ರಾಣಿಬೆನ್ನೂರು: ತ್ಯಾಗ, ಬಲಿದಾನದ ಪ್ರತೀಕವಾದ ಹಾಗೂ ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬವನ್ನು ಮುಸಲ್ಮಾನ ಬಾಂಧವರು ಗುರುವಾರ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಇಲ್ಲಿನ ಮಾರುತಿ ನಗರದ ಈದ್ಗಾ ಮೈದಾನದಲ್ಲಿ ಬೆಳಗ್ಗೆ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಸಮಾಜ ಬಾಂಧವರು ಮೌಲ್ವಿಗಳ ಸಮ್ಮುಖದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಅಬಾಲವೃದ್ಧರಾಗಿ ಎಲ್ಲರೂ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೌಲ್ವಿಗಳು ಸಮಾಜ ಬಾಂಧವರಿಗೆ ಹಬ್ಬದ ಮಹತ್ವ ಹಾಗೂ ಇಸ್ಲಾಂ ಧರ್ಮದ ತತ್ವಗಳ ಕುರಿತು ಉಪದೇಶ ನೀಡಿದರು. ನಂತರ ಒಬ್ಬರಿಗೊಬ್ಬರು ಆಲಂಗಿಸಿಕೊಳ್ಳುವ ಮೂಲಕ ಹಬ್ಬದ ಶುಭಾಶಯ ಕೋರಿದರು.ನಗರಸಭೆ ಮಾಜಿ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ ಮುಸ್ಲಿಂ ಬಾಂಧವರಿಗೆ ಶುಭ ಕೋರಿದರು. ಶಾಸಕ ಪ್ರಕಾಶ ಕೋಳಿವಾಡ ಊರಿನಲ್ಲಿ ಇಲ್ಲದ್ದರಿಂದ ಪತ್ರದ ಮೂಲಕ ಲಿಖಿತ ಸಂದೇಶ ಕಳುಹಿಸಿದ್ದರು.ಅಂಜುಮನ್ ಸಂಸ್ಥೆ ಅಧ್ಯಕ್ಷ ಎಚ್.ಎಫ್. ಬಿದರಿ, ಶೇರುಖಾನ ಕಾಬೂಲಿ, ಅಬ್ದುಲ್ ವಹಾಬ್ ಶಾಫಿ, ನೂರುಲ್ಲಾ ಖಾಜಿ, ಮುನವ್ವರ್ ಬಾಗವಾಲೆ, ಜಮ್ಮಣ್ಣಿಸಾಬ್ ಅತ್ತಾರ, ಬಾಷಾಸಾಬ ಕಾಟೇನಹಳ್ಳಿ, ಖಾಲೀದ್ ಭಾವಿಕಟ್ಟಿ, ಖ್ವಾಜಾಸಾಬ ಭಾವಿಕಟ್ಡಿ, ಅಯ್ಯಾಶ ಖಾಜಿ, ಎಂ.ಕೆ. ಮೋಹಿಯುದ್ದಿನ್, ಇರ್ಫಾನ ದಿಡಗೂರ ಮತ್ತಿತರರಿದ್ದರು.