ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಶಾಸಕ ಪ್ರದೀಪ್ ಈಶ್ವರ್ ಗುರುವಾರ ಮುಂಜಾನೆ ಆರು ಗಂಟೆಯಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಏಕಾಏಕಿ ನಗರಸಭೆ ಅಧಿಕಾರಿಗಳೊಂದಿಗೆ ನಗರ ಪ್ರದಕ್ಷಿಣೆ ನಡೆಸಿ, ಹಾಳಾಗಿದ್ದ ನಗರದ ಮೂರು ರಸ್ತೆಗಳಿಗೆ ಡಾಂಬರೀಕರಣಕ್ಕೆ ಸಮ್ಮತಿ ಮತ್ತು ಶೌಚಾಲಯ ನಿರ್ಮಾಣಕ್ಕೆ ದಿಢೀರ್ ಶಂಕು ಸ್ಥಾಪನೆ ನೆರವೇರಿಸಿದರು.ನಗರ ಪ್ರದಕ್ಷಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕೇಂದ್ರವಾದ ಚಿಕ್ಕಬಳ್ಳಾಪುರ ನಗರದಲ್ಲಿ ಸಂಪರ್ಕ ರಸ್ತೆಗಳ ಅಭಿವೃದ್ಧಿ ಆಗಿಲ್ಲ. ನಗರದಿಂದ ಹೊರವಲಯದ ಮುಸ್ಟೂರಿನ ಕೆರೆ ಅಂಚಿನವರೆಗೆ ಇರುವ ರಸ್ತೆಯ ಅಧ್ವಾನವನ್ನು ಕಂಡರೂ ಕೂಡ ಯಾವೊಬ್ಬ ಜನಪ್ರತಿನಿಧಿಯೂ ಸಹ ಕಳೆದ 8-10 ವರ್ಷಗಳಿಂದ ಸರಿಪಡಿಸುವ ಕೆಲಸ ಮಾಡಿಲ್ಲ. ಈ ರಸ್ತೆಯು ಸುತ್ತ ಮುತ್ತಲಿನ 30 ಕ್ಕೂ ಹೆಚ್ಚಿನ ಹಳ್ಳಿಗಳಿಗೆ ನಗರ ಸಂಪರ್ಕ ರಸ್ತೆಯಾಗಿದ್ದು, ಈಶಾ ಫೌಂಡೇಷನ್ ನ ಆದಿಯೋಗಿ ಶಿವನ ಪ್ರತಿಮೆಯ ಬಳಿಗೆ ತೆರಳುವ ಮಾರ್ಗಗಳಲ್ಲಿ ಒಂದಾಗಿದೆ ಎಂದರು.
ನಗರದ ಎರಡನೇ ವಾರ್ಡ್ ನ ವಾಪಸಂದ್ರದ ಉತ್ತರ ಬಡಾವಣೆಗೆ ಮತ್ತು ರೇಷ್ಮೇಗೂಡು ಮಾರುಕಟ್ಟೆ ರಸ್ತೆಯದ್ದು ಕೂಡ ಇದೇ ಪಾಡಾಗಿದೆ. ಹಾಗೆಯೇ ನಗರದ ಆರನೇ ವಾರ್ಡ್ ನ ಪ್ರಶಾಂತನಗರದ ದಿನ್ನೆಹೊಸಹಳ್ಳಿ ರಸ್ತೆಯೂ ಕೂಡ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಮತ್ತು ನಗರಕ್ಕೆ ಹಾಗೂ ಈಶಾ ಫೌಂಡೇಷನ್ ನ ಆದಿಯೋಗಿ ಶಿವನ ಪ್ರತಿಮೆಯ ಬಳಿಗೆ ತೆರಳುವ ಮಾರ್ಗಗಳಲ್ಲಿ ಮತ್ತೊಂದಾಗಿದೆ. ಈ ರಸ್ತೆಗಳನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದು, ಇವೆಲ್ಲವುಗಳನ್ನು ಮಾಮೂಲಿ ಸ್ಥಿತಿಗೆ ತರಲು 10 ಕೋಟಿಯಷ್ಟು ಅನುದಾನ ಬೇಕಾಗಿದೆ. ನಗರ ಹೊರವಲಯದ ಅಭಿವೃದ್ಧಿಗೆ 100 ಕೋಟಿ ರು. ಅನುದಾನ ಬೇಕಿದೆ. ನಾನೊಬ್ಬ ಜವಾಬ್ದಾರಿಯುತ ಶಾಸಕನಾಗಿ ಇದಕ್ಕಾಗಿ ಯೋಜನೆ ಸಿದ್ಧಪಡಿಸಿದ್ದು ಸ್ಥಳ ವೀಕ್ಷಣೆಗೆ ಬಂದಿದ್ದೇನೆ ಎಂದರು.