ಚೇರ್ಕಾಡಿ: ನಾಳೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಲೋಕಾರ್ಪಣೆ

KannadaprabhaNewsNetwork |  
Published : Apr 28, 2025, 11:48 PM IST
18ಚೇರ್ಕಾಡಿ | Kannada Prabha

ಸಾರಾಂಶ

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೀಪಪ್ರಜ್ವಲನೆ ನಡೆಸಲಿದ್ದು, ರಾ.ಸ್ವ.ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉಪಸ್ಥಿತರಿರುತ್ತಾರೆ.

ಪೇಜಾವರ ಶ್ರೀ, ಆರೆಸ್ಸೆಸ್‌ನ ದತ್ತಾತ್ರೆಯ ಹೊಸಬಾಳೆ, ಇಸ್ರೋದ ಡಾ. ಸೋಮನಾಥ್‌ ಉಪಸ್ಥಿತಿ

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಭಾರತೀಯ ಸಂಸ್ಕೃತಿಯ ಜೊತೆಗೆ ಅಧುನಿಕ ಶಿಕ್ಷಣ ನೀಡುವ ಉದ್ದೇಶದಿಂದ

ರಾಷ್ಟ್ರೋತ್ಥಾನ ಪರಿಷತ್‌ ವತಿಯಿಂದ ಇಲ್ಲಿನ ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಕೇಶವನಗರದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ - ಸಿಬಿಎಸ್‌ಇ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ ಕಟ್ಟಡಗಳ ಲೋಕಾರ್ಪಣೆ ಬುಧವಾರ ಸಂಜೆ 4.30ಕ್ಕೆ ನೆರವೇರಲಿದೆ.

ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್‌ ಹೆಗ್ಡೆ ಸೋಮವಾರ ಕೇಶವನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ದೀಪಪ್ರಜ್ವಲನೆ ನಡೆಸಲಿದ್ದು, ರಾ.ಸ್ವ.ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಇಸ್ರೋದ ನಿಕಟಪೂರ್ವ ಅಧ್ಯಕ್ಷ ಡಾ. ಎಸ್. ಸೋಮನಾಥ್ ಉಪಸ್ಥಿತರಿರುತ್ತಾರೆ ಎಂದರು.

ಇದಕ್ಕೂ ಪೂರ್ವದಲ್ಲಿ ಮಂಗಳವಾರ ಸಂಜೆ ಉಡುಪಿಯ ಪಡುಕುತ್ಯಾರಿನ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಕಟ್ಟಡಗಳ ವಾಸ್ತುಪೂಜೆ ಮತ್ತು ಬುಧವಾರ ಬೆಳಗ್ಗೆ ಉಡುಪಿಯ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರ ದಿವ್ಯ ಸಾನ್ನಿಧ್ಯದಲ್ಲಿ ಕಟ್ಟಡಗಳ ಗೃಹಪ್ರವೇಶ ಮತ್ತುಳಿದ ಧಾರ್ಮಿಕ ಕಾರ್ಯಕ್ರಮಗಳನ್ನು ಯೋಜಿಸಲಾಗಿದೆ ಎಂದರು.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹ ೨೦೦೫-೦೬ ಕಾರ್ಯಾರಂಭಿಸಿ, ಈಗಾಗಲೇ ರಾಜ್ಯದಲ್ಲಿ 12 ಜಿಲ್ಲೆಗಳಲ್ಲಿ 16 ವಿದ್ಯಾ ಕೇಂದ್ರಗಳನ್ನು ಆರಂಭಿಸಲಾಗಿದೆ. 18,000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತಿದ್ದಾರೆ. ಈಗ ಉಡುಪಿಗೆ ಪಾದಾರ್ಪಣೆ ಮಾಡುತ್ತಿದೆ. ಇದೇ ಮೇ ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಪ್ರಾರಂಭವಾಗಲಿವೆ ಎಂದರು.

