ವಯೋಸಹಜ ಕಾರಣದಿಂದ ಮೃತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಮಕ್ಕಳು ₹40 ಲಕ್ಷಕ್ಕಾಗಿ ಬೇಡಿಕೆಯಿಟ್ಟು ಶವಸಂಸ್ಕಾರ ಮಾಡದೆ ತಿರಸ್ಕರಿಸಿರುವ ಅಮಾನವೀಯ ಘಟನೆ ದೊಡ್ಡಕುರುಗೋಡು ಗ್ರಾಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದಲ್ಲಿ ನಡೆದಿದೆ.
ಗೌರಿಬಿದನೂರು (ಚಿಕ್ಕಬಳ್ಳಾಪುರ) : ವಯೋಸಹಜ ಕಾರಣದಿಂದ ಮೃತಪಟ್ಟ ತಾಯಿಯ ಶವಸಂಸ್ಕಾರ ಮಾಡಲು ಮಕ್ಕಳು ₹40 ಲಕ್ಷಕ್ಕಾಗಿ ಬೇಡಿಕೆಯಿಟ್ಟು ಶವಸಂಸ್ಕಾರ ಮಾಡದೆ ತಿರಸ್ಕರಿಸಿರುವ ಅಮಾನವೀಯ ಘಟನೆ ದೊಡ್ಡಕುರುಗೋಡು ಗ್ರಾಮದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ದೊಡ್ಡಕುರುಗೋಡು ಗ್ರಾಮದಲ್ಲಿ ನಡೆದಿದೆ.
ಅನಂತಕ್ಕ (90) ಮೃತ ವೃದ್ಧೆ. ಮೃತರಿಗೆ ಇಬ್ಬರು ಗಂಡು ಹಾಗೂ 4 ಹೆಣ್ಣು ಮಕ್ಕಳಿದ್ದಾರೆ. ಮೃತರ ಹೆಸರಿನಲ್ಲಿದ್ದ 2 ಎಕರೆ ಜಮೀನಿನ್ನು ಕೆಐಡಿಬಿ ವಶಪಡಿಸಿಕೊಂಡು ₹93,75,000 ಅನಂತಕ್ಕನಿಗೆ ಪರಿಹಾರ ನೀಡಿತ್ತು. ಪರಿಹಾರದ ಹಣದಲ್ಲಿ ಹೆಣ್ಣುಮಕ್ಕಳು ₹40 ಲಕ್ಷ ಹಣ ಪಡೆದಿದ್ದರು. ಇದರಿಂದಾಗಿ ಅನಂತಕ್ಕ ಕಡಗತ್ತೂರಿನಲ್ಲಿರುವ ಮಗಳ ಮನೆಯಲ್ಲೆ ವಾಸವಾಗಿದ್ದರು.
ಬುಧವಾರ ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ತಾಯಿಯನ್ನು ನೋಡಲು ದೊಡ್ಡಕುರುಗೋಡು ಗ್ರಾಮಕ್ಕೆ ಬಂದ ಗಂಡು ಮಕ್ಕಳಿಬ್ಬರು ತಂದೆಯ ಸಮಾಧಿ ಪಕ್ಕದಲ್ಲಿ ಶವಸಂಸ್ಕಾರ ನೆರವೇರಿಸಲು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಆಸ್ತಿಯಲ್ಲಿ ಪಾಲು ಪಡೆದ ಸಹೋದರಿಯರು ₹40 ಲಕ್ಷ ಹಣ ನೀಡಿದರೆ ಮಾತ್ರ ಶವಸಂಸ್ಕಾರಕ್ಕೆ ಅವಕಾಶ ನೀಡುವುದಾಗಿ ಪುತ್ರರು ಷರತ್ತು ವಿಧಿಸಿದ್ದಾರೆ.
ಇದರಿಂದ ಬೇರೆ ದಾರಿಕಾಣದೆ ಮೃತಳ ಮೊಮ್ಮಗಳು ಅಜ್ಜಿಯ ಶವವನ್ನು ರಾತ್ರಿಯಿಡೀ ವಿದುರಾಶ್ವತ್ಥ ಪೊಲೀಸ್ ಠಾಣೆ ಹೊರಗಿಟ್ಟು ಪ್ರಕರಣ ದಾಖಲಿಸಲು ಮುಂದಾಗಿದ್ದರು. ಈ ವಿಷಯ ತಿಳಿದು ಗುರುವಾರ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಮಹೇಶ್.ಎಸ್.ಪತ್ರಿ ಅವರು, ಮೃತರ ಮಕ್ಕಳೊಂದಿಗೆ ಮಾತನಾಡಿ ಶವವನ್ನು ಹೂಳಲು ಅವಕಾಶ ಕಲ್ಪಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.