ಅರಕಲಗೂಡು : ತುಂಬಾ ಪವರ್ಪುಲ್ ಪ್ರಧಾನಿಯೂ ಆಗಿರುವ ವಿಶ್ವಗುರುಗೆ ನಮ್ಮ ದೇಶದ ಮತದಾರರ ಪಟ್ಟಿಯನ್ನು ಕೊಡಲು ತೊಂದರೆ ಇದೆಯಾ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
ಪಟ್ಟಣದಲ್ಲಿ ನಡೆಯುತ್ತಿರುವ ಸಿದ್ದರಾಮಯ್ಯ ಕ್ರಿಕೆಟ್ ಕಪ್ ಕಾರ್ಯಕ್ರಮದಲ್ಲಿ ಮಾತನಾಡಿದರು, ಬಿಜೆಪಿ ಅಥವಾ ಚುನಾವಣಾ ಕಮಿಷನ್ನವರಾಗಲಿ ಎಲೆಕ್ಷನ್ ಓಟಿಂಗ್ ಪ್ಯಾಟ್ರನ್ನನ್ನು ಕೊಡಬಾರದಾಗಿ ಕಾನೂನನ್ನೆ ತಂದಿದ್ದಾರೆ. ಈ ಹೊಸ ಕಾನೂನಿನಿಂದ ಮತದಾರರ ಪಟ್ಟಿ ಕೇಳಿದರೇ ಕೊಡುತ್ತಿಲ್ಲ. ಅದಕ್ಕೆ ಬಿಜೆಪಿಯವರನ್ನು ಕೇಳಿನೋಡಿ. ಈ ಬಗ್ಗೆ ಎಲ್ಲೋ ಒಂದು ರೀತಿಯಲ್ಲಿ ಟ್ಯಾಂಪರಿಂಗ್ ಆಗುತ್ತಿದೆ ಎಂಬುದು ನನ್ನ ನಂಬಿಕೆಯಾಗಿದೆ ಎಂದರು.
ವಿಪಕ್ಷಗಳು ಕೂಡ ಈ ಬಗ್ಗೆ ಮಾತನಾಡಿಕೊಳ್ಳುತ್ತಿವೆ. ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ತಕ್ಷಣ ಇಂತಹ ಮಾತು ಕೇಳಿಬರುತ್ತಿವೆ ಅಂತಲ್ಲ. ಮ್ಯಾನುಪಿಲೇಷನ್ ಮಾಡತಕ್ಕಂತಹದು ಬರೇ ಓಟಿಂಗ್ ಮಿಷನ್ ಅಲ್ಲ. ಇಡೀ ಸರ್ಕಾರದ ಮೆಷಿನರಿನೇ ಬಳಕೆ ಮಾಡುತ್ತಿದ್ದಾರೆ. ಕೇಜ್ರಿವಾಲ್ರನ್ನು ಜೈಲಿಗೆ ಹಾಕಿದರು. ಈ ಬಗ್ಗೆ ಏನೂ ಕಾರಣ ಎಂಬುದು ತಿಳಿದಿಲ್ಲ. ಈ ರೀತಿಯ ಹಲವಾರು ವಿಷಯಗಳು ಇವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು. ದೆಹಲಿ ಚುನಾವಣೆ ವೇಳೆ ಕೇವಲ 6 ತಿಂಗಳಲ್ಲಿ 4 ಲಕ್ಷ ಮತದಾರರು ಸಂಖ್ಯೆ ಜಾಸ್ತಿಯಾಗಿದೆ. ಈ ಹಿಂದೆ ನಡೆದ ಮಹಾರಾಷ್ಟ ಚುನಾವಣೆ ವೇಳೆಯೂ ಕೂಡ 40 ರಿಂದ 70 ಲಕ್ಷ ಮತದಾರರು ಹೆಚ್ಚಾಗಿರುವುದು ಕಂಡುಬಂದಿದೆ.
ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕಂಡುಬಂದಿರುವ ಹೆಚ್ಚಿನ ಮತದಾರರ ಸಂಖ್ಯೆ ಬಗ್ಗೆ ನಮ್ಮ ನಾಯಕರಾದ ರಾಹುಲ್ ಗಾಂಧಿಯವರು ಲೋಕಸಭೆಯಲ್ಲಿ ಮಾತನಾಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿದರೇ ಎಲ್ಲೋ ಒಂದು ರೀತಿಯಲ್ಲಿ ನ್ಯಾಯಯುತ ಚುನಾವಣೆ ನಡೆದಿಲ್ಲ ಎಂಬುದು ತಿಳಿಯುತ್ತಿದೆ. ಇದೊಂದು ರೀತಿಯ ಮೆಕಾನಿಷಂ ಕಲಿತಿರುವಂತೆ ಕಾಣುತ್ತಿದೆ ಎಂದರು.
