ಕನ್ನಡಪ್ರಭ ವಾರ್ತೆ ಕಾರಟಗಿ
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಸ್ಲಿಂ ಬಾಂಧವರು ಈದ್ ಉಲ್ ಫಿತರ್ನ್ನು ಶ್ರದ್ಧಾಭಕ್ತಿ, ಸಡಗರ, ಸಂಭ್ರಮದಿಂದ ಸಾಮೂಹಿಕ ಪ್ರಾರ್ಥನೆ ಮಾಡುವ ಮೂಲಕ ಗುರುವಾರ ಆಚರಿಸಿದರು.ಗುರುವಾರ ಬೆಳಗ್ಗೆ ಪಟ್ಟಣದ ವಲಿಸಾಹೇಬ್ ದರ್ಗಾ ಆವರಣದಲ್ಲಿನ ಈದ್ಗಾ ಮೈದಾನದಲ್ಲಿ ಹಿರಿಯರು, ಯುವಕರು, ಚಿಣ್ಣರಾದಿಯಾಗಿ ಬಹುತೇಕರು ಶ್ವೇತವಸ್ತ್ರಧಾರಿಯಾಗಿ ಆಗಮಿಸಿ ಒಂದೆಡೆ ಸೇರಿ ಸಾಂಪ್ರಾದಾಯಿಕ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಮುಗಿಸಿ ಪರಸ್ಪರ ಆಲಂಗಿಸಿ ಶುಭಾಶಯ ವಿನಿಮಯ ಮಾಡಿಕೊಂಡರು.
ರಂಜಾನ್ ನಿಮಿತ್ತ ಮುನಿರಾಬಾದಿನ ಹಾಫೀಜ್ ಮಹಮ್ಮದ್ ಅತರ್ ಪಾಶಾ ಧರ್ಮಗುರುಗಳ ಸಮ್ಮುಖದಲ್ಲಿ ಕುರಾನ್ ಪಠಣ ಸೇರಿದಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಪ್ರಾರ್ಥನಾ ಸ್ಥಳಕ್ಕೆ ಕಾಂಗ್ರೆಸ್ ಮುಖಂಡರಾದ ವೆಂಕಟೇಶ್ ತಂಗಡಗಿ ಸೇರಿದಂತೆ ಇತರರು ತೆರಳಿ ಮುಸ್ಲಿಂ ಬಂಧುಗಳಿಗೆ ರಂಜಾನ್ ಶುಭಾಶಯ ಕೋರಿದರು. ಈ ವೇಳೆ ಈದ್ಗಾ ಮೈದಾನದ ಹೊರಗಡೆ ಇದ್ದ ಬಡವರು, ಭಿಕ್ಷುಕರಿಗೆ ದಾನ ನಡೆಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದರು.ಈ ಸಂದರ್ಭದಲ್ಲಿ ಜಾಮೀಯಾ ಮಸೀದಿ ಅಧ್ಯಕ್ಷ ಅಬ್ದುಲ್ ಗನಿಸಾಬ್, ಉಪಾಧ್ಯಕ್ಷ ಮುಸ್ತಫಾ ಬೇವಿನಗಿಡ, ಪ್ರ.ಕಾರ್ಯದರ್ಶಿ ಇಬ್ರಾಹಿಂ ಆಮದಿಹಾಳ, ಹಿರಿಯ ವೈದ್ಯ ಡಾ. ಎಂ.ಐ. ಮುದುಗಲ್, ನಿವೃತ್ತ ಶಿಕ್ಷಕ ಅಲಿ ಹುಸೇನ್, ಡಾ. ಅಲೀಮ್, ಅಮ್ರುಲ್ ಹುಸೇನ್, ಅಮ್ಜದ್ ಪಾಶಾ, ಖಾಜಾಹುಸೇನ್ ಮುಲ್ಲಾ, ಬಾಬುಸಾಬ್ ಬಳಿಗೇರ್, ಮಹ್ಮದ್ ಸೂಫಿ ಬಳಿಗೇರ್, ಮೌಲಾನಾ ಸಯ್ಯದ್ ಸಾಧಿಕ್, ಯೂಸೂಫ್, ಶಿರಾಜ್ ಹುಸೇನ್, ರಜಬ್ಅಲಿ ಬೇವಿನಗಿಡ, ಗ್ಯಾಸ್ ರಾಜಾಸಾಬ್, ನಬಿಸಾಬ್, ಖಲಂದರ್ಸಾಬ್ ಮುಲ್ಲಾ, ಜಿಂದಾಸಾಬ್ ಮುಲ್ಲಾ, ಜಹಾಂಗೀರ್ಸಾಬ್, ಮುಜಾಹೀದ್, ಖಾಜಿ ಶೆಕ್ಷಾವಲಿ ಇತರರಿದ್ದರು.
ಇನ್ನೂ ಪ್ರತಿ ಮನೆಯಲ್ಲೂ ಈದ್ ಉಲ್ ಫಿತರ್ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಕ್ಕಳು, ಮಹಿಳೆಯರು, ಯುವತಿಯರು ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಹಬ್ಬ ಆಚರಿಸಿದರು.ಇನ್ನೂ ತಾಲೂಕಿನ ಬೂದುಗುಂಪಾ, ಚೆಳ್ಳೂರು, ಸಿದ್ದಾಪುರ, ಮರ್ಲಾನಹಳ್ಳಿಯಲ್ಲಿಯೂ ಸಹ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು.