ಕನ್ನಡಪ್ರಭ ವಾರ್ತೆ ಶಿರಾ ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ಪೂರ್ವ ಪ್ರಾಥಮಿಕ ಹಂತದಿಂದಲೇ ಮಗುವಿನ ಸರ್ವತೋಮುಖ ಬೆಳವಣಿಗೆ ಆಗುವುದು ಬಹಳ ಮುಖ್ಯವಾಗಿದ್ದು, ಆ ನಿಟ್ಟಿನಲ್ಲಿ ಗ್ಲೋಬಲ್ ಕಿಡ್ಸ್ ಶಾಲೆಯು ಮಹತ್ತರ ಪಾತ್ರವನ್ನು ವಹಿಸುತ್ತಿದೆ ಎಂದು ಶಿರಾ ನಗರದ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದರು. ಅವರು ನಗರದ ಸೋಮೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಗ್ಲೋಬಲ್ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯ ಎಂಟನೇ ವರ್ಷದ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಾದವರು ಮಾತೃ ಹೃದಯದಿಂದ ಮಕ್ಕಳ ಕ್ರಿಯಾಶೀಲ ಪ್ರಗತಿಗೆ ಪ್ರಯತ್ನಿಸುವುದು ಬಹಳ ಮುಖ್ಯ. ಆ ಕೆಲಸ ಗ್ಲೋಬಲ್ ಕಿಡ್ಸ್ ಶಾಲೆಯ ಶಿಕ್ಷಕರಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರಾದ ಬಸವರಾಜು ಎನ್ ಅವರು ಮಾತನಾಡಿ, ಈ ಸಮಾಜದಲ್ಲಿ ಮೊದಲಿನಿಂದಲೂ ತಂದೆ ತಾಯಿಗಳಿಗಿಂತಲೂ ಹೆಚ್ಚಿನ ಗೌರವ ಶಿಕ್ಷಕರ ಮೇಲೆ ಇದೆ. ಗುರುವಿಗೆ ದೇವರ ಸ್ಥಾನವನ್ನು ನೀಡಲಾಗಿದೆ. ಅಂತಹ ಮಹತ್ವಪೂರ್ಣ ಸ್ಥಾನದಲ್ಲಿರುವ ಗುರುಗಳು ಮನೋವೈಜ್ಞಾನಿಕವಾಗಿ ಮಗುವಿನ ಮನಸ್ಥಿತಿಯ ಅರಿತು ಮಗುವಿಗೆ ಭಯ, ಆತಂಕ ಇಲ್ಲದಂತೆ ಪ್ರೀತಿ ಪೂರ್ವಕವಾಗಿ ಬೋಧಿಸಬೇಕು. ಮಕ್ಕಳನ್ನು ಪೋಷಕರು ಟಿವಿ, ಮೊಬೈಲ್ಗಳಿಂದ ದೂರ ಇರಿಸಬೇಕೆಂದು ಅವರು ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಿರಾ ತಾಲೂಕು, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷರಾದ ಚಿದಾನಂದ ಕೆ ಎಸ್ ಅವರು, ಮಗುವಿಗೆ ಕೇವಲ ಅಂಕಗಳ ಆಧಾರಿತ ಶಿಕ್ಷಣ ಕೊಟ್ಟರೆ ಸಾಲದು, ಮೌಲ್ಯಯುತ ವ್ಯಕ್ತಿತ್ವ ನಿರ್ಮಾಣ ಆಗುವಂತಹ ಶಿಕ್ಷಣವೂ ಬೇಕಾಗಿದೆ. ಏಕೆಂದರೆ ನೈತಿಕತೆ, ಮಾನವೀಯತೆ, ಒಳ್ಳೆಯದು- ಕೆಟ್ಟದ್ದನ್ನು ಪರಾಮರ್ಶಿಸುವ ಮನೋಧರ್ಮವಿಲ್ಲದೆ ಯಾವ ಕೋರ್ಸ್, ಯಾವ ಶಿಕ್ಷಣ ಮುಗಿಸಿದರೂ ಆ ವ್ಯಕ್ತಿ ಆನಂದ ಮತ್ತು ಯಶಸ್ಸಿನ ಜೀವನ ನಡೆಸಲಾಗದು. ಹಾಗಾಗಿ ಪ್ರಾರಂಭಿಕ ಹಂತದಿಂದಲೇ ಜೀವನ ಶಿಕ್ಷಣ ನೀಡುವುದು ಬಹಳ ಮುಖ್ಯ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ನಂದಿನಿ ಪ್ರವೀಣ್ ಕುಮಾರ್ ಅವರು ವಿಜೇತ ಪೋಷಕರಿಗೆ ಬಹುಮಾನ ವಿತರಣೆ ಮಾಡಿದರು. ರಾಮಸ್ವಾಮಿ ಕೆ ಎಸ್, ಭಾನು ಪ್ರತಾಪ್ ವೈ.ಆರ್, ಪುನೀತ್ ಕುಮಾರ್ ವೈ.ಆರ್ ಇವರು ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಎಸ್.ಬಿ.ಎಂ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಆದಂತಹ ಭಾರತಿ ವೈ.ಆರ್, ಕುಮಾರಿ ಮೇನಿತ, ಟ್ರಸ್ಟಿನ ಅಧ್ಯಕ್ಷರಾದ ಶಿವರಾಜು ಎಲ್.ಹೆಚ್, ಶೇಖ್ ಮಹಮ್ಮದ್ ಅಲಿ, ಶಾಲೆಯ ಶಿಕ್ಷಕಿಯರಾದ ಫಿಜಾ, ರೇಖಾ, ಕವಿತಾ ಸೇರಿದಂತೆ ಪೋಷಕರು, ಸಾರ್ವಜನಿಕರು, ಮಕ್ಕಳು ಭಾಗವಹಿಸಿದ್ದರು.