ಸೌಲಭ್ಯ ನೀಡಿದರೂ ಶಾಲೆಗೆ ಗೈರಾಗುತ್ತಿರುವ ಮಕ್ಕಳು: ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ

KannadaprabhaNewsNetwork | Published : Jun 5, 2025 1:33 AM
ಪಟ್ಟಣದ ಒಟ್ಟು ೪೭ ಶಾಲೆಗಳಿದ್ದು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ವಿದ್ಯಾರ್ಥಿ ವೇತನ, ಬಿಸಿಯೂಟ, ಮಾತ್ರೆ, ಹಾಲು ಹಣ್ಣು, ಶೂ, ಮೊಟ್ಟೆ ನೀಡಲಾಗುತ್ತದೆ. ಆದರೂ ಶಾಲೆಗೆ ಮಕ್ಕಳು ಗೈರಾಗುತ್ತಿದ್ದಾರೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ಪ್ರಗತಿ ಪರಿಶೀಲನಾ ಸಬೆ । ಶಾಲೆಗಳ ಸಮಸ್ಯೆ ತೆರೆದಿಟ್ಟ ಶಿಕ್ಷಕರು । ಶಿಕ್ಷಣ ಇಲಾಖೆಯ ಸಭೆ

ಕನ್ನಡಪ್ರಭ ವಾರ್ತೆ ಮಲೇಬೆನ್ನೂರು

ಪಟ್ಟಣದ ಒಟ್ಟು ೪೭ ಶಾಲೆಗಳಿದ್ದು ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕ, ವಿದ್ಯಾರ್ಥಿ ವೇತನ, ಬಿಸಿಯೂಟ, ಮಾತ್ರೆ, ಹಾಲು ಹಣ್ಣು, ಶೂ, ಮೊಟ್ಟೆ ನೀಡಲಾಗುತ್ತದೆ. ಆದರೂ ಶಾಲೆಗೆ ಮಕ್ಕಳು ಗೈರಾಗುತ್ತಿದ್ದಾರೆ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಕೃಷ್ಣಪ್ಪ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಪುರಸಭೆಯ ಸಭಾಂಗಣದಲ್ಲಿ ಅಧ್ಯಕ್ಷ ಹನುಮಂತಪ್ಪ ಬುಧವಾರ ಪ್ರಥಮ ಬಾರಿಗೆ ಶಿಕ್ಷಣ ಇಲಾಖೆಯ ಎಲ್ಲಾ ಮುಖ್ಯ ಶಿಕ್ಷಕರ ಸಭೆ ಕರೆದು ಸುಮಾರು ಎರಡೂವರೆ ಗಂಟೆಗಳ ಕಾಲ ಪ್ರಗತಿ ಪರಿಶೀಲನೆ ನಡೆಸಿ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಕೃಷ್ಣಪ್ಪ ಮಾತನಾಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ದುರುಗಪ್ಪ ಮಾತನಾಡಿ, ಪುರಸಭಾ ಅಧ್ಯಕ್ಷರು ಮುಖ್ಯ ಶಿಕ್ಷಕರ ಸಬೇ ಕರೆದು ಚರ್ಚೆ ನಡೆಸಿರುವುದು ಮೆಚ್ಚುಗೆ ವಿಚಾರವಾಗಿದೆ. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ಶೇ. ೮೦ ಪಠ್ಯ ಪುಸ್ತಕಗಳು ಬಂದಿವೆ. ಮಾರಾಟ ಮಾಡುವ ಶಾಲೆಗಳಿಗೆ ಶೇ. ೭೦ ಬಂದಿವೆ. ಖಾಸಗಿ ಶಾಲೆಗಳವರು ಸಂಜೆ ೪ ಗಂಟೆಗೆ ಶಾಲಾ ಮಕ್ಕಳನ್ನು ಮನೆಗೆ ಬಿಡುವ ಬಗ್ಗೆ ದೂರು ಇದ್ದು. ಸರ್ಕಾರಿ ಶಾಲೆಯ ಶಿಕ್ಷಕರು ಸಮಯ ಪಾಲನೆ ಮಾಡುವ ಅಗತ್ಯವಿದೆ ಎಂದರು.

