ಗುಡಿಬಂಡೆ: ಬಾಗೇಪಲ್ಲಿ ವಿಧಾಸನಸಭಾ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿಯವರಿಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ವಿವಿಧ ಸ್ಥಾನಗಳಿಗೆ ನಾಮನಿರ್ದೇಶನಗೊಂಡವರು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದಾರೆ.
ಈ ಸಮಯದಲ್ಲಿ ಕೆಡಿಪಿ ಸದಸ್ಯ ಎಚ್.ಪಿ.ಲಕ್ಷ್ಮೀನಾರಾಯಣ ಮಾತನಾಡಿ, ಕ್ಷೇತ್ರದಲ್ಲಿ ಸತತವಾಗಿ ಮೂರು ಬಾರಿ ಶಾಸಕರಾಗಿರುವ ಸುಬ್ಬಾರೆಡ್ಡಿಯವರು, ಯಾವುದೇ ಆಸೆ, ಆಮಿಷಗಳಿಗೆ ಒಳಗಾದ ವ್ಯಕ್ತಿಯಲ್ಲ. ಅವರು ಮನಸ್ಸು ಮಾಡಿದ್ದರೆ ಈ ಹಿಂದೆ ಬಿಜೆಪಿ ಜೊತೆಗೆ ಹೋಗಿದ್ದರೆ ಅಂದೇ ಸಚಿವರಾಗುತ್ತಿದ್ದರು. ಅವರಿಗೆ ಸ್ವ ಹಿತಾಸಕ್ತಿಗಿಂತ, ಪಕ್ಷದ ಮೇಲಿನ ನಿಷ್ಠೆ ದೊಡ್ಡದು. ಈ ಕಾರಣದಿಂದ ತನಗೆ ಸಚಿವ ಸ್ಥಾನಕ್ಕಿಂತ ಪಕ್ಷ ಮುಖ್ಯ ಎಂದು ಕಾಂಗ್ರೆಸ್ ಪಕ್ಷದಲ್ಲಿಯೇ ಉಳಿದು ತಮ್ಮ ಪ್ರಾಮಾಣಿಕತೆಯನ್ನು ತೋರಿಸಿದ್ದರು. ಈ ಬಾರಿಯ ಕಾಂಗ್ರೆಸ್ ಆಡಳಿತದಲ್ಲಿ ಸುಬ್ಬಾರೆಡ್ಡಿಯವರಿಗೆ ಮೊದಲನೇ ಬಾರಿಗೆ ಸಚಿವ ಸ್ಥಾನ ಸಿಗುವ ಭರವಸೆ ಇತ್ತು. ಅಂದು ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ಸಹ ತ್ಯಜಿಸಿದಂತಹವರು ಎರಡನೇ ಅವಧಿಯಲ್ಲಿ ಸಚಿವ ಸ್ಥಾನ ನೀಡುತ್ತಾರೆಂಬ ಭರವಸೆಯಿತ್ತು. ಇದೀಗ ಅದೂ ಸಹ ಹುಸಿಯಾಗಿದೆ. ಇದು ನಮ್ಮ ಮನಸ್ಸಿಗೆ ತುಂಬಾ ನೋವು ತಂದುಕೊಟ್ಟಿದೆ. ಆದ ಕಾರಣ ಸುಬ್ಬಾರೆಡ್ಡಿಯವರು ಶಿಫಾರಸ್ಸಿನ ಮೇರೆಗೆ ನಮಗೆ ಸಿಕ್ಕ ನಾಮ ನಿರ್ದೇಶನ ಸ್ಥಾನಗಳಿಗೆ ರಾಜೀನಾಮೆ ನೀಡುತ್ತಿದ್ದೇವೆ ಎಂದರು.ಈ ವೇಳೆ ರಿಯಾಜ್ ಪಾಷ, ಗುರುಮೂರ್ತಿ, ಇಂದಿರಾ ಅಶ್ವತ್ ರೆಡ್ಡಿರವರು ಕೆಡಿಪಿ ನಾಮನಿರ್ದೇಶನ ಸ್ಥಾನಗಳಿಗೆ ಹಾಗೂ ರಾಜರೆಡ್ಡಿ ಪಿ.ಎಲ್.ಡಿ.ಬ್ಯಾಂಕ್ ನಾಮನಿರ್ದೇಶನ ಸ್ಥಾನಕ್ಕೆ, ಬಾಲಕೃಷ್ಣಾರೆಡ್ಡಿ ಟಿ.ಎ.ಪಿ.ಸಿ.ಎಂ.ಎಸ್ ನಾಮಿನಿ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.