ಕಾವೇರಿ ಶಾಪ ಬಿಜೆಪಿಯನ್ನು ಸುಡುತ್ತೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork | Published : Jun 23, 2025 11:48 PM

ಗಂಗಾರತಿಯನ್ನು ಸ್ವಾಗತಿಸುವವರು ಕಾವೇರಿ ಆರತಿಯನ್ನು ಏಕೆ ವಿರೋಧಿಸುತ್ತಿದ್ದಾರೆಂಬುದು ಅರ್ಥವಾಗುತ್ತಿಲ್ಲ. ಕಾವೇರಿ ಜೀವ ಗಂಗೆ. ಅವಳನ್ನು ಪೂಜಿಸುವುದು ಹಿಂದುತ್ವದ ನಿಲುವು. ಬಜರಂಗ ದಳವೂ ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಬಿಜೆಪಿಯವರು ಕಾವೇರಿ ಆರತಿಯನ್ನು ವಿರೋಧಿಸುತ್ತಾರೆಂದರೆ ಅವರದ್ದು ಹಿಂದುತ್ವದ ಹೆಸರಿನಲ್ಲಿ ಆಡುತ್ತಿರುವ ಕಪಟ ನಾಟಕ.

ಕನ್ನಡಪ್ರಭ ವಾರ್ತೆ ಮಂಡ್ಯ

ಕಾವೇರಿ ಆರತಿಯನ್ನು ತಡೆಯಲು ಮುಂದಾಗಿರುವ ಬಿಜೆಪಿಯವರಿಗೆ ಕಾವೇರಿ ಶಾಪ ತಟ್ಟದೇ ಬಿಡುವುದಿಲ್ಲ. ಆ ಶಾಪವೇ ಬಿಜೆಪಿಯನ್ನು ಸುಡಲಿದೆ ಎಂದು ಶಾಸಕ ಪಿ.ರವಿಕುಮಾರ್ ಕಿಡಿಕಾರಿದರು.

ಗಂಗಾರತಿಯನ್ನು ಸ್ವಾಗತಿಸುವವರು ಕಾವೇರಿ ಆರತಿಯನ್ನು ಏಕೆ ವಿರೋಧಿಸುತ್ತಿದ್ದಾರೆಂಬುದು ಅರ್ಥವಾಗುತ್ತಿಲ್ಲ. ಕಾವೇರಿ ಜೀವ ಗಂಗೆ. ಅವಳನ್ನು ಪೂಜಿಸುವುದು ಹಿಂದುತ್ವದ ನಿಲುವು. ಬಜರಂಗ ದಳವೂ ಸರ್ಕಾರಕ್ಕೆ ಬೆಂಬಲ ಕೊಟ್ಟಿದೆ. ಬಿಜೆಪಿಯವರು ಕಾವೇರಿ ಆರತಿಯನ್ನು ವಿರೋಧಿಸುತ್ತಾರೆಂದರೆ ಅವರದ್ದು ಹಿಂದುತ್ವದ ಹೆಸರಿನಲ್ಲಿ ಆಡುತ್ತಿರುವ ಕಪಟ ನಾಟಕ. ಬೋಗಸ್ ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದಾರೆ ಎಂದು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಟೀಕಿಸಿದರು.

ಬಿಜೆಪಿ ಹಿಂದೂ ವಿರೋಧಿನಾ?, ಅವರಿಗೆ ಎರಡು ಮುಖ ಇದೆಯಾ?, ನಮಗೆ ಹಿಂದುತ್ವ ಇಲ್ಲ, ನಾವು ಮುಠ್ಠಾಳರು, ನರಿ ಮುಖ, ಗೋಮುಖ ಇರುವವರು, ರಾಜಕೀಯಕ್ಕಾಗಿಯೇ ಇರುವವರು ಅಂತ ಹೇಳಿಬಿಡಲಿ. ಅವರಲ್ಲಿ ದೇಶಭಕ್ತಿ ಇಲ್ಲ. ರಾಜಕಾರಣಕ್ಕಾಗಿ ಹಿಂದುತ್ವ ಬಳಸಿಕೊಳ್ಳುತ್ತಿದ್ದಾರೆ. ಕಾವೇರಿ ತಾಯಿಯ ಶಾಪ ಅವರಿಗೆ ತಟ್ಟದೇ ಬಿಡುವುದಿಲ್ಲ. ಇವರು ವಿಪಕ್ಷದವರಿಗೆ ದೇವರನ್ನು ರಾಜಕೀಯ ವಸ್ತುವಾಗಿ, ಕಾವೇರಿಯನ್ನು ರಾಜಕೀಯ ಅಖಾಡವನ್ನಾಗಿ ಮಾಡಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಮೈಷುಗರ್ ಪ್ರೌಢಶಾಲೆಗೆ ೨೫ ಕೋಟಿ ರು. ನೀಡಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸ್ವಾಗತ ಮಾಡುತ್ತೇನೆ. ಶಾಲೆಯ ಅಭಿವೃದ್ಧಿ ಬಗ್ಗೆಯೂ ಅಧ್ಯಕ್ಷರ ಜೊತೆ ಚರ್ಚೆ ಮಾಡುತ್ತೇನೆ. ಚೆಕ್ ಪಡೆಯಲು ಯಾವಾಗ, ಎಲ್ಲಿಗೆ ಬರಬೇಕೆಂದರೆ ಅಲ್ಲಿಗೆ ತೆರಳಲು ಸಿದ್ಧ ಎಂದು ನುಡಿದರು.

ಕೆರೆಯಂಗಳದಲ್ಲಿ ತಮಿಳು ಕಾಲೋನಿಯವರಿಗೆ ಮನೆ ನಿರ್ಮಿಸಿದ್ದೇವೆ. ಐದು ವರ್ಷದ ಹಿಂದೆ ಕಟ್ಟಿರುವ ಮನೆಗಳು ಹಾಳಾಗುತ್ತಿವೆ. ಈ ಸಂಬಂಧ ನ್ಯಾಯಾಲಯಕ್ಕೂ ಅಫಿಡೆವಿಟ್ ಸಲ್ಲಿಸಲಾಗಿದೆ. ನ್ಯಾಯಾಲಯ ಯಾರಿಗಾದರೂ ಹಂಚಲು ಅನುಮತಿ ನೀಡಿದೆರೆ ಎಲ್ಲಾ ಧರ್ಮ ಹಾಗೂ ಸಮುದಾಯದವರಿಗೆ ಸಮಾನವಾಗಿ ಹಂಚುತ್ತೇವೆ. ಬಿಜೆಪಿಯವರಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಮಾತ್ರ ಕಾಣೋದು, ಆರ್.ಅಶೋಕ್‌ರವರಿಗೆ ತಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿ ಇಟ್ಟುಕೊಂಡು ಮಾತನಾಡಲಿ ಎಂದು ಹೇಳಿದರು.