ತಾಲೂಕು ಪ್ರೌಢಶಾಲೆಗಳಿಗೆ ೧೦೦, ಪ್ರಾಥಮಿಕ ಶಾಲೆಗಳಿಗೆ ೩೬ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲು ಸೂಚನೆ ಇದೆ ಎಂದರು.

ಪಟ್ಟಣದ ಖಾಸಗಿ, ಅನುದಾನ ರಹಿತ, ಅನುದಾನ ಸಹಿತ ಹಾಗೂ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳ ಮುಖ್ಯಸ್ಥರು ಆಗಮಿಸಿ ಶಾಲೆಗಳಿಗೆ ಕಾಂಪೌಂಡ್ ಇಲ್ಲ, ಶೌಚಾಲಯ ಇಲ್ಲ, ಕ್ರೀಡಾಂಗಣವಿಲ್ಲ, ಮೈದಾನಕ್ಕೆ ಸಿಸಿ ಕ್ಯಾಮೆರಾ ಹಾಕಿ ಅನೈತಿಕ ಚಟುವಟಿಕೆಗಳನ್ನು ನಿಯಂತ್ರಿಸಿ, ಸ್ವಚ್ಚತೆಗೆ ಸೌಡಿಗಳನ್ನು ಕಳಿಸಿ, ಖಾಸಗಿ ಅಕ್ಕಿ ಗಿರಣಿ ಧೂಳು ಮಕ್ಕಳ ಊಟದ ತಟ್ಟೆಯಲ್ಲಿ ಬೀಳುತ್ತೆ, ಶಾಲಾ ನಿವೇಶನವನ್ನು ಹದ್ದುಬಸ್ತು ಮಾಡಿ, ಶಾಲಾ ಬಳಿ ಬ್ಯಾರಿಕೇಡ್ ಹಾಕಿ, ಪುರಾತನ ಗಾಂಧೀ ಭವನಕ್ಕೆ ಕಾಯಕಲ್ಪ ನೀಡಿ, ಶಾಲೆ ಬಳಿ ತಂಬಾಕು ಮಾರಾಟ ಮಾಡುವ ಅಂಗಡಿಗಳ ತೆರವು ಮಾಡಬೇಕು ಎಂದು ಮುಖ್ಯ ಶಿಕ್ಷಕರು, ಪ್ರಾಂಶುಪಾಲರು ತಮ್ಮ ಸಮಸ್ಯೆ ತೋಡಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಹನುಮಂತಪ್ಪ ಮಾತನಾಡಿ, ೩೫೦೦೦ ಜನಸಂಖ್ಯೆ ಹೊಂದಿದ ಪಟ್ಟಣದಲ್ಲಿ ನೀರಗಂಟಿಗಳು ಸೇರಿ ಅನೇಕ ಸಮಸ್ಯೆಗಳಿವೆ, ಪಟ್ಟಣದ ಅಭಿವೃಧ್ದಿಗೆ ಸರ್ವರ ಸಹಕಾರ ಬೇಕು. ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸೋಣ ಎಂದರು.

ಪುರಸಭಾ ಉಪಾಧ್ಯಕ್ಷೆ ವಿಜಯಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಪ್ರಬಾರಿ ಮುಖ್ಯಾಧಿಕಾರಿ ಜಯಲಕ್ಷ್ಮಿ, ಅಕ್ಷರ ದಾಸೋಹದ ವೀರೆಶ್, ಎಸ್‌ಡಿಎಂಸಿ ಪದಾಧಿಕಾರಿಗಳಾದ ಬಸವರಾಜ್, ಸಾಬಿರ್‌ಅಲಿ, ಶಾಲೆಗಳ ಮುಖ್ಯಸ್ಥರಾದ ಭಾಗ್ಯ, ಲೋಕೆಶ್‌ನಾಯ್ಕ, ಜಗದೀಶ್, ಕರಿಬಸಪ್ಪ ಬಸಲಿ, ರೇಷ್ಮಾ, ಆನಂದ್ ಭೂತರೆಡ್ಡಿ, ಸಾಕಮ್ಮ, ರೇವಣಸಿದ್ದಪ್ಪ ಅಂಗಡಿ, ಶಿವಕುಮಾರ್, ದಂಡಿ ತಿಪ್ಪೇಸ್ವಾಮಿ ಮತ್ತಿತರರು ಸಮಸ್ಯೆ ಹಂಚಿಕೊಂಡರು.