ಕೊಟ್ಟೂರು: ತಾಲೂಕಿನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಪ್ರಗತಿಯಲ್ಲಿದ್ದು, ಮತ್ತೊಷ್ಟು ಚುರುಕುಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಅಮರೇಶ್ ಜಿ.ಕೆ. ಹೇಳಿದರು.
ತಾಲೂಕಿನಲ್ಲಿನ 8490 ಮನೆ ಗಣತಿ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದ್ದು, 270 ಗಣತಿದಾರರನ್ನು ಮತ್ತು 14 ಮೇಲ್ವೆಚಾರಕರನ್ನು ನಿಯೋಜಿಸಿಕೊಳ್ಳಲಾಗಿದೆ. ಈಗಾಗಲೇ ಮೇಲ್ವೆಚಾರಕರ ಸಭೆ ಕರೆದು ಮಾಹಿತಿ ಪಡೆದಿದ್ದು ತಾಲೂಕಿನ ಗಾಣಗಟ್ಟಿ, ಭೈರದೇವರಗುಡ್ಡ, ಮಂಗಾಪುರ ಮತ್ತು ಕುಡಿತಿನಿಮಗ್ಗಿ ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಕಾಡುತ್ತಿದ್ದು, ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಈ ತಾಂತ್ರಿಕ ಸಮಸ್ಯೆಯನ್ನು ನಿವಾರಿಸಲಾಗುತ್ತಿದೆ ಎಂದರು.
ತಾಲೂಕಿನ ಮಲ್ಲನಾಯಕನಹಳ್ಳಿ ಮತ್ತು ಅಕ್ಕಾಪುರ ಗ್ರಾಮದಲ್ಲಿ ಗಣತಿದಾರರನ್ನು ನಿಯೋಜಿಸಿರಲಿಲ್ಲ ಇದೀಗ 3 ಜನ ಅಂಗನವಾಡಿ ಶಿಕ್ಷಕಿಯರನ್ನು ಮಲ್ಲನಾಯಕನಹಳ್ಳಿಗೆ 4 ಜನ ಶಿಕ್ಷಕರನ್ನು ಗಜಾಪುರ ಗ್ರಾಮದ ಗಣತಿ ಕಾರ್ಯ ಮುಗಿದ ಕೊಡಲೇ ಅಕ್ಕಾಪುರ ಗಣತಿ ಕಾರ್ಯ ಮಾಡುವಂತೆ ಮೇಲ್ವೆಚಾರಕರಿಗೆ ತಿಳಿಸಲಾಗಿದೆ ಎಂದರು.ಗ್ರಾಮಗಳಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು, ಸಹಾಯಕರು, ಬಿಲ್ ಕಲೆಕ್ಟರ್, ಕೊಟ್ಟೂರು ಪಟ್ಟಣದಲ್ಲಿ ನೀರು ಗಂಟೆಗಳನ್ನು ಸಹಾಯಕರಾಗಿ ನಿಯೋಜಿಸಲಾಗಿದೆ ಮನೆಗಳ ಮತ್ತು ಇತರ ಮಾಹಿತಿಯನ್ನು ನೀಡಲು ಅವರುಗಳು ಸಹಕರಿಸಲಿದ್ದಾರೆ ಎಂದರು.
ಗಣತಿದಾರರ ಮಾಹಿತಿಯ ಪ್ರಗತಿಯನ್ನು ಆಗಾಗ ಪರಿಶೀಲಿಸಿ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತದೆ. ಸರ್ಕಾರ ನಿಗದಿಗೊಳಿಸಿದ ಅವಧಿಯೊಳಗೆ ತಾಲೂಕಿನಲ್ಲಿ ಗಣತಿಕಾರ್ಯವನ್ನು ಪೂರ್ಣಗೊಳಿಸುವಂತೆ ಪ್ರತಿಯೊಬ್ಬರಿಗೂ ಸೂಚನೆ ನೀಡಲಾಗಿದೆ ಎಂದರು.