ಮನುಸ್ಮೃತಿ ಕಾರಣದಿಂದಾಗಿ ಜಾತಿ ಶೋಷಣೆ: ಸಿಎಂ ಸಿದ್ದರಾಮಯ್ಯ

KannadaprabhaNewsNetwork |  
Published : Apr 20, 2025, 01:50 AM IST
ಸಮಾವೇಶ | Kannada Prabha

ಸಾರಾಂಶ

ಮನುಸ್ಮೃತಿ ಕಾರಣದಿಂದಾಗಿ ಜಾತಿ ಶೋಷಣೆ, ಅಸಮಾನತೆ, ದೌರ್ಜನ್ಯ ಹೆಚ್ಚಾಯಿತು ಎಂದ ಅವರು, ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದರು. ಅದಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣ ಕರ್ಮ ಸಿದ್ದಾಂತ ತಿರಸ್ಕರಿದ್ದಾರೋ ಗೊತ್ತಿಲ್ಲ.

ಕನ್ನಡಪ್ರಭ ವಾರ್ತೆ ತುಮಕೂರು

ದಲಿತರು, ಶೂದ್ರರು ಬುದ್ದಿವಂತರಾದರೇ ಕಥೆ ಕಟ್ಟುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಾಖ್ಯಾನಿಸಿದರು.

ಅವರು ತುಮಕೂರಿನ ಶ್ರೀದೇವಿ ಕಾಲೇಜಿನಲ್ಲಿ ಪ್ರಜಾಪ್ರಗತಿ ಪತ್ರಿಕೆ, ಕುರುಬ ಸಾಂಸ್ಕೃತಿಕ ಪರಿಷತ್ ಹಾಗೂ ಶ್ರೀದೇವಿ ಸಮೂಹ ಶಿಕ್ಷಣ ಸಂಸ್ಥೆಗಳ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಕುರುಬರ ಸಾಹಿತ್ಯ , ಸಾಂಸ್ಕೃತಿಕ ಸಮಾವೇಶಕ್ಕೆ ಚಾಲನೆ ನೀಡಿ 31 ಗ್ರಂಥಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

ದಲಿತರು, ಶೂದ್ರರಿಗೆ ಅವಕಾಶ ಸಿಕ್ಕಿದ್ದಕ್ಕೆ ಅವರು ಬುದ್ದಿವಂತರಾಗಿದ್ದಾರೆ. ನನಗೆ ಅವಕಾಶ ಸಿಕ್ಕಿದ್ದರಿಂದ ಮುಖ್ಯಮಂತ್ರಿಯಾದೆ ಎಂದು ತಿಳಿಸಿದರು.

ವಾಲ್ಮೀಕಿ ದರೋಡೆಕಾರನಾಗಿದ್ದ ಎನ್ನುವುದು ಸುಳ್ಳು. ಹಾಗೆಯೇ ಬ್ರಹ್ಮನು, ಕಾಳಿದಾಸನ ನಾಲಿಗೆಯ ಮೇಲೆ ಅಕ್ಷರ ಬರೆದಿದ್ದಕ್ಕೆ ದೊಡ್ಡ ಸಾಹಿತಿಯಾದನು ಎನ್ನುವ ಮಾತುಗಳಿಗೆ ಕಿವಿಗೊಡಬೇಡಿ ಎಂದರು.

ಬ್ರಹ್ಮ ಒಬ್ಬರಿಗೆ ಶಿಕ್ಷಣ, ಮತ್ತೊಬ್ಬರಿಗೆ ಅನಕ್ಷರತೆ ಸಿಗಲಿ ಅಂತ ಬರೆದರಾ? ಒಬ್ಬನಿಗೆ ಬಡವನಾಗು, ಮತ್ತೊಬ್ಬನಿಗೆ ಶ್ರೀಮಂತನಾಗು ಅಂತ ಬ್ರಹ್ಮ ಬರೆದರಾ ? ಒಬ್ಬ ಹೊಟ್ಟೆತುಂಬ ಉಣ್ಣಬೇಕು, ಉಳಿದವರು ಹಸಿವಿನಿಂದ ಬಿದ್ದಿರಬೇಕು ಎಂದು ಬ್ರಹ್ಮ ಬರೆದುಬಿಟ್ಟರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಪಟ್ಟಭದ್ರರು ಬಸವಣ್ಣನವರ ಕ್ರಾಂತಿ ಮುಂದುವರಿಸಲು ಬಿಡಲಿಲ್ಲ. ಆದ್ದರಿಂದ ನಾವು ವೈಜ್ಞಾನಿಕವಾಗಿ, ವೈಚಾರಿಕವಾಗಿ ಚಿಂತಿಸುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಅಹಿಂದ ಸಮಾಜ ಮತ್ತು ಎಲ್ಲಾ ಜಾತಿ, ಧರ್ಮಗಳ ಬಡತನ, ಹಸಿವು ನಿವಾರಣೆ ಆಗಬೇಕು. ಅನ್ನಕ್ಕಾಗಿ ಯಾರೂ ಇನ್ನೊಬ್ಬರ ಮನೆ ಬಾಗಿಲಿಗೆ ಹೋಗಿ ನಿಲ್ಲಬಾರದು ಎನ್ನುವ ಕಾರಣದಿಂದ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದೆ ಎಂದು ಸ್ಮರಿಸಿದರು.