ನಗರದ 6ನೇ ವಾರ್ಡಿನಲ್ಲಿ ವಾಸಿಸುವ ನಿವಾಸಿಗಳಿಗೆ ಇದುವರೆಗೂ ಯಾವ ಜನ ಪ್ರತಿನಿಧಿಯೂ ಕನಿಷ್ಠ ಶೌಚಾಲಯ ವ್ಯವಸ್ಥೆ ಮಾಡಿಲ್ಲ. ಇಲ್ಲಿ ನೂರು ಮನೆಗಳಿದ್ದರೂ, ಮೋರಿಗಳು ಗಬ್ಬುನಾತ ಬೀರುತ್ತಿವೆ. ಅವುಗಳ ಸ್ವಚ್ಛತೆ ಮರೀಚಿಕೆಯಾಗಿದೆ. ‘ನಮಸ್ತೆ ಚಿಕ್ಕಬಳ್ಳಾಪುರ’ದ ಭಾಗವಾಗಿ ವಾರ್ಡ್ ವಾರು ಮನೆಮನೆ ಭೇಟಿಯ ವೇಳೆ ಸ್ಥಳೀಯ ನಿವಾಸಿಗಳೇ ಇದನ್ನು ನನ್ನ ಗಮನಕ್ಕೆ ತಂದಿದ್ದಾರೆ. ಕೂಡಲೇ ಆರು ಗುಂಪು ಶೌಚಾಲಯ ( 3 ಮಹಿಳೆಯರಿಗೆ,3 ಪುರುಷರಿಗೆ ) ಮತ್ತು ಮೂರು ಮೂತ್ರಾಲಯ ನಿರ್ಮಿಸಲು ದಿಢೀರ್ ಕ್ರಮ ಕೈಗೊಂಡ ನಾನು ತಕ್ಷಣವೇ ಗುದ್ದಲಿ ಪೂಜೆ ನೆರವೇರಿಸಿದ್ದು, ಮೋಲ್ಡ್ ವೆಂಕಟೇಶ್ ಎಂಬ ಸ್ಥಳೀಯ ನಿವಾಸಿಗೆ 20 ದಿನದಲ್ಲಿ ಶೌಚಾಲಯ ನಿರ್ಮಿಸುವ ಜವಾಬ್ದಾರಿಯನ್ನು ನಗರಸಭೆ ಅಧಿಕಾರಿಗಳ ಸಮಕ್ಷಮದಲ್ಲಿ ನೀಡಲಾಗಿದೆ. ಇದು ನನ್ನ ಅಭಿವೃದ್ಧಿಯ ಮಾರ್ಗ ಎಂದು ಹೇಳಿದರು.
ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿಗೆ ತಿರುಗೇಟು ಕೊಟ್ಟ ಶಾಸಕ:ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರು ಚಿಂತಾಮಣಿಗೆ ಸರ್ಕಾರಿ ಇಂಜನಿಯರಿಂಗ್ ಕಾಲೇಜು ತಂದಿದ್ದು, ಈ ಶೈಕ್ಷಣಿಕ ವರ್ಷದಿಂದ ಕಾರ್ಯಾರಂಭಿಸಲಿದೆ. ಅಭಿವೃದ್ಧಿಯನ್ನು ಹೇಳದೇ ಮಾಡುತ್ತಿರುವ ಸಚಿವ ಡಾ.ಎಂ.ಸಿ.ಸುಧಾಕರ್ ರವರ ಮೇಲೆ ಬುಧವಾರ ಪ್ರತಿಭಟನೆಯ ವೇಳೆ ತಲೆ ತಲೆ ಚಚ್ಚಿಕೊಂಡು ಟೀಕೆ ಮಾಡಿರುವ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದರು.ನಗರಸಭೆ ಉಸ್ತುವಾರಿ ಪೌರಾಯುಕ್ತ ಹಾಗೂ ಪರಿಸರ ಅಭಿಯಂತರ ಉಮಾಶಂಕರ್ ಮತ್ತು ನಗರಸಭೆ ಅಧಿಕಾರಿಗಳು, ಮುಖಂಡರಾದ ಪಿ.ಎಂ. ರಘು ವಿನಯ್ ಬಂಗಾರಿ, ಡ್ಯಾನ್ಸ್ ಶ್ರೀನಿವಾಸ್, ನಾಗಭೂಷಣ್, ಪೆದ್ದಣ್ಣ, ನಾರಾಯಣಮ್ಮ, ಮಂಗಳಾ ಪ್ರಕಾಶ್, ಷಾಹೀದ್,ಅಲ್ಲು ಅನಿಲ್, ಮತ್ತಿತರರು ಇದ್ದರು.ಶಾಸಕನಾಗಿ ಸಮರ್ಪಕ ಕೆಲಸ ನಿರ್ವಹಣೆ:
ನಾನು ಶಾಸಕನಾಗಿ ಆಯ್ಕೆಯಾದ 12 ತಿಂಗಳಲ್ಲಿ ಸಾರ್ವಜನಿಕರಿಗೆ ಅದರಲ್ಲೂ ಬಡತನ ರೇಖೆಗಿಂತ ಕೆಳಗಿರುವವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದ್ದೇನೆ. ಬೇರೆ ಎರಡು ಕ್ಷೇತ್ರಗಳಲ್ಲಿ ಉಳಿಕೆಯಾಗಿದ್ದ ಕೊಳಚೆ ಮಂಡಳಿಯ ಅನುದಾನದ 300 ಮನೆಗಳನ್ನು ಚಿಕ್ಕಬಳ್ಳಾಪುರಕ್ಕೆ ತಂದಿದ್ದೇನೆ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ದೂರದೃಷ್ಟಿಯ ನೆರವಿನಲ್ಲಿ 6ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದು, ಇದರಲ್ಲಿ 10 ಕೊಠಡಿ, ನೆಲಮಾಳಿಗೆಯಲ್ಲಿ ಒಂದು ಗ್ರಂಥಾಲಯ,ಜಿಮ್ ಕಟ್ಟಲು ವ್ಯವಸ್ಥೆ ಆಗಿದೆ ಎಂದರು.