದಿದೆ. ಬಳಿಕ ಪ್ರಭುರಾಮ್‌ ತಾಯಿ ನೀಡಿದ ದೂರಿನ ಮೇರೆಗೆ ಆರೋಪಿ ಅನಿಲ್‌ನನ್ನು ಬಂಧಿಸಲಾಗಿದೆ. ಈ ಸಂಬಂಧ ಕಾಡುಗೋಡಿ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜೆಡಿಯು ನಾಯಕ ನಿತೀಶ್‌ ರಾಜ್ಯಸಭೆಗೆ - ಸಿಎಂ ಸ್ಥಾನಕ್ಕೆ ರಾಜೀನಾಮೆ
ಈ ಸಾಲಲ್ಲಿ ಅಬಕಾರಿ ರಾಜಸ್ವ ಟಾರ್ಗೆಟ್‌ ಕಷ್ಟ? 11 ತಿಂಗಳಲ್ಲಿ ಮದ್ಯ ಮಾರಾಟ ಗಣನೀಯ ಕುಸಿತ