ಎಲ್ಲಾ ಶ್ರಮಿಕ ವರ್ಗಗಳ ಸಂಸ್ಕೃತಿ, ಆಚಾರ, ವಿಚಾರ ಹೊರಗೆ ಬರಬೇಕು. ಇದಕ್ಕಾಗಿ ಎಲ್ಲರೂ ಸಾಹಿತ್ಯ ರಚನೆಯಲ್ಲಿ ತೊಡಗಬೇಕು, ಹಿಂದೆ ಸಂಸ್ಕೃತ ಕಲಿಯುವವರಿಗೆ ಕಾದ ಸೀಸದ ಶಿಕ್ಷೆ ನಿಗಧಿಯಾಗಿತ್ತು. ಆದರೆ ಈಗ ಶಿಕ್ಷಣ ಸಿಕ್ಕಿದೆ. ನಿಮ್ಮ ನಿಮ್ಮ‌ ಅನುಭವಗಳನ್ನು ದಾಖಲಿಸಿ. ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ. ನಮ್ಮ ಜ್ಞಾನ ವೈಜ್ಞಾನಿಕವಾಗಿ, ವೈಚಾರಿಕವಾಗಿ ಇರಬೇಕು ಎಂದರು.

ಮನುಸ್ಮೃತಿ ಕಾರಣದಿಂದಾಗಿ ಜಾತಿ ಶೋಷಣೆ, ಅಸಮಾನತೆ, ದೌರ್ಜನ್ಯ ಹೆಚ್ಚಾಯಿತು ಎಂದ ಅವರು, ಪಟ್ಟಭದ್ರರು ಹಿಂದಿನ ಜನ್ಮದ ಕರ್ಮ ಎಂದು ನಂಬಿಸಿ ಜನರನ್ನು ವಂಚಿಸುತ್ತಿದ್ದರು. ಅದಕ್ಕಾಗಿ 12ನೇ ಶತಮಾನದಲ್ಲಿ ಬಸವಣ್ಣ ಕರ್ಮ ಸಿದ್ದಾಂತ ತಿರಸ್ಕರಿದ್ದಾರೋ ಗೊತ್ತಿಲ್ಲ ಎಂದರು.

ಭಾರತಕ್ಕೆ ಸ್ವಾತಂತ್ರ್ಯ 1947ರಲ್ಲಿ ಬಂದು, ಜನವರಿ 26 1950 ರಲ್ಲಿ ಸಂವಿಧಾನ ಜಾರಿಯಾಯಿತು. ಸಂವಿಧಾನ ಬಂದು 75 ವರ್ಷವಾದರೂ ಅಸ್ಪೃಶ್ಯತೆ ಇನ್ನೂ ಹೋಗಿಲ್ಲ, ಅನೇಕ ಕಡೆ ದೇವಾಲಯಗಳ ಒಳಗೆ ಬಿಡುವುದಿಲ್ಲ ಎಂದರು.

ಅನೇಕ ವರ್ಷಗಳ ಕಾಲ‌ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿ ಪ್ರಕಾರ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಬರಲು ಕಾರಣವಾಯ್ತು ಎಂದು ವ್ಯಾಖ್ಯಾನಿಸಿದರು.

ಶಿಕ್ಷಣ ಬಂದ ಮೇಲೆ ಎಲ್ಲರಿಗೂ ಅವಕಾಶ ಸಿಗುತ್ತಿದೆ. ನಮ್ಮ ತಂದೆ ತಾಯಿ ಓದಿರಲಿಲ್ಲ. ನಾನು ಓದಿಲ್ಲ ಅಂದರೆ ಇಂದು ಸಿಎಂ ಆಗಲು ಆಗುತ್ತಿತ್ತಾ ಎಂದ ಅವರು, ನಿಮಗೆ ಅವಕಾಶ ಸಿಕ್ಕಿದೆ ನಿಮ್ಮ ಅನುಭವವನ್ನು ಬರೆಯರಿ ಎಂದರು.

ಗುಲಾಮಗಿರಿಯಿಂದ ಹೊರಗೆ ಬರಬೇಕು ಎಂದ ಅವರು, ಜ್ಞಾನ, ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಇರಬೇಕು. ದಲಿತ ಕುಟುಂಬ ಓದಿ ಶ್ರೀಮಂತರಾದರೆ ಬಾರಯ್ಯ ಅಂತಾರೆ. ಆದರೆ ಮೇಲ್ವರ್ಗದವರು ಬಂದು ಅಡುಗೆ ಮಾಡಿದರೆ ಬನ್ನಿ ಸ್ವಾಮಿ ಅಂತಾ ಇದೆ ಮನುಸ್ಮೃತಿ ಎಂದು ವ್ಯಾಖ್ಯಾನಿಸಿದರು.

