ಸೇತುವೆ ನಿರ್ಮಾಣಕ್ಕೆ ಚಾಲನೆ । ಚಿಕ್ಕಂಗಳ ಆಸ್ಪತ್ರೆಗೆ ₹65ಲಕ್ಷದಲ್ಲಿ ಸುಸಜ್ಜಿತ ಕಟ್ಟಡ । ಗ್ರಾಪಂ ನೂತನ ಕಟ್ಟಡಕ್ಕೆ ₹25 ಲಕ್ಷ
ಏಕಕಾಲದಲ್ಲಿ ಬೀರೂರು ಕೆರೆಯ 14 ಕಿ.ಮೀ. ಲೈನಿಂಗ್ ಕಾಮಗಾರಿಗೆ ₹21 ಕೋಟಿ ನೀಡಿದ್ದು. ಮುಂದಿನ ದಿನಗಳಲ್ಲಿ ಸರ್ಕಾರದಿಂದ ₹50 ಕೋಟಿ ತಂದು ಚಿಕ್ಕಂಗಳ ಮತ್ತು ಕಸಬಾ ಹೋಬಳಿಗಳ ಕೆರೆಗಳ ದುರಸ್ತಿಗೆ ಮಾಡಲಾಗುವುದು ಎಂದು ಶಾಸಕ ಕೆ. ಎಸ್.ಆನಂದ್ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ಚಿಕ್ಕಂಗಳ ಗ್ರಾಮದಲ್ಲಿ ಕೆ.ಎಂ.ರಸ್ತೆಯಿಂದ ಎಮ್ಮೇ ದೊಡ್ಡಿಗೆ ತೆರಳುವ ರಸ್ತೆಗೆ ₹1.15 ಕೋಟಿ ವೆಚ್ಚದಲ್ಲಿ ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿ ಮಾತನಾಡಿದರು. ತಾವು ನೀಡಿದ ಭರವಸೆಯಂತೆ ಚಿಕ್ಕಂಗಳ ಗ್ರಾಮದ ಆಸ್ಪತ್ರೆಗೆ ₹65ಲಕ್ಷದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣವಾಗಿದೆ. ಗ್ರಾಪಂ ನೂತನ ಕಟ್ಟಡಕ್ಕೆ ₹25 ಲಕ್ಷ ನೀಡಲಾಗಿದೆ ಎಂದರು.ಅಂದೇನಹಳ್ಳಿ, ಕನ್ನೇನಹಳ್ಳಿ ಮತ್ತು ಚಿಕ್ಕಂಗಳ ಗ್ರಾಮದಲ್ಲಿ ಸಾಕಷ್ಟು ರಸ್ತೆಗಳ ಮತ್ತು ಚರಂಡಿ ನಿರ್ಮಾಣ ಆಗಿದ್ದು. ಕನ್ನೇನಹಳ್ಳಿಗೆ ತೆರಳುವ 2 ಕಿ.ಮೀ. ರಸ್ತೆಯನ್ನು ₹2 ಕೋಟಿಯಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.
ಮದಗದಕೆರೆ ಅಚ್ಚುಕಟ್ಟುಅಭಿವೃದ್ಧಿಗೆ ಬಿಡುಗಡೆಯಾದ ₹50 ಕೋಟಿಯಲ್ಲಿ ಮದಗದ ಕೆರೆಗೆ ₹9 ಕೋಟಿ ಕೆರೆಯ 28 ಮಡಬಾಯಿಗಳಿಗೆ ₹2 ಕೋಟಿ ನೀಡಲಾಗಿದೆ. ಮಾದಿನ ಕಟ್ಟೆ ಚಾನಲ್ ಕೆಲ ಭಾಗ ಮುಚ್ಚಿ ಹೋಗಿದೆ. ಅದನ್ನು ಸರ್ವೆ ಮಾಡಿಸಲಾಗುತ್ತಿದೆ. ಚಿಕ್ಕಂಗಳ ಮಾದಿನಕಟ್ಟೆ ಅಭಿವೃದ್ಧಿ ಮಾಡಿಸಿ ಕೊಡುತ್ತೇನೆ ಎಂದು ಭರವಸೆ ನೀಡಿದರು.
ನನಗೆ ರಾಜಕೀಯ ಜೀವನ ನೀಡಿದ್ದು ಚಿಕ್ಕಂಗಳ ಗ್ರಾಮ, ಚಗ್ಗೆರೆಯನ್ನು ಅಳತೆ ಮಾಡುತ್ತಿದ್ದು ರೈತರ ಜಾಗ ಬಿಟ್ಟು ಏರಿ ನಿರ್ಮಾಣ ಮಾಡುವಂತೆ ಕ್ರಮ ವಹಿಸಲಾಗುವುದು. ಕೆರೆ ರಕ್ಷಣೆ ನಮ್ಮೆಲ್ಲರ ಹೊಣೆ ಎಂದರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಕಾಶನಾಯ್ಕ ಮಾತನಾಡಿ ಪಂಚಾಯ್ತಿ ಸುತ್ತಮುತ್ತಲಿನ ಬಡ ಜನರು ಸಾಮಾನ್ಯ ವರ್ಗ ದವರು ಶುಭ ಕಾರ್ಯ ಮಾಡಲು ಸಮುದಾಯ ಭವನಕ್ಕೆ ₹1.50 ಕೋಟಿ ನೀಡಬೇಕು ಎಂದರು.
---
ಕಡೂರು ವಿಧಾನಸಭಾ ಕ್ಷೇತ್ರದ ಚಿಕ್ಕಂಗಳ ಗ್ರಾಮದಲ್ಲಿ ಶಾಸಕ ಕೆ.ಎಸ್. ಆನಂದ್ ₹1.15 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.