ಗ್ಯಾರಂಟಿ ಯೋಜನೆಯಿಂದ ರಾಜ್ಯ ಸರ್ಕಾರ ನಿಗಮ ಮಂಡಳಿಗೆ ಹಣ ಕೊಡಲು ಆಗುತ್ತಿಲ್ಲ. ಮೈಕ್ರೋ ಫೈನಾನ್ಸ್ ಸಾಲ ಪಡೆದಿರುವ ಕೆಲ ಬಡಕುಟುಂಬಗಳು ಆತ್ಮಹತ್ಯೆಯಂತ ಕೃತ್ಯಕ್ಕೆ ಮುಂದಾಗುತ್ತಿರುವುದಕ್ಕೆ ಕಾರಣ ಎಂಬ ವಿರೋಧ ಪಕ್ಷದ ನಾಯಕ ಆರ್.ಆಶೋಕ್ ಹೇಳಿಕೆ ಕುರಿತು ಸಂತೋಷ್ ಲಾಡ್ ಪ್ರತಿಕ್ರಿಯೆ ನೀಡಿ, ಅಶೋಕ್ ಕಾಲದಲ್ಲಿ ಎಷ್ಟು ಹಣವನ್ನು ಕೊಟ್ಟಿದ್ದಾರೆ. ಕಳೆದ 11 ವರ್ಷದಿಂದ ಕೇಂದ್ರದಿಂದ ರಾಜ್ಯಕ್ಕೆ ಬಂದಿರುವ ಅನುದಾನದ ಬಗ್ಗೆಯೂ ಅವರು ತಿಳಿಸಲಿ, ಆನಂತರ ಈ ಬಗ್ಗೆ ಚರ್ಚೆ ಮಾಡೋಣ ಎಂದರು.
ರಾಜ್ಯದಿಂದ ಆಯ್ಕೆಗೊಂಡ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ರಾಜ್ಯಕ್ಕೆ ಅನುದಾನ ತರುವುದು, ಅಭಿವೃದ್ಧಿ ಕೈಗೊಳ್ಳುವುದು ಅವರ ಜವಬ್ದಾರಿ. ರಾಜ್ಯದಿಂದ ಅವರಿಗೆ ಪ್ರಸ್ತಾವನೆ ಸಲ್ಲಿಕೆ ಮಾಡುವ ಅವಶ್ಯಕತೆಯಿಲ್ಲ.ಇಲ್ಲಿರುವ ಎಚ್ಇಎಲ್ಗೆ ಕೆಲಸ ಕೊಡಲು ಆಗಿಲ್ಲ. ನಿಮ್ಮದೇ ಕೇಂದ್ರ ಸರ್ಕಾರವಿದೆ ಮಾಡಿ. ರೆಫೈಲ್ ಡೀಲ್ ಆಗಿದೆ. ಇದು ಈ ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಕಾಲದಲ್ಲಿ ಆಗಿರುವುದು. ತಂತ್ರಜ್ಞಾನ ಬದಲಾವಣೆಯಾಗಬೇಕು. ಇಲ್ಲಿರುವರಿಗೆ ಕೆಲಸ ಕೊಡಬೇಕು. ಆಮೇಲೆ ಟೆಕ್ನಾಲಜಿ ವರ್ಗಾವಣೆಯಾಗಬೇಕು ಎಂಬುದಾಗಿದೆ. ಕುಮಾರಣ್ಣ ಕೇಂದ್ರ ಸಚಿವರಿದ್ದಾರೆ ಅಲ್ವ. 23 ಕಂಪನಿಗಳನ್ನು ಮಾರಾಟ ಮಾಡಲಾಗಿದೆ.
ಬಿಎಸ್ಎನ್ಎಲ್ ಕುರಿತು ಅವರು ಮಾತನಾಡಲಿ. ಕುದುರೆಮುಖ ಹಾಳಾಗಲು ಕಾರಣವೇನು, ನಮ್ಮ ಕೋಲ್ಮೈನ್ ಏಕೆ ವೀಕ್ ಆಗುತ್ತಿದೆ. ನಮ್ಮ ಸೆಂಟ್ರಲ್ ಗೌರ್ನಮೆಂಟ್ನಲ್ಲಿರುವಂತಹ ಕಂಪನಿಗಳ ಬಗ್ಗೆಯೂ ಚರ್ಚೆ ಮಾಡೋಣ ಎಂದು ಹೇಳಿದರು.ರಾಜ್ಯ ಸಚಿವ ಸಂಪುಟ ವಿಸ್ತರಣೆ ಹೈಕಮಾಂಡ್, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಬಿಟ್ಟಿರುವ ವಿಚಾರ ಎಂದು ಉತ್ತರಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಕೃಷ್ಣೇಗೌಡ,ಪ್ರ ಸನ್ನಕುಮಾರ್ ಇದ್ದರು.