ಚನ್ನಮ್ಮ ಹಳ್ಳಿಕೇರಿ ಪರಿಶುದ್ಧ ಸೇವೆಯ ಕೊಡುಗೆ ನೀಡಿದ್ದಾರೆ

KannadaprabhaNewsNetwork | Published : Jan 5, 2024 1:45 AM

ಸಾರಾಂಶ

- ಪ್ರೊ.ಎಸ್‌. ಶಿವರಾಜಪ್ಪ ಅಭಿಮತ. - ಗಾಂಧಿ ಭವನದಲ್ಲಿ ಶ್ರದ್ಧಾಂಜಲಿ ಸಭೆ

- ಚನ್ನಮ್ಮ ಹಳ್ಳಿಕೇರಿ ಪರಿಶುದ್ಧ ಸೇವೆಯ ಕೊಡುಗೆ ನೀಡಿದ್ದಾರೆ

- ಪ್ರೊ.ಎಸ್‌. ಶಿವರಾಜಪ್ಪ ಅಭಿಮತ

- ಗಾಂಧಿ ಭವನದಲ್ಲಿ ಶ್ರದ್ಧಾಂಜಲಿ ಸಭೆ

------

ಕನ್ನಡಪ್ರಭ ವಾರ್ತೆ ಮೈಸೂರು

ಚನ್ನಮ್ಮ ಹಳ್ಳಿಕೇರಿ ಅವರು ಅನ್ಯಾಯವನ್ನು ಎಂದೂ ಸಹಿಸದವರು, ತಮ್ಮ ಜೀವನದಲ್ಲಿ ನಿಷ್ಕಳಂಕ ಪರಿಶುದ್ಧವಾದ ಸೇವೆಯನ್ನು ಸಮಾಜಕ್ಕೆ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಪ್ರೊ.ಎಸ್‌. ಶಿವರಾಜಪ್ಪ ಅಭಿಪ್ರಾಯಪಟ್ಟರು.

ಮಾನಸ ಗಂಗೋತ್ರಿಯ ಗಾಂಧಿಭವನದಲ್ಲಿ ಗುರುವಾರ ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ ಹಾಗೂ ಚನ್ನಮ್ಮ ಹಳ್ಳಿಕೇರಿ ಅಭಿಮಾನಿ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಚನ್ನಮ್ಮ ಹಳ್ಳಿಕೇರಿ ಅವರಿಗೆ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.

ಚನ್ನಮ್ಮ ಅವರು ಗಾಂಧಿ ಮತ್ತು ವಿನೋಬಾ ಭಾವೆ ತತ್ತ್ವಗಳನ್ನು ಪರಿಪಾಲಿಸಿದರು. ಅವರ ಆದರ್ಶ ನಮಗೆ ದಾರಿ ದೀಪವಾಗಲಿದೆ. ಕನ್ನಡ, ಮರಾಠಿ ಭಾಷೆ ಮಾತ್ರ ಗೊತ್ತಿದ್ದ ಅವರು, 18 ದೇಶಗಳನ್ನು ಸುತ್ತಿ ಬಂದರು. ಹೆಣ್ಣು-ಗಂಡು ಭೇದವಿಲ್ಲದೆ ಎಲ್ಲರೂ ಸಮಾನರು ಎಂಬ ಕಲ್ಪನೆ ಚನ್ನಮ್ಮ ಹಳ್ಳಿಕೇರಿ ಅವರದಾಗಿತ್ತು ಎಂದರು.

ಕುವೆಂಪು ವಿವಿಯ ವಿಶ್ರಾಂತ ಕುಲಪತಿ ಪ್ರೊ.ಪಿ. ವೆಂಕಟರಾಮಯ್ಯ ಮಾತನಾಡಿ, 1931 ರಲ್ಲಿ ಜನಿಸಿದ ಚನ್ನಮ್ಮ ಹಳ್ಳಿಕೇರಿ ಅವರು ವಿನೋಬಾ ಭಾವೆ ಅವರಿಂದ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮಹಿಳೆಯರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಇವರ ಕೊಡುಗೆ ಮಹತ್ತರವಾದದ್ದು ಎಂದು ಅವರು ಹೇಳಿದರು.

ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ಎಸ್. ನರೇಂದ್ರ ಕುಮಾರ್ ಅಧ್ಯಕ್ಷತೆವಹಿಸಿ ಮಾತನಾಡಿ, ಚನ್ನಮ್ಮ ಹಳ್ಳಿಕೇರಿ ಅವರು ಮಾನವೀಯ ಮೌಲ್ಯಗಳ ನೆಲೆಗಟ್ಟಿನಲ್ಲಿ ಬದುಕಿದ್ದಾಗಿ ಹೇಳಿದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರದ ವಿಶ್ರಾಂತ ನಿರ್ದೇಶಕ ಪ್ರೊ.ಎಂ.ಜಿ. ಬಸವರಾಜ, ಗಾಂಧಿ ಮಾರ್ಗಿ ಕೆ.ಟಿ. ವೀರಪ್ಪ, ಸದ್ವಿದ್ಯಾ ಶಿಕ್ಷಣ ಸಂಸ್ಥೆ ನಿರ್ದೇಶಕ ಗೋಪಿನಾಥ್ ಮೊದಲಾದವರು ಇದ್ದರು.

Share this article