ಮಕ್ಕಳಿಗೆ ವೈಜ್ಞಾನಿಕ ಮನೋಭಾವ ಅಗತ್ಯ: ಗೌಡಪ್ಪ ಖೋತ

KannadaprabhaNewsNetwork | Published : Jan 12, 2024 1:45 AM

ವಿಜ್ಞಾನವಸ್ತು ಪ್ರದರ್ಶನ ಉದ್ಘಾಟಿಸಿದ ಕ್ಷೇತ್ರ ಸಮನ್ವಯಾಧಿಕಾರಿ ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ

ಕನ್ನಡಪ್ರಭ ವಾರ್ತೆ ಅಥಣಿ

ವಿಜ್ಞಾನ ಮತ್ತು ತಂತ್ರಜ್ಞಾನ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಕಲಿಕೆಯ ಸಂದರ್ಭದಲ್ಲಿ ಪ್ರತಿಯೊಂದು ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿ, ಆಧುನಿಕ‌ ಜಗತ್ತಿಗೆ ಹೊಂದಿಕೊಳ್ಳುವ ರೀತಿ ಮಕ್ಕಳನ್ನು ಸದೃಢರನ್ನಾಗಿಸುವ ಉದ್ದೇಶದಿಂದ‌ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಿರುವುದು ಹೆಮ್ಮೆಯ ವಿಷಯ ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ ಹೇಳಿದರು.

ಗುರುವಾರ ಸ್ಥಳೀಯ ವಿವೇಕಾನಂದ ವಿದ್ಯಾ ವಿಕಾಸ ಸಂಸ್ಥೆಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡ‌ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿ, ವಿಜ್ಞಾನವಸ್ತು ಪ್ರದರ್ಶನದ ಮೂಲಕ ಮಕ್ಕಳಲ್ಲಿ ವೈಜ್ಞಾನಿಕತೆಯ ಕಡೆಗೆ ಆಸಕ್ತಿ ಮೂಡಿಸುವುದು ಶ್ಲಾಘನೀಯ ಕೆಲಸ, ಇತ್ತೀಚೆಗೆ ಮಾನವ ತನ್ನ ಕೆಲಸಗಳಿಂದ ಪರಿಸರ ನಾಶಮಾಡುತ್ತಿರುವುದು ದುರಂತ, ಕೆರೆ‌, ಹಳ್ಳ, ಕೊಳ್ಳಗಳನ್ನು ನಾಶ ಮಾಡಿರುವ ಪರಿಣಾಮದಿಂದ ಹವಾಮಾನ ವೈಪರೀತ್ಯ ಉಂಟಾಗುತ್ತಿದೆ. ಇಂತಹ ಪರಿಸರಕ್ಕೆ, ವಿಜ್ಞಾನ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಮಾದರಿಗಳನ್ನು ತಯಾರಿಸಿ ಪ್ರತಿಯೊಬ್ಬರಿಗೆ ಮಾಹಿತಿ ನೀಡುತ್ತಿರುವುದು ಉತ್ತಮ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೂಹ ಸಂಪನ್ಮೂಲ ಅಧಿಕಾರಿ ವಿಠ್ಠಲ ಮಾಳಿ ಮಾತನಾಡಿ, ಏಕಾಗ್ರತೆಯಿಂದ ನಿರಂತರವಾಗಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ, ಪ್ರತಿಯೊಬ್ಬರೂ ನಿರಂತರವಾಗಿ ಕ್ರೀಯಾಶೀಲತೆಯಿಂದ ಅಧ್ಯಯನದಲ್ಲಿ ತೊಡಗಿಕೊಳ್ಳಿ ಹೊಸ ಹೊಸ ಆವಿಷ್ಕಾರಗಳ ಬಗ್ಗೆ ಆಸಕ್ತಿವಹಿಸಿ ತಿಳಿದುಕೊಳ್ಳುವ ಮೂಲಕ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ.ಡಿ. ಮೇಕನಮರಡಿ ಮಾತನಾಡಿದರು. ಇದು ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವಿ ಸಲ್ಲಿಸಿ ಇತ್ತೀಚೆಗೆ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ನೇಮಕಗೊಂಡ ಆರ್.ಎಚ್. ಕುಲಕರ್ಣಿ, ರವಿಕುಮಾರ ಪಾನಶೆಟ್ಟಿ ಅವರನ್ನು ಸಂಸ್ಥೆಯಿಂದ ಸನ್ಮಾನಿಸಿದರು.

ಈ ವೇಳೆ ಸನ್ಮಾನ ಸ್ವೀಕರಿಸಿ ಶಿಕ್ಷಕಿ ಆರ್ ಎಚ್ ಕುಲಕರ್ಣಿ ಮಾತನಾಡಿ ವಿವೇಕಾನಂದ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಸೇವೆಯನ್ನು ಸ್ಮರಿಸುವುದರ ಜೊತೆಗೆ ಎಲ್ಲಾ ಶಿಕ್ಷಕರ ಪ್ರೋತ್ಸಾಹ ಹಾಗೂ ಆಡಳಿತ ಮಂಡಳಿಯ ಅಧ್ಯಕ್ಷರ ಸಹಾಯ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು.

ಈ ವೇಳೆ ಸಂಸ್ಥೆಯ ಕಾರ್ಯದರ್ಶಿ ಲಲಿತಾ ಡಿ ಮೇಕನಮರಡಿ, ಅವಿನಾಶ ಬಿರಾದಾರ, ಅನೀಲ ಗುರವ, ಐ.ಸಿ. ಶೇಖ, ಪ್ರಶಾಂತ ಮುನ್ನೊಳ್ಳಿ, ಉಮೇಶ ಭಜಂತ್ರಿ, ಭರತೇಶ ನಂದಗಾಂವ, ಅನೀಲ ಕುಂಬಾರ, ವಿವೇಕ ಮೇಕನಮರಡಿ, ವೈ.ಜಮಾದಾರ, ಸಂಸ್ಥೆಯ ಶಿಕ್ಷಕರು, ಪಾಲಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವೈ.ಎ. ಜಮಾದಾರ ಸ್ವಾಗತಿಸಿದರು. ಗುಲ್ನಾಜ ಹಳಿಂಗಳಿ ನಿರೂಪಿಸಿದರು, ರಾಧಾಕೃಷ್ಣ ದೂಳಗಾವಿ ವಂದಿಸಿದರು.

---

ಗಮನ ಸೆಳೆದ ವಸ್ತು ಪ್ರದರ್ಶನ

ಶಾಲೆಯ ಕನ್ನಡ ಮಾಧ್ಯಮ ಹಾಗೂ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳು ಆವಿಷ್ಕರಿಸಿದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ನೀರಿನ ಸಂರಕ್ಷಣೆ, ಸೋಲಾರ್ ಸಿಸ್ಟಮ್, ಮಳೆ ಕೊಯ್ಲು, ಕಾರ್ಖಾನೆಗಳಿಂದ ಆಗುವ ದುಷ್ಪರಿಣಾಮ ಸೇರಿದಂತೆ ಅನೇಕ ವಿಜ್ಞಾನ ಆವಿಷ್ಕಾರಗಳು ಅತಿಥಿಗಳ ಗಮನ ಸೆಳೆದವು. ಅತಿಥಿಗಳು ವಿದ್ಯಾರ್ಥಿಗಳಿಂದ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.