ಕನ್ನಡಪ್ರಡ ವಾರ್ತೆ ರಾಯಚೂರು
ಪೀಠಾಧಿಪತಿ ಡಾ। ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರ ಸಾನ್ನಿಧ್ಯದಲ್ಲಿ ಗುರುರಾಯರ ಆರಾಧಾನಾ ಮಹೋತ್ಸವ ನಿಮಿತ್ತವಾಗಿ ಶ್ರೀಮಠದಲ್ಲಿ ನಡೆಯುತ್ತಿರುವ ಸಪ್ತರಾತ್ರೋತ್ಸವದ 3ನೇ ದಿನದ ಪೂರ್ವಾರಾಧನೆಯಲ್ಲಿ ಪ್ರಾತಃಕಾಲದಲ್ಲಿ ನೈರ್ಮಾಲ್ಯ ವಿಸರ್ಜನೆ, ಉತ್ಸವ ರಾಯರ ಪಾದಪೂಜೆ ಹಾಗೂ ಪಂಚಾಮೃತಾಭಿಷೇಕವನ್ನು ನಡೆಸಲಾಯಿತು. ಬೆಳಗ್ಗೆ ವೇದ-ಮಂತ್ರಗಳ ಪಾರಾಯಣ ಹಾಗೂ ವಿದ್ವಾನ್ ಅನಂತಾಚಾರ್ಯ ಅವರಿಂದ ಜ್ಞಾನಯಜ್ಞ ಪ್ರವಚನ ಸೇರಿ ಮೊದಲಾದ ಆಧ್ಯಾತ್ಮಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಶ್ರೀರಂಗಂನಿಂದ ಬಂದ ಶೇಷವಸ್ತ್ರ: ಪ್ರತಿವರ್ಷದಂತೆ ಗುರುರಾಯರ ಪೂರ್ವಾರಾಧನೆ ಅಂಗವಾಗಿ ತಮಿಳುನಾಡು ರಾಜ್ಯದ ತಿರಚಿಯ ಶ್ರೀರಂಗಂನ ಶ್ರೀರಂಗನಾಥ ಸ್ವಾಮಿ ದೇವಸ್ಥಾನದಿಂದ ವಸ್ತ್ರರೂಪದಲ್ಲಿ ತರಲಾಗಿದ್ದ ಶೇಷವಸ್ತ್ರ ಪ್ರಸಾದವನ್ನು ಶ್ರೀಗಳು ಸ್ವಾಗತಿಸಿದರು. ಮೆರವಣಿಗೆ ನಡೆಸಿ ಮೂಲ ಬೃಂದಾವನದ ಮುಂದಿರಿಸಿ ಮಂಗಳಾರತಿ ಮಾಡಿ ರಾಯರಿಗೆ ಸಮರ್ಪಿಸಿದರು.ನಂತರ ಪ್ರಾಕಾರದ ವೇದಿಕೆಯಲ್ಲಿ ಭಕ್ತರನ್ನುದ್ದೇಶಿಸಿ ಅನುಗ್ರಹ ಸಂದೇಶ ನೀಡಿದ ಸ್ವಾಮಿಗಳು, ಭಾರತ ದೇಶದ ಎಂಟು ಸ್ವಯಂ ವ್ಯಕ್ತ ಕ್ಷೇತ್ರಗಳಲ್ಲಿ ಮೊದಲನೇ ಕ್ಷೇತ್ರವಾದ ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ಆಗಮಿಸಿರುವ ಶೇಷವಸ್ತ್ರವನ್ನು ಸ್ವಾಗತಿಸಿಕೊಂಡು ಶ್ರೀರಾಘವೇಂದ್ರ ಸ್ವಾಮಿಗಳಿಗೆ ಸಮರ್ಪಿಸಲಾಗಿದೆ. ರಾಯರ ಪೂರ್ವಾರಾಧನೆ ಪ್ರಯುಕ್ತ ಶ್ರೀರಂಗನಾಥ ಸ್ವಾಮಿಗಳು ವಸ್ತ್ರರೂಪದ ಪ್ರಸಾದದಲ್ಲಿ ಸುಕ್ಷೇತ್ರ ಮಂತ್ರಾಲಯಕ್ಕೆ ಆಗಮಿಸಿ ಭಕ್ತರನ್ನು ಅನುಗ್ರಹಿಸಿದ್ದಾರೆ ಎಂದರು.
ಶ್ರೀಗಳಿಂದ ಸಂಸ್ಥಾನ ಪೂಜೆ:
ವಾರದ ರಜೆ ಹಿನ್ನೆಲೆಯಲ್ಲಿ ವಿವಿಧ ಪ್ರದೇಶಗಳಿಂದ ಅಸಂಖ್ಯಾತ ಭಕ್ತರು ಸುಕ್ಷೇತ್ರಕ್ಕೆ ಆಗಮಿಸಿ ಪೂರ್ವಾರಾಧನೆ ಉತ್ಸವಗಳನ್ನು ಕಣ್ತುಂಬಿಕೊಂಡರು.