ಪರಶಿವಮೂರ್ತಿ ಮಾಟಲದಿನ್ನಿ ಕುಷ್ಟಗಿ
ಹೌದು. ಈ ವರ್ಷ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ತನ್ನ ಪ್ರಖರತೆ ಹೆಚ್ಚಿಸುತ್ತಾ ಸಾಗಿದ್ದು, ಅಡವಿಯಲ್ಲಿ ಹಸಿರು ಎನ್ನುವುದು ಮಾಯವಾಗಿದ್ದರೆ ಬೇಸಿಗೆಯ ಹೊಡೆತಕ್ಕೆ ಈಗಾಗಲೇ ಕೃಷಿಹೊಂಡ, ಹಳ್ಳ, ಕೊಳ್ಳಗಳು ಬತ್ತಿ ಹೋಗುವ ಮೂಲಕ ಕುಡಿಯಲು ನೀರು ಸಿಗದಂತಹ ಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆ ಮೇಯಲು ಕಾಡಿಗೆ ಹೋಗುವ ಜಾನುವಾರುಗಳು ಬಾಯಾರಿಕೆಯಿಂದ ಬಳಲುತ್ತಿರುವುದು ಕಂಡು ಬರುತ್ತಿದೆ.
ಇನ್ನೂ ಕುರಿಗಳನ್ನೆ ನಂಬಿ ಜೀವನ ಸಾಗಿಸುತ್ತಿರುವ ಕುರಿಗಾಹಿಗಳು ಅಕ್ಷರಶಃ ಆತಂಕದ ಕ್ಷಣ ಅನುಭವಿಸುತ್ತಿದ್ದಾರೆ. ಹೈನುಗಾರಿಕೆ ಮತ್ತು ಕುರಿ ಸಾಕಾಣಿಕೆಯ ಮೇಲೆ ಬೇಸಿಗೆ ಘೋರ ಪರಿಣಾಮ ಬೀರಿದ್ದು ಜಾನುವಾರುಗಳು ಮೂಕ ರೋಧನೆ ಅನುಭವಿಸುವಂತಾಗಿದೆ.ಕುರಿಗಳನ್ನು ಮೇಯಿಸಲು ನಿತ್ಯವೂ 8 ರಿಂದ 10 ಕಿಮೀ ಅಲೆದಾಡಿದರೂ ಕುರಿಗಳಿಗೆ ಹೊಟ್ಟೆ ತುಂಬುವಷ್ಟು ಆಹಾರ ಸಿಗುತ್ತಿಲ್ಲ ಹಾಗೂ ನೀರು ಸಿಗದ ಸ್ಥಿತಿ ನಿರ್ಮಾಣವಾಗಿದೆ. ಕುರಿಗಳನ್ನು ಖಾಲಿ ಹೊಟ್ಟೆಯಿಂದ ಹಟ್ಟಿಗೆ ಹೊಡೆದುಕೊಂಡು ಬರುವಂತಾಗಿದೆ ಎಂದು ಹೇಳುತ್ತಾರೆ ಕುರಿಗಾಹಿಗಳು.
ಏಪ್ರಿಲ್ ತಿಂಗಳಲ್ಲಿ ಬಿಸಿಲು ತನ್ನ ಪ್ರಖರತೆ ತೋರಿಸುತ್ತಿದ್ದು, ಇನ್ನೂ ಮುಂಬರುವ ದಿನಗಳಲ್ಲಿ ಬಿಸಿಲಿನ ತಾಪ ಹೆಚ್ಚಾಗುವ ಲಕ್ಷಣ ದಟ್ಟವಾಗಿ ಗೋಚರವಾಗುತ್ತಿದ್ದು. ಜನ ಮತ್ತು ಜಾನುವಾರುಗಳು ಬಸವಳಿಯುವುದರಲ್ಲಿ ಸಂದೇಹಗಳಿಲ್ಲ ಎನ್ನುವಂತಾಗಿದೆ.
ಜಾನುವಾರು ಜೋಪಾನವಾಗಿಡಿ: ಕುರಿ,ಆಡು, ಸಾಕು ನಾಯಿ ಸೇರಿದಂತೆ ಪ್ರತಿಯೊಂದು ಜಾನುವಾರುಗಳನ್ನು ಬಿಸಲಿನ ಸಮಯದಲ್ಲಿ ಹೊರಗಡೆ ಬಿಡಬಾರದು, ಬಿಸಿಲಿನ ಬೇಗೆ ತಡೆದುಕೊಳ್ಳದ ಜಾನುವಾರುಗಳಿಗೆ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಹೆಚ್ಚಾಗಿದ್ದು, ಮನುಷ್ಯರಂತೆ ಅವುಗಳನ್ನು ಜೋಪಾನವಾಗಿ ನೋಡಿಕೊಳ್ಳಬೇಕಿದೆ. ಈಗಾಗಲೆ ಜಾನುವಾರುಗಳಿಗೆ ಲಸಿಕೆ ಹಾಕಲಾಗಿದ್ದು ಯಾವುದೆ ರೋಗದ ಲಕ್ಷಣ ಕಂಡು ಬಂದಿಲ್ಲ ಎನ್ನುವುದು ಹಿರಿಯ ಪಶು ವೈದ್ಯಾಧಿಕಾರಿಗಳ ಸಲಹೆಯಾಗಿದೆ.
ಕುರಿಗಾಹಿಗಳು ಬಿಸಿಲಿನ ಪ್ರಖರತೆ ಹೆಚ್ಚಾಗುವ ಪೂರ್ವದಲ್ಲಿ ಹಾಗೂ ಸಂಜೆ ಸಮಯದಲ್ಲಿ ಮಾತ್ರ ಕುರಿ ಮೇಯಿಸಲು ಮುಂದಾಗಬೇಕು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಸುವ ಕೆಲಸ ಮಾಡಬೇಕು. ಆರೋಗ್ಯ ಸಮಸ್ಯೆ ಕಂಡು ಬಂದಲ್ಲಿ ತಕ್ಷಣವೆ ಪಶು ವೈದ್ಯರ ಸಲಹೆ ಪಡೆಯಬೇಕು ಎಂದು ಕುಷ್ಟಗಿ ಹಿರಿಯ ಪಶುವೈದ್ಯಾಧಿಕಾರಿ ಡಾ.ಸಿದ್ದಲಿಂಗಯ್ಯ ಶಂಕೀನ್ ತಿಳಿಸಿದ್ದಾರೆ.