25 ವಾರ ಪೂರೈಸಿದ ಕಾವೇರಿ ಚಳವಳಿ: ತಾತ್ಕಾಲಿಕ ಮುಂದೂಡಿಕೆ

KannadaprabhaNewsNetwork |  
Published : Jul 23, 2024, 12:38 AM IST
22ಕೆಎಂಎನ್‌ಡಿ-6 ಮಂಡ್ಯದ ಸರ್‌ಎಂವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ 25ನೇ ಸೋಮವಾರದ ಚಳವಳಿ ನಡೆಸಿದರು. | Kannada Prabha

ಸಾರಾಂಶ

ನೀರಿಲ್ಲದ ಸಮಯದಲ್ಲಿ ರೈತರಿಗೆ ನೀರೊದಗಿಸಲು ಪೇಚಾಡುವ ಸರ್ಕಾರಗಳು ಹೆಚ್ಚುವರಿ ನೀರು ಹರಿದುಬಂದಾಗ ಅದನ್ನು ಯೋಜಿತ ರೀತಿಯಲ್ಲಿ ಸಂಗ್ರಹಿಸುವುದಕ್ಕೆ, ಹೊಸದಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ತುಂಬಿಸಲು, ಎಲ್ಲಾ ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಸಂಪರ್ಕಿಸುವುದಕ್ಕೆ ಯೋಜನೆಯನ್ನು ರೂಪಿಸಿಲ್ಲ. ವ್ಯರ್ಥವಾಗಿ ನೀರನ್ನು ಹರಿಯಬಿಟ್ಟು ಕುಳಿತಿರುವುದು ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕೆಆರ್‌ಎಸ್‌ ಅಣೆಕಟ್ಟು ಭರ್ತಿಯಾಗಿ ತಮಿಳುನಾಡಿಗೆ ನೀರು ಹೆಚ್ಚುವರಿಯಾಗಿ ಹರಿದುಹೋಗುತ್ತಿದೆ. ಈ ಹೆಚ್ಚುವರಿ ನೀರನ್ನು ಸಂಗ್ರಹಿಸಲು, ಬಳಕೆ ಮಾಡಿಕೊಳ್ಳುವುದಕ್ಕೆ ಸರ್ಕಾರಗಳು ಯಾವುದೇ ಯೋಜನೆಯನ್ನೂ ರೂಪಿಸದಿರುವುದು ವಿಷಾದಕರ ಸಂಗತಿ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಸಂಚಾಲಕಿ ಸುನಂದಾ ಜಯರಾಂ ಹೇಳಿದರು.

ನಗರದ ಸರ್‌ಎಂವಿ ಪ್ರತಿಮೆ ಎದುರು ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ 25ನೇ ಸೋಮವಾರದ ಚಳವಳಿಯಲ್ಲಿ ಅವರು ಮಾತನಾಡಿದರು.

ನೀರಿಲ್ಲದ ಸಮಯದಲ್ಲಿ ರೈತರಿಗೆ ನೀರೊದಗಿಸಲು ಪೇಚಾಡುವ ಸರ್ಕಾರಗಳು ಹೆಚ್ಚುವರಿ ನೀರು ಹರಿದುಬಂದಾಗ ಅದನ್ನು ಯೋಜಿತ ರೀತಿಯಲ್ಲಿ ಸಂಗ್ರಹಿಸುವುದಕ್ಕೆ, ಹೊಸದಾಗಿ ಕೆರೆ-ಕಟ್ಟೆಗಳನ್ನು ನಿರ್ಮಿಸಿ ತುಂಬಿಸಲು, ಎಲ್ಲಾ ಕೆರೆಗಳಿಗೆ ನಾಲಾ ಸಂಪರ್ಕ ಜಾಲ ಸಂಪರ್ಕಿಸುವುದಕ್ಕೆ ಯೋಜನೆಯನ್ನು ರೂಪಿಸಿಲ್ಲ. ವ್ಯರ್ಥವಾಗಿ ನೀರನ್ನು ಹರಿಯಬಿಟ್ಟು ಕುಳಿತಿರುವುದು ಸರ್ಕಾರಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿಯಾಗಿದೆ ಎಂದು ಟೀಕಿಸಿದರು.

ಕೆಆರ್‌ಎಸ್‌ ತುಂಬಿ ಹರಿಯುತ್ತಿರುವ ಈ ಸಮಯದಲ್ಲಿ ಮತ್ತೊಂದು ಅಣೆಕಟ್ಟೆ ಕಟ್ಟಿ ನೀರನ್ನು ಸಂಗ್ರಹಿಸಲು ಎಲ್ಲ ರಾಜಕೀಯ ಪಕ್ಷಗಳು ಒಗ್ಗಟ್ಟಿನಿಂದ ದನಿ ಎತ್ತಬೇಕು. ಅಮೂಲ್ಯವಾಗಿರುವ ನೀರು ವ್ಯರ್ಥವಾಗಿ ಸಮುದ್ರ ಸೇರುವುದಕ್ಕೆ ಬಿಡಬಾರದು. ವಿಶ್ವೇಶ್ವರಯ್ಯ ನಾಲೆಗಳಿಗೆ ವರ್ಷಪೂರ್ತಿ ನೀರು ಹರಿಸುವಂತೆ ಒತ್ತಾಯಿಸಿದರು.

ನಮ್ಮ ರೈತರ ಪರವಾಗಿ ವಿಭಿನ್ನ ರೀತಿಯಲ್ಲಿ ಹಲವು ಒತ್ತಾಯಗಳನ್ನು ಇಟ್ಟುಕೊಂಡು ಕಾವೇರಿ ಹೋರಾಟದ ರೂಪುರೇಷೆ ತಯಾರಿಸುತ್ತೇವೆ. ಚಳವಳಿಗೆ ಹೊಸ ರೂಪ ನೀಡುವುದಾಗಿ ತಿಳಿಸದರು.

ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರನ್ನು ಪೂರ್ಣ ಪ್ರಮಾಣದಲ್ಲಿ ಉಪಯೋಗಿಸಿಕೊಳ್ಳುವಲ್ಲಿ ಸರ್ಕಾರಗಳು ವಿಫಲವಾಗಿದೆ. ಕರ್ನಾಟಕಕ್ಕೆ ನೀರಿನ ಅವಶ್ಯಕತೆ ಇಲ್ಲ. ಕಾವೇರಿ ನೀರು ನಮ್ಮ ನೀರು ಎಂದು ಪರಿಗಣಿಸಬೇಕೆಂದು ತಮಿಳುನಾಡು ವಾದ ಮಂಡಿಸುತ್ತದೆ. ಇದರಿಂದ ಭವಿಷ್ಯದಲ್ಲಿ ಕರ್ನಾಟಕಕ್ಕೆ ದೊಡ್ಡ ಅನ್ಯಾಯವಾಗುತ್ತದೆ, ನ್ಯಾಯ ಮಂಡಳಿ ತೀರ್ಪು, ಕಾವೇರಿ ನದಿ ನೀರು ನಿಯಂತ್ರಣ ಮಂಡಳಿ ಪ್ರಾಧಿಕಾರದ ವಿರುದ್ಧ ನಿರಂತರ ಚಳವಳಿಗಳು ಅಗತ್ಯವಿದ್ದು, ಸರ್ಕಾರ ಕಾವೇರಿ ವಿಷಯವನ್ನು ಕಾನೂನಾತ್ಮಕವಾಗಿ ಗಂಭೀರವಾಗಿ ಪರಿಗಣಿಸದಿದ್ದರೆ ಮುಂದಿನ ದಿನಗಳಲ್ಲಿ ಚಳವಳಿಯ ಸ್ವರೂಪ ಬದಲಾಯಿಸಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಮುಖಂಡ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಕಾವೇರಿ ವಿಷಯದಲ್ಲಿ ತಮಿಳುನಾಡಿನವರು ಪ್ರತಿ ಬಾರಿಯೂ ಬುದ್ಧಿವಂತಿಕೆ ಪ್ರದರ್ಶಿಸುತ್ತಿದೆ. ಪದೇ ಪದೇ ಕೋರ್ಟ್ ಮುಂದೆ, ಸಮಿತಿ ಮುಂದೆ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ನಮ್ಮಲ್ಲಿ ಆ ಮಾಹಿತಿಗಳನ್ನು ಕೊಡುವವರೇ ಇಲ್ಲ. ಮಳೆ ಬಿದ್ದ ಪ್ರಮಾಣವನ್ನು ಆಧರಿಸಿ ನೀವು ನಮಗೆ ನೀರು ಕೊಡಿ ಎನ್ನುವ ತಮಿಳುನಾಡಿನವರು ಮೂರು ನದಿಗಳ ಜೋಡಣೆ ಮಾಡಿಕೊಂಡು ಹೊಸದಾಗಿ 1.5 ಲಕ್ಷ ಎಕರೆಗೆ ಕೃಷಿಯನ್ನು ವಿಸ್ತಾರ ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕೆ ಕೊಟ್ಟಿರುವ ನೀರಿನ ಹಂಚಿಕೆ ಸರಿಯಾಗಿ ಬಳಕೆಯಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಯೋಚಿಸಬೇಕು. ಇದಕ್ಕೆ ಮೇಕೆದಾಟು ಯೋಜನೆ ಅನಿವಾರ್ಯ ಮತ್ತು ಅಗತ್ಯ ಎಂಬುದನ್ನು ಸರ್ಕಾರ ರಾಜ್ಯದ ಪರವಾಗಿ ನಿಲ್ಲಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಮುಖಂಡರಾದ ಇಂಡುವಾಳು ಚಂದ್ರಶೇಖರ್, ಮುದ್ದೇಗೌಡ, ಎಂ.ಎಲ್.ತುಳಸೀಧರ, ಎಸ್.ನಾರಾಯಣ, ಶಂಕರೇಗೌಡ, ಬೋರಲಿಂಗಯ್ಯ, ನಾರಾಯಣಸ್ವಾಮಿ, ಎಚ್‌.ಡಿ.ದೇವೇಗೌಡ, ಇಂದಿರಾ, ದೇವೀರಮ್ಮ, ಚಿಕ್ಕತಾಯಮ್ಮ ಭಾಗವಹಿಸಿದ್ದರು.

ಕಾವೇರಿ ನೀರಿನ ವಿವಾದ ಪ್ರಾರಂಭವಾದ ನಂತರ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ನಡೆಸುತ್ತಿದ್ದ 151 ದಿನಗಳ ನಿರಂತರ ಧರಣಿ ಹಾಗೂ 25 ಸೋಮವಾರ ನಡೆಸಿದ ಕಾವೇರಿ ಚಳವಳಿಯನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಸರ್ಕಾರ ನಾಲೆಗಳಲ್ಲಿ ನೀರು ಹರಿಸಿರುವುದರಿಂದ ಮತ್ತು ಕೃಷ್ಣರಾಜಸಾಗರ ಅಣೆಕಟ್ಟು ತುಂಬಿರುವುದರಿಂದ ಸದ್ಯಕ್ಕೆ ಈ ಚಳವಳಿಯನ್ನು ಹಿಂತೆಗೆದುಕೊಂಡಿದ್ದೇವೆ.

- ಸುನಂದಾ ಜಯರಾಂ, ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಸಂಚಾಲಕಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!