ಕರ ಸೇವಕರಿಗೆ ಹೂ ಎರಚಿ ಜೈಕಾರ । ಸಣ್ಣಸಣ್ಣ ಮಕ್ಕಳು ವೇಷ ಧರಿಸಿ ಭಾಗಿ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಧನೆಗೆ ನೂರು ವರ್ಷದ ಸಂಭ್ರಮದ ಹಿನ್ನಲೆಯಲ್ಲಿ ಭಾನುವಾರ ಕೋಟೆ ನಗರದಲ್ಲಿ ಶತಾಬ್ಧಿ ಪಥಸಂಚಲನದಲ್ಲಿ ಗಣ ವೇಷದಾರಿಗಳು ಶಿಸ್ತು ಬದ್ದ ಪಥ ಸಂಚಲನ ನಡೆಸಿದರು.
ನಗರದ ರಂಗಯ್ಯನ ಬಾಗಿಲ ಸುರಕ್ಷಾ ಕಾಲೇಜು ಆವರಣದಿಂದ ದೊಡ್ಡಪೇಟೆ, ಉಚ್ಚಂಗಿಯಲ್ಲಮ್ಮ ದೇವಾಲಯ, ತರಾಸು ಬೀದಿ ಮರ್ಗವಾಗಿ ಏಕನಾಥೇಶ್ವರಿ ಪಾದಗುಡಿ, ಕೋಟೆ ರಸ್ತೆ, ಕಾಮನಬಾವಿ ಬಡಾವಣೆ, ಪೋಸ್ಟ್ ಅಫೀಸ್ ರಸ್ತೆ, ಫಿಲ್ಟರ್ ಹೌಸ ರಸ್ತೆ, ಕರುವಿನ ಕಟ್ಟೆ ವೃತ್ತ, ಜೋಗಿಮಟ್ಟಿ ರಸ್ತೆ ಮೊದಲನೇ ತಿರುವು, ಆಸ್ಪತ್ರೆ ವೃತ್ತದ ಮೂಲಕ ಮರಳಿ ಸುರಕ್ಷಾ ಕಾಲೇಜನ್ನು ತಲುಪಿತು.
ಪಥ ಸಂಚಲನ ಸಾಗುವ ದಾರಿಯಲ್ಲಿ ಮನೆಗಳ ಮುಂದೆ ನೀರನ್ನು ಹಾಕಿ ಬಣ್ಣ ಬಣ್ಣದ ರಂಗೋಲಿಯನ್ನು ಹಾಕುವುದರ ಮೂಲಕ ಭಾರತಾಂಬೆ ಭಾವಚಿತ್ರ ಇರಿಸಿ ಕರ ಸೇವಕರಿಗೆ ಹೂ ಎರಚಿ ಭಾರತಾ ಮಾತಾಕಿ ಜೈ , ಜೈ ಶ್ರೀರಾಮ್ ಎನ್ನುವ ಮೂಲಕ ಸ್ವಾಗತ ಕೋರಿದರು.
ಗಣ ವೇಷಧಾರಿಗಳು ಖಾಕಿ ಬಣ್ಣದ ಪ್ಯಾಂಟ್, ಶುಭ್ರ ಬಿಳಿ ಬಣ್ಣದ ಅಂಗಿ ತಲೆಯ ಮೇಲೆ ಕರಿ ಟೋಪಿಯನ್ನು ಹಾಕಿಕೊಂಡು ಕೈಯಲ್ಲಿ ದಂಡವನ್ನು ಹಿಡಿದು ಸಾವಿರಾರು ಸ್ವಯಂ ಸೇವಕರು ಶಿಸ್ತು ಬದ್ಧವಾಗಿ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದ ದೃಶ್ಯ ಮನ ಮೋಹಕವಾಗಿತ್ತು
ಇದರಲ್ಲಿ ಸಣ್ಣಸಣ್ಣ ಮಕ್ಕಳು ಸಹಾ ಈ ವೇಷವನ್ನು ಧರಿಸಿ ಭಾಗವಹಿಸಿದ್ದು ನೋಡುಗರ ಮನ ಸೆಳೆಯಿತು.
ಪಥ ಸಂಚಲನದಲ್ಲಿ ಭಾರತಾಂಭೆ, ಒನಕೆ ಓಬವ್ವ, ಡಾ.ಬಿ.ಆರ್ ಆಂಬೇಡ್ಕರ್ ಹಾಗೂ ದೇಶವನ್ನು ಕಾಯುವ ಸೈನಿಕರ ವೇಷವನ್ನು ಮಕ್ಕಳು ಧರಿಸಿದ್ದರು. ಇದೇ ಸಂದರ್ಭದಲ್ಲಿ ಡಾ.ಜಿ ಹಾಗೂ ಗೂರೂಜಿಯವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ಇರಿಸಲಾಯಿತು. ಸುಶ್ರಾವ್ಯವಾದ ಡ್ರಮ್ ಮತ್ತಿತರ ವಾದ್ಯಗಳಿಂದ ಮೊಳಗಿದ ಹಿಮ್ಮೇಳ ಪಥ ಸಂಚಲನಕ್ಕೆ ಮೆರುಗು ನೀಡಿತ್ತು.
ಜಿಲ್ಲಾ ಸಹ ಚಾಲಕ ನಾಗೇಶ್, ರಾಜ ಕುಮಾರ್ ರಾಮಕಿರಣ್, ಪ್ರಬಾಕರ್, ಶ್ರೀನಾಥ್,ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್, ಮಾಜಿ ಶಾಸಕರಾದ ಜಿ.ಎಚ್. ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಯುವ ಮುಖಂಡರಾದ ಅನಿತ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್ ಸಿದ್ಧಾಪುರ, ರಾಜ್ಯ ರೈತ ಸಂಘದ ಕಾರ್ಯದರ್ಶಿ ಮಲ್ಲಿಕಾರ್ಜುನ್, ರೈತ ಮೊರ್ಚಾದ ಜಿಲ್ಲಾಧ್ಯಕ್ಷ ವೆಂಕಟೇಶ್ ಯಾದವ್, ಗ್ರಾಮಾಂತರ ಅಧ್ಯಕ್ಷ ಕೆ.ನಾಗರಾಜ್, ಭಾರ್ಗವಿ ದ್ರಾವಿಡ್, ನಾಗರಾಜ್ ಸಂಗಂ, ಉಮೇಶ್ ಕಾರಜೋಳ, ರುದೇಶ್, ಜಿ.ಎಂ.ಸುರೇಶ್, ನಂದಿ ನಾಗರಾಜ್ ಟಿ.ಜಿ ನರೇಂದ್ರನಾಥ್, ಬದರಿನಾಥ್, ನಾಗರಾಜ್ ಬೇದ್ರೇ ಸೇರಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.