ಕೇಶವನಗರದ ೨೦ ಎಕರೆ ವಿಶಾಲ ಕ್ಯಾಂಪಸ್‌ನಲ್ಲಿ ಪ್ರಿ-ಕೇಜಿಯಿಂದ ೮ನೇ ತರಗತಿ ಹಾಗೂ ಪ್ರಥಮ ಪಿಯುಸಿ (ಪಿಸಿಎಂಬಿ, ಪಿಸಿಎಂಸಿಎಸ್, ಕಾಮರ್ಸ್)ವರೆಗೆ ವ್ಯಾಸಂಗಕ್ಕೆ ಅವಕಾಶ ಇದೆ. ಈ 3 ತರಗತಿಗಳಿಗೆ ಸುಮಾರು 1000 ವಿದ್ಯಾರ್ಥಿಗಳು ಪ್ರವೇಶ ಪಡೆಯುವ ನಿರೀಕ್ಷೆ ಇದ್ದು, ಈಗಾಗಲೇ 600 ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಇಲ್ಲಿನ ಪಿಯು ವಿದ್ಯಾರ್ಥಿಗಳಿಗೆ ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಾದ ಜೆಇಇ, ನೀಟ್, ಕೆಸಿಇಟಿ, ಸಿಎ, ಸಿಎಸ್ ಹಾಗೂ ಕ್ಲಾಟ್ ಪರೀಕ್ಷೆಗಳಿಗೆ ತರಬೇತಿಯನ್ನೂ ನೀಡಲಾಗುತ್ತದೆ. 10 ತರಗತಿಯಲ್ಲಿ ವಿದ್ಯಾರ್ಥಿಗಳ ಅಂಕಗಳನ್ನು ಆಧರಿಸಿ ವಿದ್ಯಾರ್ಥಿವೇತನ ನೀಡಲಾಗುತ್ತದೆ, 250 ಹುಡುಗ-ಹುಡುಗಿಯರಿಗೆ ಪ್ರತ್ಯೇಕವಾಗಿ ಹಾಸ್ಟೇಲ್ ವ್ಯವಸ್ಥೆ, ಕುಂದಾಪುರ, ಸಿದ್ದಾಪುರ, ಹೆಬ್ರಿ, ಕಾರ್ಕಳ, ಮಣಿಪಾಲ, ಉಡುಪಿ, ಶಿರ್ವ-ಮಂಚಕಲ್, ಕಾಪು, ಮಲ್ಪೆಯಿಂದ ಬಸ್ಸಿನ ವ್ಯವಸ್ಥೆಯೂ ಇದೆ.

ಸುಸ್ಥಿರ ಮತ್ತು ಸ್ವಸ್ಥ ಸಮಾಜ ನಿರ್ಮಾಣದ ಗುರಿ ಹೊಂದಿರುವ ರಾಷ್ಟ್ರೋತ್ಥಾನ ಪರಿಷತ್‌, ಇಲ್ಲಿನ ನೀರಿಂಗಿಸುವ, ನೀರಿನ ಮಿತ ಬಳಕೆಯ, ಸೌರಶಕ್ತಿಯಿಂದ ವಿದ್ಯುತ್ ಬಳಸುವ ತಂತ್ರಜ್ಞಾನಗಳನ್ನು ಅಳವಡಿಸಿದೆ. ಜೊತೆಗೆ ಶಾಲೆಯ ನಿರ್ಮಾಣಕ್ಕೆ ಕಡಿಯಲಾದ ಮರಗಳಿಗೆ ಪರ್ಯಾಯವಾಗಿ 1000 ಮರಗಳನ್ನು ನೆಡುವ ಯೋಜನೆಯನ್ನೂ ಹಾಕಿಕೊಂಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಸಂಚಲನಾ ಸಮಿತಿ ಅಧ್ಯಕ್ಷ ಸಾಧು ಸಾಲಿಯನ್, ಕಾರ್ಯದರ್ಶಿ ರಿಷಿರಾಜ್, ಪಿಯು ಕಾಲೇಜಿ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್, ವಿದ್ಯಾಕೇಂದ್ರ ಪ್ರಾಂಶುಪಾಲೆ ಪೂರ್ಣಿಮ, ಸಂಚಾಲಕ ವಸಂತ್ ಕುಮಾರ್ ಇದ್ದರು.

PREV

Recommended Stories

ಮದ್ದೂರು ಗಣೇಶ ಗಲಾಟೆಗೆ ಪೂರ್ಣ ಮುಸ್ಲಿಮರೇ ಕಾರಣ: ಸಚಿವ ಚಲುವ
ಬುರುಡೆ ಕೇಸ್‌ : ಸಾಕ್ಷಿದಾರರ ಬಂಧನ..? ಮಟ್ಟಣ್ಣವರ್‌, ಜಯಂತ್‌, ಅಭಿಷೇಕ್, ಮನಾಫಾ ವಿಠಲಗೆ ಗ್ರಿಲ್