ಲೋಹಿಯಾ ಹೇಳೋರು, ಜಾತಿ ಸಮ್ಮೇಳನ ಮಾಡಬೇಕಾ? ಬೇಡ್ವಾ? ಅಂತಾ. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೆ ಜಾತಿ ಸಮ್ಮೇಳನ ಮಾಡಬೇಕು ಎಂದರು.

ಬಡವ ಶ್ರೀಮಂತನಾಗಬಹುದು. ದಲಿತ ಜಾತಿಯವರು ಬ್ರಾಹ್ಮಣ ಆಗಲು ಸಾಧ್ಯನಾ? ಹಾಗೆಯೇ

ಕುರುಬ ಮೇಲ್ಜಾತಿಯಾಗಲು ಆಗುತ್ತಾ ಎಂದ ಅವರು, ಆರ್ಥಿಕ ಚಾಲನೆ ಸಿಕ್ಕರೇ ಮಾತ್ರ ಇವೆಲ್ಲಾ ಸಾಧ್ಯ ಎಂದರು.

ಪ್ರಗತಿಪರ ವಿಚಾರಕ್ಕೆ ಅಡ್ಡಿ ಆತಂಕಗಳು ಬಂದೇ ಬರುತ್ತವೆ‌. ಇದಕ್ಕೆ ನಾವು ಸುಮ್ಮನೇ ಜಯಗಳಿಸಲು ಆಗುವುದಿಲ್ಲ. ಅವರು ಮಾಡಿಕೊಂಡರೆ ಮಾಡಲಿ ಅಂದರೆ ಜಯಗಳಿಸಲು ಆಗುವುದಿಲ್ಲ ಎಂದರು.

ನಾನು ಬಿಎಸ್ ಸಿ ಆದ ಮೇಲೆ ವ್ಯವಸಾಯ ಮಾಡಲು ಹೋದೆ. ಬಾಟನಿಯಲ್ಲಿ ಎಮ್ ಎಸ್ ಸಿ ಓದಲು ಸೀಟ್ ಸಿಗಲಿಲ್ಲ. ವ್ಯವಸಾಯ ಮಾಡಲು ಹೋದೆ. ನಮ್ಮ ಅಪ್ಪ ದನ ಕರುಗಳಿಗೆ ನೀರು ಕುಡಿಸಲು ಹೇಳಿದ್ದ. ಬಾವಿಯಲ್ಲಿ ನೀರು ಸೇದಿ ತರಬೇಕಿತ್ತು. ಬಾವಿಯಲ್ಲಿ ಕಸ ಇರೋದು, ಬಿಂದಿಗೆ ಮೇಲೆ ಕೆಳಗೆ ಹಾಕಿ ಕಸ ದೂರ ಸರಿಸಿ ನೀರು ತೆಗೆದುಕೊಳ್ಳುತ್ತಿದ್ದೆ. ನಮ್ಮ ಜಾತಿ ವ್ಯವಸ್ಥೆ ಕೂಡ ಹೀಗೆ ಇದೆ ಎಂದರು.

---------

ನನ್ನ ಎಡಗಾಲು ನೋವಿದೆ:ನನಗೆ ಎಡಗಾಲು ಸ್ವಲ್ಪ ನೋವಾಗಿದೆ. ಒತ್ತಾಯ ಮಾಡಿದ್ದಕ್ಕೆ ಈ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನನಗೆ ಹೆಚ್ಚು ಪ್ರವಾಸ ಮಾಡಲು ಆಗುವುದಿಲ್ಲ. ಬಹಳ ಸಮಯ ನಿಂತು ಮಾತನಾಡಲು ಆಗುವುದಿಲ್ಲ ಎಂದರು.ನಾನು ಬಾತ್ ರೂಮ್ ನಿಂದ ಹೊರಗೆ ಬರುವಾಗ ಬಿದ್ದುಬಿಟ್ಟೆ. 2005 ರಲ್ಲಿ ನಾನು ಕಬ್ಬಡಿ ಆಡುವಾಗ ಲಿಗೊಮೆಂಟ್ ಕಟ್ ಆಗಿತ್ತು. ಈಗ ಅದೇ ಲಿಗೊಮೆಂಟ್ ಪೆಟ್ಟು ಬಿದ್ದಿದೆ. ಹೀಗಾಗಿ ಹೆಚ್ಚು ತಿರುಗಾಡಲು ಆಗುತ್ತಿಲ್ಲ. ತಿರುಗಾಡುವ ಕಡೆ ತಿರುಗಾಡುತ್ತಿದ್ದೇನೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